Friday, September 20, 2024
ದೆಹಲಿರಾಜಕೀಯರಾಷ್ಟ್ರೀಯಸುದ್ದಿ

ರಾಜಕೀಯ ಲಾಭಕ್ಕಾಗಿ ಸುಳ್ಳು ಹೇಳಿದ್ರಾ ವಿನೇಶ್ ಫೋಗಟ್? ಸಂಚಲನ ಸೃಷ್ಟಿಸಿದ ವಕೀಲ ಹರೀಶ್ ಸಾಳ್ವೆ ಹೇಳಿಕೆ – ಕಹಳೆ ನ್ಯೂಸ್

Vinesh Phogat: ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ವಿನೇಶ್ ಅವರ ವಿರುದ್ಧ ತೀರ್ಪು ನೀಡಿದಾಗ ಈ ನಿರ್ಧಾರವನ್ನು ಸ್ವಿಸ್ ನ್ಯಾಯಾಲಯದಲ್ಲಿ ಪ್ರಶ್ನಿಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮುಂದಾಗಿತ್ತು. ಆದರೆ ಈ ಬಗ್ಗೆ ವಿನೇಶ್ ಯಾವುದೇ ರೀತಿಯಾಗಿ ಆಸಕ್ತಿ ತೋರಲಿಲ್ಲ ಎಂದು ಹರೀಶ್ ಸಾಳ್ವೆ ಹೇಳಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಧಿಕ ತೂಕ ಹೊಂದಿದ್ದ ಕಾರಣಕ್ಕೆ ಫೈನಲ್ ಪಂದ್ಯದಿಂದ ಅನರ್ಹಗೊಂಡು ಪದಕ ವಂಚಿತರಾಗಿದ್ದ ವಿನೇಶ್ ಫೋಗಟ್, ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಈ ಬಗ್ಗೆ ಮನವಿ ಸಲ್ಲಿಸಿದ್ದರು. ಆದರೆ ವಿಚಾರಣೆ ನಡೆಸಿದ ನ್ಯಾಯಾಲಯ ವಿನೇಶ್ ಅವರ ಅನರ್ಹ ನಿರ್ಧಾರ ಸರಿಯಾಗಿದೆ ಎಂದು ತೀರ್ಪು ನೀಡಿತ್ತು. ಆ ಬಳಿಕ ಕುಸ್ತಿಗೆ ವಿದಾಯ ಹೇಳಿದ್ದ ವಿನೇಶ್, ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಲ್ಲದೆ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಜೂಲಾನಾ ವಿಧಾನಸಭ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಇದೀಗ ಚುನಾವಣಾ ಪ್ರಚಾರದ ವೇಳೆ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿರುವ ವಿನೇಶ್, ನಾನು ಒಲಿಂಪಿಕ್ಸ್​ನಲ್ಲಿ ಅನರ್ಹಗೊಂಡ ನಂತರ ಭಾರತ ಸರ್ಕಾರ ಉದ್ದೇಶಪೂರ್ವಕವಾಗಿ ತನಗೆ ಸಹಾಯ ಮಾಡಲಿಲ್ಲ ಎಂದು ಹೇಳಿಕೊಂಡಿದ್ದರು. ಆದರೀಗ ವಿನೇಶ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಭಾರತದ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ, ವಿನೇಶ್ ಆರೋಪ ಸುಳ್ಳು ಎಂದಿದ್ದಾರೆ.

ಯಾವುದೇ ಹಸ್ತಕ್ಷೇಪ ನಡೆಸಿಲ್ಲ

ಜಾಹೀರಾತು
ಜಾಹೀರಾತು
ಜಾಹೀರಾತು

ಕುಸ್ತಿಗೆ ವಿದಾಯ ಹೇಳಿ ಕಾಂಗ್ರೆಸ್ ಪಕ್ಷ ಸೇರಿದ ಬಳಿಕ ಮಾತನಾಡಿದ್ದ ವಿನೇಶ್, ಭಾರತ ಸರ್ಕಾರ ಉದ್ದೇಶಪೂರ್ವಕವಾಗಿ ತನಗೆ ಸಹಾಯ ಮಾಡಲಿಲ್ಲ. ಅಲ್ಲದೆ ನಾನು ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿದ್ದಾಗ ನನ್ನನ್ನು ನೋಡಲು ಬಂದಿದ್ದ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಅಧ್ಯಕ್ಷೆ ಪಿಟಿ ಉಷಾ ಅವರು, ನನ್ನ ಅನುಮತಿ ಇಲ್ಲದೆ ನನ್ನ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು ಎಂದು ಆರೋಪಿಸಿದ್ದರು. ವಿನೇಶ್ ಅವರ ಈ ಹೇಳಿಕೆಯನ್ನು ಅಲ್ಲಗಳೆದಿರುವ ಭಾರತದ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಅವರು, ವಿನೇಶ್ ಅವರ ಈ ಪ್ರಕರಣದಲ್ಲಿ ಭಾರತ ಸರ್ಕಾರ ಯಾವುದೇ ಹಸ್ತಕ್ಷೇಪ ನಡೆಸಿಲ್ಲ ಎಂದಿದ್ದಾರೆ.

ಜಾಹೀರಾತು

ವಿನೇಶ್ ಆಸಕ್ತಿ ತೋರಲಿಲ್ಲ

ವಾಸ್ತವವಾಗಿ ವಿನೇಶ್ ಅವರನ್ನು ಒಲಿಂಪಿಕ್ಸ್​ನಿಂದ ಅನರ್ಹಗೊಳಿಸಿದ್ದರ ವಿರುದ್ಧವಾಗಿ ಇದೇ ಹರೀಶ್ ಸಾಳ್ವೆ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಇದೀಗ ಆ ಬಗ್ಗೆ ಮಾತನಾಡಿರುವ ಸಾಳ್ವೆ ಅವರು, ‘ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ವಿನೇಶ್ ಅವರ ವಿರುದ್ಧ ತೀರ್ಪು ನೀಡಿದಾಗ ಈ ನಿರ್ಧಾರವನ್ನು ಸ್ವಿಸ್ ನ್ಯಾಯಾಲಯದಲ್ಲಿ ಪ್ರಶ್ನಿಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮುಂದಾಗಿತ್ತು. ಆದರೆ ಈ ಬಗ್ಗೆ ವಿನೇಶ್ ಯಾವುದೇ ರೀತಿಯಾಗಿ ಆಸಕ್ತಿ ತೋರಲಿಲ್ಲ. ಆದರೀಗ ವಿನೇಶ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಾಳ್ವೆ ಹೇಳಿಕೊಂಡಿದ್ದಾರೆ. ಸಾಳ್ವೆ ಅವರ ಹೇಳಿಕೆ ಇದೀಗ ಭಾರಿ ಸಂಚಲನವನ್ನುಂಟು ಮಾಡಿದ್ದು, ವಿನೇಶ್ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹಾಗೆಯೇ ದೇಶದ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.