Friday, September 20, 2024
ಸುದ್ದಿ

” ಜಾತಿ, ಧರ್ಮ ಮೀರಿ ಬಾಂಧವ್ಯ ಬೆಸೆದ ಭಾಷೆ ತುಳು ” ; ಪುತ್ತೂರು ತಾಲೂಕು ಪ್ರಥಮ ತುಳು ಸಾಹಿತ್ಯ ಸಮ್ಮೇಳನ ‘ತುಳು ಪರ್ಬ -2018’ ಸುಸಂಪನ್ನ – ಕಹಳೆ ನ್ಯೂಸ್

ಪುತ್ತೂರು: ರಾಜಾಶ್ರಯ ಸಿಕ್ಕದೇ ಇರುವುದರಿಂದ ತುಳು ಹಿಂದೆ ಉಳಿಯಿತು. ಅಕಾಡೆಮಿ ಪ್ರಾರಂಭವಾದ ಬಳಿಕ ಒಂದಷ್ಟು ಬೆಳವಣಿಗೆ ಕಂಡಿದೆ. ತುಳುವಿಗೆ ವಿಶ್ವವಿದ್ಯಾಲಯ ಪ್ರಾರಂಭಿಸಿದರೆ ತುಳು ಭಾಷೆಗೆ ಶಾಶ್ವತ ನೆಲೆ ಸಿಗಲಿದೆ ಎಂದು ತುಳು ಸಂಘಟಕ ಸೇಸಪ್ಪ ರೈ ರಾಮಕುಂಜ ಹೇಳಿದರು. ಕುಂಬ್ರ ದುರ್ಗಾಪ್ರಸಾದ್‌ ರೈ ನೇತೃತ್ವದಲ್ಲಿ ಪುತ್ತೂರು ತಾಲೂಕು ತುಳು ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಪಾತೆರಕತೆ – ತುಳು ಸಾಹಿತ್ಯ ಮರ್ಗಿಲ್‌ನಲ್ಲಿ ಅವರು ತುಳು ಪಠ್ಯದ ಕುರಿತಾಗಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತುಳು ಪಠ್ಯವನ್ನು ನಾಟಕ, ಸಿನೆಮಾ, ಯಕ್ಷಗಾನ ಹೊರತುಪಡಿಸಿ ಊಹಿಸಲು ಸಾಧ್ಯವಿಲ್ಲ. ಇದರ ಜತೆಗೆ ವಿದ್ಯೆಯನ್ನು ಕಲಿತುಕೊಂಡರೆ ತುಳು ಭಾಷೆ ಉನ್ನತಿಗೇರಲು ಸಾಧ್ಯ. ವಿದ್ಯೆ ತುಂಬಾ ಅಗತ್ಯ. ವಿದ್ಯೆ ಇಲ್ಲದೇ ಹೋದರೆ ಭಾಷೆಯ ಬೆಳವಣಿಗೆ ಅಸಾಧ್ಯ. ತುಳು ಭಾಷೆಯ ವಿದ್ಯೆ ಸಿಗದೇ ಹೋಗಿರುವುದು ತುಳುವಿನ ಹಿನ್ನಡೆಗೆ ಕಾರಣ. ಈ ಹಿನ್ನೆಲೆಯಲ್ಲಿ ಪಾಲ್ತಾಡಿ ರಾಮಕೃಷ್ಣ ಆಚಾರ್‌ ಅವರನ್ನು ನೆನಪಿಸಿಕೊಳ್ಳಲೇಬೇಕು. ಅವರ ಕಲ್ಪನೆಯಲ್ಲಿ ಅಕಾಡೆಮಿ ಸ್ಥಾಪನೆಯಾದ ಬಳಿಕ, ತುಳು ಒಂದಷ್ಟು ಅಭಿವೃದ್ಧಿ ಕಂಡಿದೆ ಎಂದರು.

ಜಾಹೀರಾತು

ಪಂಚದ್ರಾವಿಡ ಭಾಷೆಗಳಲ್ಲಿ ತುಳು ಮಾತ್ರ ಹಿಂದೆ ಬಿದ್ದಿದೆ. ಎಸೆಸೆಲ್ಸಿ, ಪದವಿ, ಈಗ ಸ್ನಾತಕೋತ್ತರದಲ್ಲೂ ತುಳು ಪಠ್ಯ ಸೇರಿಕೊಂಡಿದೆ. ಇದರ ನಡುವೆ ಪಿಯುಸಿಯಲ್ಲಿ ಮಾತ್ರ ತುಳು ಇಲ್ಲ. ಈ ಸ್ಥಳವನ್ನು ತುಂಬಿಸುವ ಕೆಲಸ ಆಗಬೇಕಿದೆ. ಮುಂದೆ ತುಳು ವಿಶ್ವವಿದ್ಯಾಲಯ ಪ್ರಾರಂಭಿಸಬೇಕು. ಅದು ಕಷ್ಟವೇ ಅಲ್ಲ. ಇದು ಸಾಧ್ಯವಾದರೆ, ಮುಂದೆ ಸಂಶೋಧನೆಗೂ ಬಾಗಿಲು ತೆರೆದುಕೊಳ್ಳುತ್ತದೆ ಎಂದರು.

ತುಳು ಪ್ರಸಂಗ ಪುಸ್ತಕ ಬರಲಿ
ತುಳು ಯಕ್ಷಗಾನದ ಬಗ್ಗೆ ಮಾತನಾಡಿದ ಹಿರಿಯ ಕಲಾವಿದ ಕೆ.ಎಚ್‌. ದಾಸಪ್ಪ ರೈ, ಒಂದು ಕಾಲದಲ್ಲಿ ತುಳು ಯಕ್ಷಗಾನವೇ ಮಾಡಬಾರದು ಎಂಬ ನಿರ್ಬಂಧ ಹೇರಿದ್ದರು. ಇದನ್ನು ವಿರೋಧಿಸಿ 5 ರೂ. ಟಿಕೆಟನ್ನು 50 ಪೈಸೆಗೆ ನೀಡಿ, ತುಳು ಯಕ್ಷಗಾನ ನಡೆಸಿದ್ದೇವೆ. ತುಳು ವಿರೋಧಕ್ಕೆ ಪ್ರತಿಭಟನೆಯಾಗಿ ಕಪ್ಪು ಪಟ್ಟಿ ಧರಿಸಿ, ನೆಲದಲ್ಲೇ ಕುಳಿತು ಯಕ್ಷಗಾನ ನೋಡಿದ್ದೇವೆ. ಸ್ಟಾರ್‌ ಕಲಾವಿದರು ಕಡಿಮೆಯಾದರೂ ಯಕ್ಷಗಾನ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಮುಂದೆ ತುಳು ಪ್ರಸಂಗಗಳ ಪುಸ್ತಕ ಪ್ರಕಟಿಸುವಂತೆ ಆಗಬೇಕು ಎಂದರು. ತುಳು ಯಕ್ಷಗಾನದಲ್ಲಿ ಕನ್ನಡ, ಸಂಸ್ಕೃತ ಬಳಕೆ ಬರುತ್ತದೆ. ಆದರೆ ಕನ್ನಡ ಯಕ್ಷಗಾನದಲ್ಲಿ ತುಳು ಬಳಕೆಗೆ ನಿರ್ಬಂಧ ಹೇರಲಾಗುತ್ತಿದೆ ಎಂದು ಪ್ರಶ್ನಿಸಿದಾಗ, ಸಂಸ್ಕೃತ ಶ್ರೀಮಂತ ಭಾಷೆ. ಇತರ ಭಾಷೆಗಳಿಗೂ ಸಂಸ್ಕೃತದ ಶಬ್ದಗಳನ್ನು ಬಳಸಲಾಗುತ್ತಿದೆ. ಅದೇ ರೀತಿ ತುಳುವಿಗೂ ಬಂದಿದೆ. ಇದರ ಬಗ್ಗೆ ಗೊಂದಲ ಬೇಡ ಎಂದು ದಾಸಪ್ಪ ರೈ ಹೇಳಿದರು.

ನಾಟಕದಿಂದ ಕಿಸೆ ಖಾಲಿ
ರಂಗಕರ್ಮಿ ತಾರಾನಾಥ ಪಿ. ಪುತ್ತೂರು ಮಾತನಾಡಿ, ನಾಟಕ ಆಡಿ ಕಿಸೆ ಖಾಲಿ ಮಾಡಿಕೊಂಡ ದಿನಗಳಿದ್ದವು. ಆದರೆ ಇಂದು ನಾಟಕ ಆಡಿ ಕಿಸೆ ತುಂಬಿಸುವ ದಿನಗಳು ಬಂದಿವೆ. ಒಳ್ಳೆಯ ದಿನಗಳು ಇಂದು ಸಿಕ್ಕಿದೆ ಎಂದರೆ ಅದರ ಹಿಂದೆ ಶ್ರಮ ಇದೆ ಎಂದು ತಿಳಿಸಿದರು. ಸಮ್ಮೇಳನಾಧ್ಯಕ್ಷ ಡಾ| ಬಿ.ಎ. ವಿವೇಕ್‌ ರೈ ಉಪಸ್ಥಿತರಿದ್ದರು. ದುರ್ಗಾಪ್ರಸಾದ್‌ ಕುಂಬ್ರ ಸ್ವಾಗತಿಸಿ, ಸರಿತಾ ರಾಮಕುಂಜ ವಂದಿಸಿದರು.

ತಾಂತ್ರಿಕ ರೂಪ ಸಿನೆಮಾ
ಚಲನಚಿತ್ರ ನಟ ಶಿವಧ್ವಜ್‌ ಮಾತನಾಡಿ, ನಾಟಕದ ತಾಂತ್ರಿಕ ರೂಪವೇ ತುಳು ಸಿನೆಮಾ. ಕರಾವಳಿಯಲ್ಲಿ ಅತಿಹೆಚ್ಚು ಪ್ರಾದೇಶಿಕ ಭಾಷೆಗಳನ್ನು ಮಾತನಾಡುತ್ತಾರೆ. ಈ ಎಲ್ಲ ಭಾಷೆಗಳಲ್ಲೂ ಸಿನೆಮಾಗಳು ಬರುತ್ತಿವೆ. ತುಳುವಿನಲ್ಲಿ ವರ್ಷಕ್ಕೆ 15, 20 ಸಿನೆಮಾಗಳು ಬಿಡುಗಡೆಯಾಗುತ್ತಿವೆ. ತುಳು ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿದೆ. ಭಾಷೆಯನ್ನು ಉಳಿಸುವಲ್ಲಿ ತುಳು ಸಿನೆಮಾ ಪ್ರಮುಖ ಪಾತ್ರ ವಹಿಸಿದೆ ಎಂದರು.

ತುಳು ಸಾಹಿತ್ಯ ಬೆಳೆಸಿದವರು
ತುಳು ಮಾತೃಭಾಷೆಯಾಗಿರುವ 40 ಜಾತಿಯವರಿದ್ದಾರೆ. ಗದ್ದೆಯಲ್ಲಿ ಶ್ರಮಿಸಿದವರೇ ತುಳು ಸಾಹಿತ್ಯಗಳನ್ನು ಉಳಿಸಿದವರು ಮತ್ತು ಬೆಳೆಸಿದವರು. ಶಾಲೆಗೆ ಹೋಗದವರೂ ಗಂಟೆಗಟ್ಟಲೆ ಹೇಳುವ ಸಂದಿಗಳನ್ನು ಕಟ್ಟಿದ್ದು ಮಹಾ ವಿಶೇಷ. ಸಂದಿ, ಪಾಡ್ಡನಗಳು ಮಣ್ಣಿ ನಲ್ಲಿ ಸೃಷ್ಟಿಯಾದವು. ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳೆಸಲು ಮನಸ್ಸಿದ್ದರೆ ಸಾಕು, ವಿದ್ವಾಂಸರಾಗಬೇಕಿಲ್ಲ ಎನ್ನುವುದನ್ನು ಸಾಧಿಸಿದ ಹೆಗ್ಗಳಿಕೆ ತುಳುವರಿಗೆ ಸಲ್ಲುತ್ತದೆ ಎಂದರು.

ತುಳು ಭಾಷೆ ಇಂದು ಸಿನಿಮಾ ಕ್ಷೇತ್ರದಲ್ಲೂ ಹೆಸರುವಾಸಿಯಾಗಿದೆ. ಇತರ ವಿಭಾಗಗಳಲ್ಲಿ ಬಳಕೆಯಾಗುವ ಮೂಲಕ ಜನಪ್ರಿಯತೆಯನ್ನು ಪಡೆಯುತ್ತಿವೆ. ನೀರ್‌ ದೋಸೆ, ಕಟ್ಟದ ಕೋರಿ ಹೆಸರಿನ ಸಿನಿಮಾಗಳೂ ಬಂದಿವೆ. ಮುಂದೆ ಬಂಗುಡೆ ಪುಳಿ ಮುಂಚಿ ಹೆಸರಿನ ಸಿನಿಮಾವೂ ಬರಬಹುದು ಎಂದು ಹಾಸ್ಯದ ಮೂಲಕ ವಿವರಿಸಿದ ಡಾ| ವಿವೇಕ್‌ ರೈ, ಬೆಂಡೆಕಾಯಿಗೆ ಲೇಡೀಸ್‌ ಫಿಂಗರ್, ಚಿಕನ್‌ ಚಿಲ್ಲಿಯಂತಹ ಪದಗಳನ್ನು ಬಳಕೆ ಮಾಡದೆ ನಿಜವಾದ ತುಳು ಶಬ್ದವನ್ನೇ ಬಳಕೆ ಮಾಡಬೇಕು. ತುಳು ಹೆಸರುಗಳ ಚಲಾವಣೆಗೆ ಬಂದಷ್ಟು ಭಾಷೆಯೂ ಪ್ರಸಿದ್ಧಿ ಪಡೆಯುತ್ತದೆ ಎಂದರು.

ತುಳುವಿನದ್ದೇ ಸಂಸ್ಕೃತಿ
ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು, ಆದಿವಾಸಿ ಸಂಸ್ಕೃತಿ, ಕೃಷಿ ಸಂಸ್ಕೃತಿ, ಋಷಿ ಸಂಸ್ಕೃತಿಯಿಂದ ಬೆಳೆದ ತುಳುನಾಡು ಸಂಪದ್ಭರಿತವಾಗಿದೆ. ಇಲ್ಲಿ ನಮ್ಮದೇ ಸಂಸ್ಕೃತಿ ಇದೆ. ಎಲ್ಲಿ ಹೋದರೂ ಗುರುತಿಸಿಕೊಳ್ಳುವಂತೆ ಮಾಡುವ ಹೆಚ್ಚುಗಾರಿಕೆ ತುಳುವರದ್ದು. ತುಳುನಾಡಿನ ಪ್ರದೇಶಗಳ ಹೆಸರುಗಳನ್ನೇ ಇಂದು ಪಾಶ್ಚಾತ್ಯ ಭಾಷೆಗೆ ಬದಲಾಯಿಸಿದ್ದೇವೆ. ಇದನ್ನು ಮೂಲ ಹೆಸರಿನಲ್ಲೇ ಉಳಿಸಿಕೊಳ್ಳುವುದೇ ಭಾಷೆಯ ಉಳಿಕೆ ಎಂದು ಹೇಳಿದರು.

ವಿಭಾಗಗಳ ಉದ್ಘಾಟನೆ
ವಿವಿಧ ವಿಭಾಗಗಳನ್ನು ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಶುಭಹಾರೈಸಿದರು.

ಸಮ್ಮಾನ
ಪುತ್ತೂರು ತಾಲೂಕು ಪ್ರಥಮ ತುಳು ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಕರ್ನಾಟಕ ಮುಕ್ತ ವಿ.ವಿ. ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ ರೈ ಹಾಗೂ ಕೋಕಿಲಾ ರೈ ರೈ ದಂಪತಿಯನ್ನು ಸಮ್ಮಾನಿಸಲಾಯಿತು.

ಅಧ್ಯಕ್ಷರ ಆಶಯ
·ತುಳು ಭಾಷೆಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಡಾ| ವಿವೇಕ್‌ ರೈ ಅವರು ತನ್ನ ಆಶಯಗಳನ್ನು ಭಾಷಣದಲ್ಲಿ ಪ್ರಸ್ತುತಪಡಿಸಿದರು.
· ತುಳು ಭಾಷೆಯ ಸಾಹಿತ್ಯ, ಕೃತಿಗಳು ಬೇರೆ ಭಾಷೆಗೆ ತರ್ಜುಮೆ ಆಗಬೇಕು.
· ತುಳುವನ್ನು ಬೇರೆ ಬೇರೆ ಲಿಪಿಗಳಲ್ಲಿ ಹಂಚುವ ಕೆಲಸವಾಗಲಿ.
· ತುಳು ಬರಹದ ಸಾಫ್ಟ್‌ವೇರ್‌ ಕನ್ನಡದಲ್ಲಿ, ರೋಮನ್‌ ಭಾಷೆಯಲ್ಲಿ ಆಗಬೇಕು.
· ಆಟ, ಕೂಟ, ತರ್ಜುಮೆ, ಸಂಶೋಧನೆ, ಕೃಷಿ ಎಲ್ಲದರಲ್ಲೂ ತುಳುವಿನ ಕಾರ್ಯಕ್ರಮಗಳು ನಡೆಯುವಂತಾಗಬೇಕು.

ತುಳುವಿಗೆ ವಿಶ್ವಮಾನ್ಯತೆ
ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನವಿತ್ತು, ಭಾಷೆ ಮತ್ತು ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇದು ಉಳಿದಲ್ಲಿ ಊರು, ನಾಡು ಉಳಿಯುತ್ತದೆ. ಇದಕ್ಕಾಗಿ ಶುದ್ಧತೆ ಕಾಪಾಡಿಕೊಳ್ಳುವುದೂ ಅಗತ್ಯ. ತುಳುವಿಗೆ ಇಂದು ವಿಶ್ವಮಾನ್ಯತೆ ಬಂದಿದೆ. ಈ ಭಾಗಕ್ಕೆ ತುಳುನಾಡು ಎನ್ನುವ ಹೆಸರಿಡಲೂ ಕಷ್ಟವಾಗದು. ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದೂ ಸಾಧ್ಯವಾಗುತ್ತದೆ ಎಂದರು.

ಪುಸ್ತಕಗಳ ಬಿಡುಗಡೆ
ತುಳು ಸಾಹಿತಿ ಭಾಸ್ಕರ ರೈ ಕುಕ್ಕುವಳ್ಳಿ ಅವರ ಗಂಧಸಾಳೆ ಪುಸ್ತಕ, ಅಗ್ರಾಳ ನಾರಾಯಣ ರೈ ಅವರ ತುಳುವೆರೆ ಮರಪಂದಿ ನೆನಪುಲು ಪುಸ್ತಕ ಹಾಗೂ ಪೂವರಿ ತುಳು ಮಾಸ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.