
ದೀಪಾವಳಿ ಶಬ್ದದ ಉತ್ಪತ್ತಿ ಮತ್ತು ಅರ್ಥ: ದೀಪಾವಳಿ ಎಂಬ ಶಬ್ದವು ದೀಪ + ಆವಳಿ (ಸಾಲು) ಹೀಗೆ ರೂಪುಗೊಂಡಿದೆ. ಇದರ ಅರ್ಥವು ದೀಪಗಳ ಸಾಲು ಎಂದಾಗಿದೆ. ದೀಪಾವಳಿಯಂದು ಎಲ್ಲೆಡೆಗಳಲ್ಲಿ ದೀಪಗಳನ್ನು ಹಚ್ಚುತ್ತಾರೆ.
ದೀಪಾವಳಿಯಲ್ಲಿ ಬರುವ ದಿನಗಳು: ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಕಾರ್ತಿಕ ಶುಕ್ಲ ಪ್ರತಿಪದೆ (ಬಲಿಪ್ರತಿಪದೆ) ಹೀಗೆ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿಯನ್ನು ದೀಪಾವಳಿಯಲ್ಲಿ ಗಣನೆಗೆ ತೆಗೆದುಕೊಳ್ಳದೇ ದೀಪಾವಳಿಯು ಮೂರು ದಿನಗಳದ್ದಾಗಿದೆ ಎಂದು ನಂಬುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆ ಈ ದಿನಗಳು ದೀಪಾವಳಿಗೆ ಹೊಂದಿಕೊಂಡೇ ಬರುವುದರಿಂದ ಇವುಗಳನ್ನು ದೀಪಾವಳಿಯಲ್ಲಿಯೇ ಸಮಾವೇಶಗೊಳಿಸಲಾಗುತ್ತದೆ. ಆದರೆ ಈ ಹಬ್ಬಗಳು ಬೇರೆಬೇರೆಯಾಗಿವೆ.
ಹಬ್ಬದ ಇತಿಹಾಸ : ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಪ್ರಭು ಶ್ರೀರಾಮಚಂದ್ರನು ಮರಳಿ ಅಯೋಧ್ಯೆಗೆ ಬಂದನು. ಆಗ ಪ್ರಜೆಗಳು ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಉತ್ಸವ ಪ್ರಾರಂಭವಾಯಿತು.
ದೀಪಾವಳಿಯ ಭಾವಾರ್ಥ: ‘ಶ್ರೀಕೃಷ್ಣನು ಅಸುರೀ ವೃತ್ತಿಯ ನರಕಾಸುರನನ್ನು ವಧಿಸಿ ಜನರಿಗೆ ಭೋಗವೃತ್ತಿ, ಲಾಲಸೆ, ಅನಾಚಾರ ಮತ್ತು ದುಷ್ಟಪ್ರವೃತ್ತಿಗಳಿಂದ ಮುಕ್ತಗೊಳಿಸಿದನು ಮತ್ತು ಪ್ರಭುವಿನ ವಿಚಾರ (ದೈವೀವಿಚಾರ) ಗಳನ್ನು ನೀಡಿ ಸುಖಿಯಾಗಿಸಿದನು, ಅದುವೇ ಈ ‘ದೀಪಾವಳಿ’. ನಾವು ವರ್ಷಾನುವರ್ಷಗಳಿಂದ ಕೇವಲ ಒಂದು ರೂಢಿ ಎಂದು ದೀಪಾವಳಿಯನ್ನು ಆಚರಿಸುತ್ತಿದ್ದೇವೆ. ಇಂದು ಅದರ ಗೂಢಾರ್ಥವು ಲೋಪವಾಗಿದೆ. ಈ ಗೂಢಾರ್ಥವನ್ನು ತಿಳಿದುಕೊಂಡು ಅದರಿಂದ ಅಭಿಮಾನವು ಜಾಗೃತವಾದಲ್ಲಿ ಅಜ್ಞಾನರೂಪೀ ಅಂಧಃಕಾರದ, ಹಾಗೆಯೇ ಭೋಗವೃತ್ತಿ ಮತ್ತು ಅನಾಚಾರೀ, ಅಸುರಿ ವೃತ್ತಿಯಿರುವ ಜನರ ಪ್ರಾಬಲ್ಯವು ಕಡಿಮೆಯಾಗಿ ಸಜ್ಜನಶಕ್ತಿಯ ಮೇಲಿನ ಅವರ ವರ್ಚಸ್ಸು ಕಡಿಮೆಯಾಗುವುದು.
ದೀಪಾವಳಿಯ ಸ್ವರೂಪ
ದೀಪಗಳ ಅಲಂಕಾರ : ದೀಪಾವಳಿಯಂದು ಸಾಯಂಕಾಲ ಮನೆಯೊಳಗೆ ಮತ್ತು ಹೊರಗೆ ಸಾಲಾಗಿ ದೀಪಗಳನ್ನು ಹಚ್ಚಿಡಬೇಕು. ದೀಪಾವಳಿ ಎಂದರೆ ದೀಪಗಳ ಸಾಲು. ಇದರಿಂದ ಮನೆಗೆ ಅಪ್ರತಿಮ ಶೋಭೆಯುಂಟಾಗಿ ಉತ್ಸಾಹವು ಬರುತ್ತದೆ ಮತ್ತು ಆನಂದವಾಗುತ್ತದೆ.ವಿದ್ಯುತ್ದೀಪಗಳ ಮಾಲೆಗಳನ್ನು ಹಚ್ಚುವುದಕ್ಕಿಂತ ಎಣ್ಣೆ ಮತ್ತು ಬತ್ತಿಯ ಹಣತೆಗಳನ್ನು ಹಚ್ಚುವುದರಲ್ಲಿ ಹೆಚ್ಚಿನ ಶೋಭೆ ಮತ್ತು ಶಾಂತಿಯಿರುತ್ತದೆ. ‘ದೀಪ’ ಎನ್ನುವ ಶಬ್ದದ ನಿಜವಾದ ಅರ್ಥವು ಎಣ್ಣೆ ಮತ್ತು ಬತ್ತಿಯ ಜ್ಯೋತಿ ಎಂದಾಗಿದೆ. ‘ಅಂಧಃಕಾರದಿಂದ ಜ್ಯೋತಿಯೆಡೆಗೆ ಅಂದರೆ ಪ್ರಕಾಶದೆಡೆಗೆ ಹೋಗು’ ಎನ್ನುವುದು ಶ್ರುತಿಯ ಆಜ್ಞೆ ಯಾಗಿದೆ. ‘ತಮಸೋ ಮಾ ಜ್ಯೋತಿರ್ಗಮಯ’| ದೀಪಾವಳಿಯ ದಿನಗಳಲ್ಲಿ ಯಾರ ಮನೆಯಲ್ಲಿ ದೀಪಗಳನ್ನು ಹಚ್ಚುವುದಿಲ್ಲವೋ,ಅವರ ಮನೆಯಲ್ಲಿ ಯಾವಾಗಲೂ ಅಂಧಃಕಾರವೇ ಇರುತ್ತದೆ. ಅವರು ಪ್ರಕಾಶದೆಡೆಗೆ ಅಂದರೆ ಜ್ಞಾನದೆಡೆಗೆ ಹೋಗಲಾರರು. ದೀಪದಾನದಿಂದ ಲಕ್ಷ್ಮೀಯು ಸ್ಥಿರವಾಗುತ್ತಾಳೆ. ನಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮೀಯ ವಾಸ ಮತ್ತು ಜ್ಞಾನದ ಪ್ರಕಾಶವಿರಬೇಕೆಂದು ಪ್ರತಿಯೊಬ್ಬರೂ ಆನಂದದಿಂದ ದೀಪಾವಳಿ ಉತ್ಸವವನ್ನು ಆಚರಿಸಬೇಕು. ಇದರಿಂದ ಮನೆಯಲ್ಲಿ ಸುಖಸಮೃದ್ಧಿ ಇರುತ್ತದೆ.
ದೀಪಾವಳಿಯ ಮಂಗಲಸಮಯದಲ್ಲಿ ನಿಮ್ಮಿಂದ ಏನಾದರೂ ಅಮಂಗಲ ಘಟಿಸುವುದಿಲ್ಲವಲ್ಲ, ಎಂಬುದರ ವಿಚಾರ ಮಾಡಿರಿ!
ದೀಪಾವಳಿಯಲ್ಲಿ ಪ್ರೇಮದ ಕೊಡುಕೊಳ್ಳುವಿಕೆಯಾಗಬೇಕೆಂದು ಸಂಬಂಧಿಕರು, ಮಿತ್ರರು ಮುಂತಾದವರಿಗೆ ಸಿಹಿತಿಂಡಿಯ ಪೆಟ್ಟಿಗೆಗಳನ್ನು ಉಡುಗೊರೆಯೆಂದು ನೀಡಲಾಗುತ್ತದೆ. ಕೆಲವು ಸಲ ಪೆಟ್ಟಿಗೆಗಳ ಹೊದಿಕೆಗಳ ಮೇಲೆ ದೇವತೆಗಳ ಚಿತ್ರ ಅಥವಾ ಹೆಸರುಗಳಿರುತ್ತವೆ. ಬಹುತೇಕ ಸಂದರ್ಭದಲ್ಲಿ ಖಾಲಿಯಾದ ನಂತರ ಈ ಪೆಟ್ಟಿಗೆಗಳನ್ನು ಕಸದಲ್ಲಿ ಎಸೆಯಲಾಗುತ್ತದೆ.
ದೀಪಾವಳಿಯ ಸಮಯದಲ್ಲಿ ಬಹಳಷ್ಟು ಪ್ರಮಾಣದಲ್ಲಿ ದೇವತೆಗಳ ಚಿತ್ರ ಅಥವಾ ಹೆಸರುಗಳಿರುವ ಲಾಟರಿ ಟಿಕೇಟುಗಳ ಮಾರಾಟವಾಗುತ್ತಿರುತ್ತದೆ. ಹೆಚ್ಚಿನ ಜನರು ಲಾಟರಿ ಟಿಕೇಟುಗಳನ್ನು ಉಪಯೋಗಿಸಿದ ನಂತರ ಅವುಗಳನ್ನು ಮುದ್ದೆ ಮಾಡಿ ಕಸದಲ್ಲಿ ಎಸೆದುಬಿಡುತ್ತಾರೆ.
ಅಧ್ಯಾತ್ಮಶಾಸ್ತ್ರಕ್ಕನುಸಾರ ದೇವತೆಯ ಚಿತ್ರ ಅಥವಾ ರೂಪವಿದ್ದಲ್ಲಿ ದೇವತೆಯ ತತ್ತ್ವವಿರುತ್ತದೆ, ಅಂದರೆ ಸೂಕ್ಷ್ಮದಲ್ಲಿ ದೇವತೆಯ ಅಸ್ತಿತ್ವವಿರುತ್ತದೆ. ಆದ್ದರಿಂದ ಮೇಲಿನ ಪ್ರಕಾರಗಳಿಂದ ದೇವತೆಗಳ ವಿಡಂಬನೆಯೇ ಆಗುತ್ತದೆ. ಇದರಿಂದ ದೇವತೆಗಳ ಅವಕೃಪೆಯಾಗುತ್ತದೆ. ಇದೇ ರೀತಿಯಲ್ಲಿ ರಾಷ್ಟ್ರಪುರುಷರ ವಿಡಂಬನೆಯೂ ಆಗುತ್ತಿರುತ್ತದೆ. ಇದಕ್ಕಾಗಿ,
೧. ಇಂತಹ ಅಧರ್ಮಾಚರಣೆಯನ್ನು ಸ್ವತಃ ತಡೆಗಟ್ಟಿರಿ!
೨. ಇದರ ಬಗ್ಗೆ ಇತರರಿಗೂ ಪ್ರಬೋಧನೆ ಮಾಡಿರಿ!
೩. ಉದ್ದೇಶಪೂರ್ವಕವಾಗಿ ವಿಡಂಬನೆ ಮಾಡುವವರನ್ನು ನಿಷೇಧಿಸಿರಿ ಮತ್ತು ಅವರ ಉತ್ಪಾದನೆಗಳನ್ನು ಬಹಿಷ್ಕರಿಸಿರಿ!
೪. ಧಾರ್ಮಿಕ ಭಾವನೆಯನ್ನು ನೋಯಿಸಿದ್ದಕ್ಕಾಗಿ ಪೊಲೀಸರಲ್ಲಿ ದೂರು ನೀಡಿರಿ!
ದೀಪಾವಳಿಯನ್ನು ಆಚರಿಸಲು ಪಟಾಕಿಗಳನ್ನು ಸಿಡಿಸಬೇಡಿರಿ !
ದೀಪಾವಳಿಯು ಮನೋರಂಜನೆಯ ಹಬ್ಬವಾಗಿರದೇ ಧಾರ್ಮಿಕತೆ ಮತ್ತು ಸಂಸ್ಕೃತಿಯನ್ನು ಉಳಿಸುವ ಹಬ್ಬವಾಗಿದೆ: ದೀಪಾವಳಿಯ ಆನಂದವನ್ನು ಪಡೆಯಲು ಸಣ್ಣವರು-ದೊಡ್ಡವರು ಎಲ್ಲರೂ ಪಟಾಕಿಗಳನ್ನು ಸಿಡಿಸುತ್ತಾರೆ. ಆನಂದವನ್ನು ಪಡೆಯಲು ಪಟಾಕಿಗಳ ಆವಶ್ಯಕತೆ ಇರುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ. ಶಬ್ದಮಾಲಿನ್ಯ ಮತ್ತು ವಾಯುಮಾಲಿನ್ಯವನ್ನು ಮಾಡುವ ಪಟಾಕಿಗಳು ನಮಗೆ ಹಾಗೆಯೇ ಇತರರಿಗೂ ತ್ರಾಸದಾಯಕವಾಗಿರುತ್ತವೆ. ಇತರರಿಗೆ ತೊಂದರೆಯನ್ನು ನೀಡಿ ಉತ್ಸವಗಳನ್ನು ಆಚರಿಸುವುದನ್ನು ಹಿಂದೂ ಧರ್ಮದಲ್ಲಿ ನಿಂದ್ಯವೆನ್ನಲಾಗಿದೆ. ದೀಪಾವಳಿಯ ದಿನಗಳಲ್ಲಿ ಯೋಗ್ಯರೀತಿಯಲ್ಲಿ ಧರ್ಮಾಚರಣೆ ಯನ್ನು ಮಾಡಿಯೇ ನಿಜವಾದ ಆನಂದವನ್ನು ಅನುಭವಿಸಲು ಸಾಧ್ಯವಾಗುತ್ತದೆ. ತಾವೂ ಇದರ ಅನುಭೂತಿಯನ್ನು ಖಂಡಿತವಾಗಿ ಪಡೆದುಕೊಳ್ಳಬಹುದು. ಇದಕ್ಕಾಗಿ ದೀಪಾವಳಿ ಹಬ್ಬವನ್ನು ಪಟಾಕಿಗಳನ್ನು ಸಿಡಿಸದೇ ಶಾಸ್ತ್ರದಲ್ಲಿ ಹೇಳಿದಂತೆ ಆಚರಿಸಿರಿ!
ಪಟಾಕಿಗಳನ್ನು ಸಿಡಿಸುವುದರಿಂದ ಆಗುವ ದುಷ್ಪರಿಣಾಮಗಳು :
೧. ಶಾರೀರಿಕ ದುಷ್ಪರಿಣಾಮ : ಪಟಾಕಿಗಳ ಶಬ್ದದಿಂದ ಕಿವುಡುತನ ಬರುವುದು, ಪಟಾಕಿಗಳನ್ನು ಸಿಡಿಸುವಾಗ ಕಣ್ಣುಗಳಿಗೆ ತಾಗಿ ಕುರುಡರಾಗುವುದು, ಪಟಾಕಿಯ ಕಾರ್ಖಾನೆಗಳಲ್ಲಿ ಸ್ಫೋಟವಾಗಿ ಅನೇಕರು ಸಾವಿಗೀಡಾಗುವುದು ಇತ್ಯಾದಿ.
೨. ಭೌತಿಕ ದುಷ್ಪರಿಣಾಮ : ಬಾಣಗಳಂತಹ ಪಟಾಕಿಗಳಿಂದ ಹುಲ್ಲಿನ ಗುಡಿಸಲು, ಹುಲ್ಲಿನ ರಾಶಿ (ಬಣವೆ) ಮುಂತಾದವುಗಳು ಸುಡುವುದು.
೩. ಆರ್ಥಿಕ ದುಷ್ಪರಿಣಾಮ : ದೇಶವು ಸಾಲದಲ್ಲಿರುವಾಗ ಪ್ರತೀವರ್ಷ ಕೋಟ್ಯಾವಧಿ ರೂಪಾಯಿಗಳನ್ನು ಈ ರೀತಿಯಲ್ಲಿ ಸುಟ್ಟು ಹಾಕುವುದೆಂದರೆ ಪಾಪವೇ ಆಗಿದೆ.
೪. ಆಧ್ಯಾತ್ಮಿಕ ದುಷ್ಪರಿಣಾಮ : ಭಜನೆ, ಆರತಿ ಅಥವಾ ಸಾತ್ತ್ವಿಕ ನಾದಗಳಿಂದ ಒಳ್ಳೆಯ ಶಕ್ತಿ ಮತ್ತು ದೇವತೆಗಳು ಬರುತ್ತಾರೆ ಹಾಗೂ ಪಟಾಕಿ ಮತ್ತು ತಾಮಸಿಕ ಆಧುನಿಕ ಸಂಗೀತಗಳಿಂದ ಅಸುರೀ ಶಕ್ತಿಗಳು ಆಕರ್ಷಿತಗೊಳ್ಳುತ್ತವೆ. ಮನುಷ್ಯರ ಮೇಲೆ ಅಸುರೀ ಶಕ್ತಿಗಳಲ್ಲಿನ ತಮೋಗುಣದ ಪರಿಣಾಮವಾಗಿ ಅವರ ವೃತ್ತಿಯೂ ತಾಮಸಿಕವಾಗುತ್ತದೆ.
-ಶ್ರೀ ವಿನೋದ್ ಕಾಮತ್, ಸನಾತನ ಸಂಸ್ಥೆ.
(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)