Friday, September 20, 2024
ಉಡುಪಿ

ಉಡುಪಿಯ ಡಯಾನ ಹೋಟೇಲ್ ಸಭಾಂಗಣದಲ್ಲಿ ಸಹಕಾರ ಭಾರತಿ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ನಡೆದ ಸತ್ಕಾರ ಕೂಟ :ನೂತನ ಸಹಕಾರ ನೀತಿಯಲ್ಲಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ತಂತ್ರಜ್ಞಾನದ ಅಳವಡಿಕೆಗೆ ಆದ್ಯತೆ : ಸುರೇಶ್ ಪ್ರಭು – ಕಹಳೆ ನ್ಯೂಸ್

ಉಡುಪಿ : ದೇಶದಲ್ಲಿ ಜಾರಿಗೆ ತರಲುದ್ದೇಶಿಸಿರುವ ರಾಷ್ಟ್ರೀಯ ಸಹಕಾರಿ ನೀತಿಯಲ್ಲಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಏಕರೂಪಿ ತಂತ್ರಜ್ಞಾನದ ಅಳವಡಿಕೆಗೆ ಆದ್ಯತೆ ನೀಡಲಾಗಿದೆ ಎಂದು ರಾಷ್ತ್ರೀಯ ಸಹಕಾರಿ ನೀತಿ ಆಯೋಗದ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ ಶ್ರೀ ಸುರೇಶ್ ಪಿ.ಪ್ರಭು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಉಡುಪಿಯ ಹೋಟೇಲ್ ಡಯಾನದ ಸಭಾಂಗಣದಲ್ಲಿ ಸಹಕಾರ ಭಾರತಿ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಆಯೋಜಿಸಲಾದ ಸತ್ಕಾರ ಕೂಟದಲ್ಲಿ ಪಾಲ್ಗೊಂಡು ಮಾತನಾಡಿದರು.

ಜಾಹೀರಾತು

ಭವಿಷ್ಯದ ಭಾರತದಲ್ಲಿ ಸಹಕಾರಿ ಕ್ಷೇತ್ರವು ಆರ್ಥಿಕ, ವಾಣಿಜ್ಯಿಕ, ಔದ್ಯಮಿಕ ಮತ್ತು ಸಾಮಾಜಿಕ ರಂಗಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಸಹಕಾರಿ ಕ್ಷೇತ್ರದಲ್ಲಿ ದೇಶವ್ಯಾಪಿ ಏಕರೂಪಿ ತಂತ್ರಜ್ಞಾನ ಜ್ಯಾರಿಗೆ ತಂದು ಭವಿಷ್ಯದ ಆರ್ಥಿಕತೆಯ ನಾಯಕತ್ವ ವಹಿಸಲು ಸಹಕಾರಿ ಕ್ಷೇತ್ರವನ್ನು ಸಜ್ಜುಗೊಳಿಸಲಾಗುವುದು ಎಂದವರು ತಿಳಿಸಿದರು.

ಸಹಕಾರ ಭಾರತಿಯು ರಾಷ್ಟ್ರೀಯ ಮಟ್ಟದಲ್ಲಿ ಸಹಕಾರಿ ಕ್ಷೇತ್ರದ ಶುದ್ಧೀಕರಣ, ವೃದ್ಧೀಕರಣ ಮತ್ತು ಆಧುನೀಕರಣಕ್ಕೆ ಶ್ರಮಿಸುತ್ತಿರುವ ಏಕೈಕ ಸರಕಾರೇತರ ಸಂಘಟನೆ ಎಂದವರು ಶ್ಲಾಘಿಸಿದರು. ಉಡುಪಿ ಜಿಲ್ಲೆಯಲ್ಲಿ ಕೂಡಾ ಬ್ಯಾಂಕಿಂಗ್, ಶಿಕ್ಷಣ ಮತ್ತು ಆರೋಗ್ಯ ರಂಗಗಳ ಉತ್ಕರ್ಷದ ಬಳಿಕ ಇದೀಗ ಸಹಕಾರಿ ರಂಗ ಕೂಡಾ ಗಮನಾರ್ಹವಾಗಿ ಬೆಳೆಯುತ್ತಿರುವುದು ಅಭಿನಂದನೀಯ ಎಂದು ಸುರೇಶ್ ಪ್ರಭು ಸಂತಸ ವ್ಯಕ್ತಪಡಿಸಿದರು.

ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷರಾದ ಶ್ರೀ ಬೋಳ ಸದಾಶಿವ ಶೆಟ್ಟಿಯವರು ರಾಷ್ಟ್ರೀಯ ಸಹಕಾರಿ ನೀತಿ ಆಯೋಗದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಸುರೇಶ್ ಪಿ. ಪ್ರಭು ಮತ್ತು ಅವರ ಧರ್ಮಪತ್ನಿ, ವಿಶ್ರಾಂತ ಪತ್ರಕರ್ತೆ ಶ್ರೀಮತಿ ಉಮಾ ಸುರೇಶ್ ಪ್ರಭು ರವರಿಗೆ ಉಡುಪಿ ಜಿಲ್ಲಾ ಸಹಕಾರ ಭಾರತಿ ವತಿಯಿಂದ ಸನ್ಮಾನಿಸಿ ಗೌರವಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಶಾಸಕರಾದ ಸಹಕಾರ ರತ್ನ ಯಶ್ ಪಾಲ್ ಸುವರ್ಣ ಮಾತನಾಡಿ ಕೇಂದ್ರದಲ್ಲಿ ನೂತನ ಸಹಕಾರಿ ಸಚಿವಾಲಯ ರಚನೆಯಾದ ಬಳಿಕ ಸಹಕಾರಿ ಕ್ಷೇತ್ರದಲ್ಲಿ ಬದಲಾವಣೆಯ ಪರ್ವ ಆರಂಭಗೊಂಡಿದ್ದು, ಈ ನಿಟ್ಟಿನಲ್ಲಿ ಸಹಕಾರ ಭಾರತಿ ಇನ್ನಷ್ಟು ಹೆಚ್ಚಿನ ಆಸಕ್ತಿಯಿಂದ ಸಂಘಟನಾತ್ಮಕವಾಗಿ ಗ್ರಾಮಮಟ್ಟದ ಸಹಕಾರಿಗಳನ್ನು ತಲುಪಲು ಕಾರ್ಯೋನ್ಮುಖವಾಗಬೇಕೆಂದು ಕರೆ ನೀಡಿದರು.

ನೂತನ ಸಹಕಾರಿ ನೀತಿಯಲ್ಲಿ ಹಾಲು ಉತ್ಪಾದಕರ ಸಂಘಗಳಿಗೆ ವಿವಿದೋದ್ದೇಶ ಹೈನುಗಾರಿಕಾ ಸಂಘಗಳಾಗಿ ಪರಿವರ್ತಿಸಲು ಅವಕಾಶ ,ಕೇಂದ್ರ ಸರಕಾರದಿಂದ ರೈತರ ಖಾತೆಗಳಿಗೆ ನೇರವಾಗಿ ಪ್ರತಿ ಲೀಟರಿಗೆ ಐದು ರೂಪಾಯಿ ಪ್ರೋತ್ಸಾಹ ಧನ, ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಸಹಕಾರಿ ನ್ಯಾಯಾಲಯಗಳ ಸ್ಥಾಪನೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕೇಂದ್ರ ಸರಕಾರದಿಂದ ನಿರ್ವಹಿಸಲ್ಪಡುವ ಪ್ರತ್ಯೇಕ ರೈತ ಜನೋಪಯೋಗಿ ಕೇಂದ್ರಗಳ ಸ್ಥಾಪನೆ ಮೊದಲಾದ ವಿಚಾರಗಳನ್ನು ಅಳವಡಿಸಬೇಕೆಂದು ಸಹಕಾರ ಭಾರತಿ ವತಿಯಿಂದ ರಾಷ್ಟ್ರೀಯ ಮತ್ಸ್ಯ ಪ್ರಕೋಷ್ಠದ ಸಹ ಸಂಚಾಲಕರಾದ ಶ್ರೀ ಮಂಜುನಾಥ ಎಸ್.ಕೆ. ಅವರು ಮನವಿಯನ್ನು ಸಲ್ಲಿಸಿದರು.

ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ರವರು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು. ಕಾರ್ಕಳ ಪಿಕಾರ್ಡ್ ಬ್ಯಾಂಕಿನ ನಿರ್ದೇಶಕ ರಘುವೀರ ಶೆಣೈ ವಂದಿಸಿದರು.

ಉಡುಪಿ ಜಿಲ್ಲಾ ಸಹಕಾರ ಭಾರತಿ ಸಂಘಟನಾ ಕಾರ್ಯದರ್ಶಿ ಸುಜಿತ್ ಶೆಟ್ಟಿ, ಜಿಲ್ಲಾ ಸಹಕಾರ ಭಾರತಿ ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳಾದ ರವೀಂದ್ರ ನಾಯಕ್ ನೀರೆ, ಮಧುಸೂದನ ನಾಯಕ್ ಭೈರಂಜೆ, ಸಿಎ ಗಿರೀಶ್ ಪೈ ಬ್ರಹ್ಮಾವರ, ಮುರಳೀಧರ್ ಪೈ ಕಟಪಾಡಿ, ವಿನಯ ಶೆಟ್ಟಿ ನೀರೆ, ವಿವೇಕ್ ಶೆಟ್ಟಿ ಎರ್ಲಪಾಡಿ, ಸತೀಶ್ ಬ್ರಹ್ಮಾವರ, ಪ್ರಕಾಶ್ ಸುವರ್ಣ ಕಟಪಾಡಿ, ಪ್ರಶಾಂತ್ ಕುಮಾರ್ ಶೀರೂರ್, ರಘುರಾಮ ಮರಕಾಲ,ನ್ಯಾಯವಾದಿ ಸಹಕಾರಿ ಸಂಘದ ಸದಾಶಿವ ಶೆಟ್ಟಿ, ಪದ್ಮನಾಭ, ಮತ್ತಿತರ ಸಹಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.