Thursday, September 19, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪ್ರಣವ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಹಾಗೂ ವಾರ್ಷಿಕ ಸಂಚಿಕೆ ರಾಮಧ್ವನಿ ಬಿಡುಗಡೆ – ಕಹಳೆ ನ್ಯೂಸ್

ಶ್ರೀರಾಮ ಪ್ರಥಮದರ್ಜೆ ಕಾಲೇಜಿನ ಪ್ರಣವ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಕಾಲೇಜಿನ ಆಜಾದ್ ಭವನದಲ್ಲಿ ನಡೆಯಿತು. ಅತಿಥಿಗಳಿಂದ ಭಾರತ ಮಾತೆಗೆ ಪುಷ್ಪಾರ್ಚನೆ ಹಾಗೂ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ನಂತರ ರಾಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ಇವರು ಚುನಾವಣಾ ವರದಿವಾಚನ ನಡೆಸಿದರು.

ಶ್ರೀರಾಮನ ಮೂರ್ತಿಗೆ ಪುಷ್ಪಾರ್ಚನೆ ಹಾಗೂ ಕ್ಷೀರಾಭಿಷೇಕ ಮಾಡುವುದರ ಮೂಲಕ ಪ್ರಣವ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಕ್ಯಾ. ಶ್ರೀ ಬ್ರಿಜೇಶ್ ಚೌಟ ಅವರು ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಪ್ರಾಂಶುಪಾಲ ಕೃಷ್ಣ ಪ್ರಸಾದ್ ವಿದ್ಯಾರ್ಥಿ ಸಂಘದ ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶ್ರೀರಾಮ ವಿದ್ಯಾಸಂಸ್ಥೆಯ ಹಿರಿಯರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಿಕ್ಕ ಅವಕಾಶಗಳನ್ನು ವ್ಯರ್ಥಗೊಳಿಸದೆ ಸದುಪಯೋಗಪಡಿಸಿಕೊಳ್ಳಲು ಕಲಿಯಬೇಕು, ಸದ್ಗುರುವಿನ ಮಾರ್ಗದರ್ಶನದಲ್ಲಿ ಗುರಿ ಸಾಧನೆಗೆ ಶ್ರಮಿಸಬೇಕು. ವಿದ್ಯಾರ್ಥಿ ಶಕ್ತಿಯೇ ರಾಷ್ಟ್ರ ಶಕ್ತಿ ಎಂದು ಹೇಳಿದರು.

ಜಾಹೀರಾತು

ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿದ ಕ್ಯಾ. ಬ್ರಿಜೇಶ್ ಚೌಟ ಅವರು ಜೀವನದಲ್ಲಿ ಶಿಸ್ತಿನ ಪ್ರಾಮುಖ್ಯತೆಯನ್ನು ತಿಳಿಸಿ, ಪ್ರತಿಯೊಂದು ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದರು. ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರನ್ನು ಉದಾಹರಿಸಿ ಅವರಂತೆ ಸಾಧನೆ ಮಾಡಲು ಮನಸ್ಸಿರಬೇಕು, ಜೀವನದ ಸಂದರ್ಭಗಳನ್ನು ಸರಿಯಾಗಿ ನಿರ್ವಹಿಸಲು ಕಲಿಯಬೇಕು ಎಂದು ನುಡಿದರು.

ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ಶ್ರೀ ನಾರಾಯಣ ಸೋಮಯಾಜಿಯವರು ಪದವಿ ಕಾಲೇಜಿನ ವಾರ್ಷಿಕ ಸಂಚಿಕೆಯಾದ ರಾಮಧ್ವನಿಯನ್ನು ಬಿಡುಗಡೆಗೊಳಿಸಿದರು.

ಸಂಸ್ಥೆಯ ಸಂಚಾಲಕ ಶ್ರೀ ವಸಂತ ಮಾಧವ, ಉಪಪ್ರಾಂಶುಪಾಲರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶ್ರೀಮತಿ ಸುಕನ್ಯಾ ಹಾಗೂ ಕಾಲೇಜು ಪ್ರಾಂಶುಪಾಲ ಕೃಷ್ಣ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸಂಧ್ಯಾಕುಮಾರಿ ಸ್ವಾಗತಿಸಿ, ವಿದ್ಯಾರ್ಥಿನಿ ಕು. ವಿಜೇತಾ ವಂದಿಸಿ, ಕನ್ನಡ ಉಪನ್ಯಾಸಕಿ ಶ್ರೀಮತಿ ರಶ್ಮಿತಾ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ಪದ್ಮಶ್ರೀ ಪ್ರಾರ್ಥಿಸಿದರು.