Friday, September 20, 2024
ಸುದ್ದಿ

ನ.11ಕ್ಕೆ ಪುತ್ತೂರು ಜಿಲ್ಲೆ ರಚನೆಗೆ ಹಕ್ಕೊತ್ತಾಯ ಸಮಿತಿ ರಚಿಸಲು ಸಭೆ: ನ್ಯಾಯವಾದಿ ರಾಮಮೋಹನ್ ರಾವ್ – ಕಹಳೆ ನ್ಯೂಸ್

ಪುತ್ತೂರು: ಉತ್ತಮ ಆಡಳಿತ ವ್ಯವಸ್ಥೆಯನ್ನು ಒದಗಿಸಿಕೊಡುವಲ್ಲಿ ಮತ್ತು ಆ ಮೂಲಕ ನಾಗರಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಸುಲಭವಾಗಿ ತಲುಪುವಲ್ಲಿ ಉಪಯೋಗಕಾರಿಯಾಗಲು ಪುತ್ತೂರು ಜಿಲ್ಲೆಯಾಗಿ ರಚನೆಯಾಗಬೇಕಾಗಿರುವುದು ಅನಿವಾರ್ಯ. ಈ ಕಾರಣದಿಂದಾಗಿ ಸಿಟಿಜನ್ ಪೋರಂ ಅಡಿಯಲ್ಲಿ ಹೋರಾಟ ನಡೆಯುತ್ತಾ ಬಂದಿದ್ದು, ನ.11ಕ್ಕೆ ಪುತ್ತೂರು ನ್ಯಾಲಯಾಲಯ ಸಂಕೀರ್ಣದಲ್ಲಿರುವ ಪರಾಶರ ಸಭಾಭವನದಲ್ಲಿ ಪುತ್ತೂರು ಜಿಲ್ಲೆ ರಚನೆಗೆ ಹಕ್ಕೊತ್ತಾಯ ಸಮಿತಿ ರಚಿಸಲು ಸಭೆ ಕರೆಯಲಾಗಿದೆ ಎಂದು ನ್ಯಾಯವಾದಿ ರಾಮಮೋಹನ್ ರಾವ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ರಾಮನಗರ, ಯಾದಗಿರಿ, ಚಿಕ್ಕಬಳ್ಳಾಪುರ ಜಿಲ್ಲೆಗಳಂತೆ ಪುತ್ತೂರು ಕೂಡಾ ಜನಸಂಖ್ಯೆ, ವಿಸ್ತೀರ್ಣ ಮತ್ತು ಇನ್ನೂ ಹಲವಾರು ವಿಚಾರಗಳಲ್ಲಿ ಒಂದು ಪರಿಪೂರ್ಣ ಜಿಲ್ಲೆಯಾಗಿ ಮಾರ್ಪಡಲು ಎಲ್ಲಾ ರೀತಿಯಾದಂತಹ ಅರ್ಹತೆಗಳನ್ನು ಹೊಂದಿದೆ. ಪುತ್ತೂರು ಜಿಲ್ಲಾ ಕೇಂದ್ರವಾದರೆ, ಜಿಲ್ಲಾ ಪಂಚಾಯತ್, ಜಿಲ್ಲಾಧಿಕಾರಿ, ಎಸ್.ಪಿ ಕಚೇರಿ, ಜಿಲ್ಲಾಸ್ಪತ್ರೆ, ಜಿಲ್ಲಾ ನ್ಯಾಯಾಲಯದಂತಹ ಸರಕಾರ ಮತ್ತು ನಾಗರಿಕರಿಗೆ ಕೊಂಡಿಯಾಗಿರುವಂತಹ ಹಲವಾರು ಸೇವೆಗಳು ಆರಂಭಗೊಂಡು ಇವು ಸ್ಥಳೀಯರಲ್ಲದೆ ಸುಳ್ಯದ ಸಂಪಾಜೆಯಿಂದ ಬೆಳ್ತಂಗಡಿಯ ಕಕ್ಕಿಂಜೆ, ಕಡಬದ ಸಿರಿಬಾಗಿಲು ಮತ್ತು ಗುಂಡ್ಯದಂತಹ ಗಡಿಭಾಗದ ಜನರಿಗೂ ಸುಲಭವಾಗಿ ಕೈಗೆಟಕುತ್ತದೆ. ಪುತ್ತೂರು ಜಿಲ್ಲೆಯಾಗುವ ಎಲ್ಲಾ ಅರ್ಹತೆ ಹೊಂದಿದ್ದರೂ ರಾಜಕೀಯ ಕೊರತೆಯಿಂದ ಹೊಸ ಜಿಲ್ಲೆಯಾಗಿ ತನ್ನ ಸ್ಥಾನ ಗಳಿಸುವಲ್ಲಿ ವಿಫಲವಾಗಿರುವುದು ಹಲವರಲ್ಲಿ ಅಸಮಾಧಾನ ತಂದಿದೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಾಲೂಕು ಮಟ್ಟದಲ್ಲಿ ಉಪಸಮಿತಿ ರಚನೆ:
ಉದ್ಯಮಿ ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ನ ಪ್ರವರ್ತಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮಾತನಾಡಿ, ನ.೧೧ರಂದು ಪುತ್ತೂರಿನಲ್ಲಿ ನಡೆದ ಸಭೆಯ ಬಳಿಕ ಪ್ರಧಾನ ಸಮಿತಿ ರಚನೆಯಾಗಲಿದ್ದು, ಬಳಿಕ ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬದಲ್ಲಿ ಉಪಸಮಿತಿ ರಚನೆ ಮಾಡಲಾಗುವುದು. ೬ತಿಂಗಳಲ್ಲಿ ಜಿಲ್ಲೆಯಾಗುತ್ತದೆ ಎಂಬ ದೃಷ್ಟಿಯಿಂದ ಹೋರಾಟ ಮಾಡುತ್ತಿಲ್ಲ. ಬದಲಗಿ ಹಂತ ಹಂತವಾಗಿ ಎಲ್ಲಾ ಸಂಘಟನೆಗಳು, ಜಾತಿ, ಧರ್ಮ, ರಾಜಕೀಯ, ಗ್ರಾಮ ಪಂಚಾಯತ್, ಸೇರಿದಂತೆ ಎಲ್ಲಾ ಸಂಸ್ಥೆಗಳಿಂದಲೂ ಮನವಿಯನ್ನು ಪಡೆದುಕೊಂಡು ಅದನ್ನು ಸರ್ಕಾರಕ್ಕೆ ಒಪ್ಪಿಸುವ ಕೆಲಸ ಮಾಡಲಿದ್ದೇವೆ ಎಮದು ಹೇಳಿದ್ದಾರೆ.

ಜಾಹೀರಾತು

ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಸೇರಿ ಒಟ್ಟು ೮,೭೮,೯೦೭ ಜನಸಂಖ್ಯೆ ಮತ್ತು ಒಟ್ಟು ೪,೦೨೮ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು ಜಿಲ್ಲೆಯ ಎಲ್ಲಾ ಅರ್ಹತೆ ಪಡೆದಿದೆ. ಉನ್ನತ ಶಿಕ್ಷಣ ಸಂಸ್ಥೆ ಮತ್ತು ಧಾರ್ಮಿಕ ಕ್ಷೇತ್ರಗಳಿವೆ. ಆದರೂ ಸರಕಾರವನ್ನು ಎಚ್ಚರಗೊಳಿಸಲು ಸಂಘಟಿತ ಹೋರಾಟ ಅಗತ್ಯವಿದೆ ಎಂದು ಹೇಳಿದ್ದಾರೆ.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕರಾವಳಿ ಕಲಾ ಪ್ರತಿಷ್ಠಾನ ಬೆಂಗಳೂರು ಇದರ ಗೌರವಾಧ್ಯಕ್ಷ ಸತೀಶ್ ರೈ ನೀರ್ಪಾಡಿ, ಬಡೆಕ್ಕಿಲ ಪ್ರದೀಪ್ ಉಪಸ್ಥಿತರಿದ್ದರು.