Friday, September 20, 2024
ಸುದ್ದಿ

ನಾಡಬಾಂಬ್ ಸಿಡಿಸಿ ಮನೆ ಧ್ವಂಸಗೊಳಿಸಲು ಯತ್ನ: ಆರೋಪಿಯ ಪತ್ತೆಗಾಗಿ ವ್ಯಾಪಕ ಶೋಧನೆ – ಕಹಳೆ ನ್ಯೂಸ್

ಪುತ್ತೂರು: ಮನೆ ಮಂದಿ ಮಲಗಿದ್ದ ವೇಳೆಯಲ್ಲಿ ಮನೆಯ ಸುತ್ತ ನಾಡಬಾಂಬ್ ಸಿಡಿಸಿ ಮನೆಯನ್ನು ಧ್ವಂಸಗೊಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೋಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಆರೋಪಿಯ ಪತ್ತೆಗಾಗಿ 5 ಪೋಲೀಸ್ ತಂಡವನ್ನು ರಚಿಸಲಾಗಿದೆ. ಈ ಪೈಕಿ 2 ತಂಡಗಳು ಕೇರಳಕ್ಕೆ ತೆರಳಿರುವುದಾಗಿ ತಿಳಿದು ಬಂದಿದೆ.

ಸೋಮವಾರ ತಡರಾತ್ರಿ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯ ಎಂಬಲ್ಲಿ ನಾರಾಯಣ ಪ್ರಸಾದ್ ಅವರ ಮನೆಯಲ್ಲಿ ಈ ಘಟನೆ ನಡೆದಿತ್ತು. ಮನೆಯಲ್ಲಿ ಕೆಲಸಕ್ಕಿದ್ದ ಕೇರಳದ ವ್ಯಕ್ತಿ ಈ ದುಷ್ಕೃತ್ಯ ಎಸಗಿರುವುದಾಗಿ ಶಂಕಿಸಲಾಗಿದ್ದು, ಈ ಬಗ್ಗೆ ತನಿಖೆಯನ್ನು ನಡೆಸುತ್ತಿರುವ ಪೋಲೀಸ್ ತಂಡ ಆರೋಪಿಯ ಪತ್ತೆಗಾಗಿ ವ್ಯಾಪಕ ಬಲೆ ಬೀಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಯು ನಾರಾಯಣ ಪ್ರಸಾದ್ ಅವರ ಮನೆಯ ಸುತ್ತ 3 ಕಡೆಗಳಲ್ಲಿ ನಾಡ ಬಾಂಬ್ ಇರಿಸಿ ಸ್ಪೋಟಿಸಲು ಯತ್ನಿಸಿದ್ದ, ಆದರೆ ನಾರಾಯಣ ಪ್ರಸಾದ್ ಅವರ ಪತ್ನಿ ಶಾಲಿನಿ ಎದ್ದು ಬಂದ ಕಾರಣ ಒಂದು ಬಾಂಬ್ ಮಾತ್ರ ಬೆಂಕಿ ಹಚ್ಚಿ ಸ್ಪೋಟಗೊಳಿಸಿ ಆರೋಪಿ ಕತ್ತಲಲ್ಲಿ ಪಾರಾರಿಯಾಗಿದ್ದ, ಬಾಂಬ್ ಸಿಡಿಸಿ ಮನೆಯನ್ನು ಸಂಪೂರ್ಣ ಧ್ವಂಸಗೊಳಿಸಲು ಆರೋಪಿ ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ಜಾಹೀರಾತು

ಪ್ರಕರಣಕ್ಕೆ ಸಂಬಂಧಿಸಿ ತನ್ನ ಮನೆಯಲ್ಲಿನ ಕೊಠಡಿಯಲ್ಲಿ ವಾಸವಾಗಿದ್ದು, ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಕೇರಳದ ಬಾಬು ಯಾನೆ ಬಾಲು ಈ ಕೃತ್ಯ ಎಸಗಿರಬಹುದು ಎಂದು ನಾರಾಯಣ ಪ್ರಸಾದ್ ಅವರು ಶಂಕೆ ವ್ಯಕ್ತ ಪಡಿಸಿದ್ದರು.

ಸ್ಪೋಟಗೊಂಡ ಮನೆಯಲ್ಲಿ ಯಾವುದೇ ಸಾಕ್ಷ್ಯಗಳು ದೊರಕಿಲ್ಲ. ಮನೆ ಮುಂಭಾಗ ಅಳವಡಿಸಿದ್ದ ಸಿಸಿ ಕ್ಯಾಮರಾವೂ ನಿಷ್ಪ್ರಯೋಜಕವಾಗಿದೆ. ದೂರು ದಾಖಲಿಸಿಕೊಂಡಿರುವ ಪೋಲೀಸರು ವಿಶೇಷ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಆರೋಪಿಯ ಪತ್ತೆಗಾಗಿ ವ್ಯಾಪಕ ಶೋಧನೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.