ಬಂಟ್ವಾಳ: ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ಕಾಂಕ್ರೀಟ್ ಹೆದ್ದಾರಿ ಅಭಿವೃದ್ಧಿಯ ಭಾಗವಾಗಿ ಉಪ್ಪಿನಂಗಡಿ ಸಮೀಪದಲ್ಲಿ ನೀರಕಟ್ಟೆ-ವಳಾಲಿನಲ್ಲಿ ಟೋಲ್ಪ್ಲಾಝಾ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಹೆದ್ದಾರಿ ಕಾಮಗಾರಿ ಮುಗಿಯುತ್ತಿದ್ದಂತೆ ಟೋಲ್ಗೇಟ್ ಆರಂಭವಾಗುವ ಸಾಧ್ಯತೆ ಇದೆ.
ಹೆದ್ದಾರಿ ಕಾಮಗಾರಿಯ ಪ್ರಾರಂಭದಲ್ಲಿ ಕಲ್ಲಡ್ಕ ಸಮೀಪದಲ್ಲಿ ಟೋಲ್ ಆರಂಭವಾಗಲಿದೆ ಹಾಗೂ ಬ್ರಹ್ಮರಕೂಟ್ಲು ಟೋಲ್ ಮುಚ್ಚಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಹೊಸ ಟೋಲ್ ಉಪ್ಪಿನಂಗಡಿ ಭಾಗದಲ್ಲಿ ನಿರ್ಮಾಣ ಆಗಲಿರುವುದರಿಂದ ಬ್ರಹ್ಮರಕೂಟ್ಲು ಟೋಲ್ ಸದ್ಯಕ್ಕೆ ಮುಚ್ಚುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಪ್ರಸ್ತುತ ಉಪ್ಪಿನಂಗಡಿಯಿAದ ಸುಮಾರು 8 ಕಿ.ಮೀ.ದೂರದ ಬಜತ್ತೂರು ಗ್ರಾಮದ ವಳಾಲಿನಲ್ಲಿ ಟೋಲ್ ನಿರ್ಮಾಣಗೊಳ್ಳುತ್ತಿದೆ. ಇಲ್ಲಿ ವಿಶಾಲವಾದ ಜಾಗ ಇರುವುದು ಇದಕ್ಕೆ ಪೂರಕವಾಗಿದೆ.
ಪ್ರಸ್ತುತ ಅಲ್ಲಿ ಹೆದ್ದಾರಿಯ ಕಾಂಕ್ರೀಟ್ ಪೂರ್ಣಗೊಂಡಿದ್ದು, ಟೋಲ್ ಪ್ಲಾಝಾ ಅನುಷ್ಠಾನದ ಕಾರ್ಯ ನಡೆಯುತ್ತಿದೆ. ಶೆಲ್ಟರ್ ನಿರ್ಮಾಣಕ್ಕೆ ಕಬ್ಬಿಣದ ರಾಡ್ಗಳು ಬಂದು ರಾಶಿ ಬಿದ್ದಿವೆ. ಹೆದ್ದಾರಿಯ ಪಕ್ಕದಲ್ಲೇ ಕಾಂಪ್ಲೆಕ್ಸ್ ಕೂಡ ನಿರ್ಮಾಣಗೊಂಡಿದೆ. ಟೋಲ್ ಅನುಷ್ಠಾನದ ಇತರ ನಿರ್ಮಾಣಗಳು ಶೀಘ್ರ ಪೂರ್ಣಗೊಳ್ಳುತ್ತದೆ ಎಂದು ಮೂಲಗಳು ತಿಳಿಸಿದೆ.
ಇನ್ನೂ ಆಗದ ನೋಟಿಫಿಕೇಶನ್
ಟೋಲ್ ಆರಂಭಗೊಳ್ಳಬೇಕಾದರೆ ಅದಕ್ಕೆ ಪ್ರತ್ಯೇಕ ನೋಟಿಫಿಕೇಶನ್ ಆಗಬೇಕಿದ್ದು, ಪ್ರಸ್ತುತ ಅಂತಹ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಆ ಪ್ರಕ್ರಿಯೆಗಳು ನಡೆದ ಬಳಿಕವೇ ಟೋಲ್ ಸಂಗ್ರಹದ ಕಾರ್ಯವನ್ನು ಯಾರು ನಿರ್ವಹಿಸುತ್ತಾರೆ, ಸ್ಥಳೀಯರಿಗೆ ಯಾವ ರೀತಿಯ ಶುಲ್ಕ, ವಿನಾಯಿತಿ ಹೇಗೆ, ಉಳಿದ ವಾಹನಗಳಿಗೆ ಹೇಗೆ ಶುಲ್ಕ ಇರುತ್ತದೆ ಎಂಬುದು ನೋಟಿಫಿಕೇಶನ್ ಪ್ರಕ್ರಿಯೆಯಲ್ಲಿ ನಡೆಯಲಿದ್ದು, ಅದು ಇನ್ನೂ ನಿರ್ಧಾರ ಆಗಿಲ್ಲ.
ತಲಾ 4 ಟೋಲ್ ಬೂತ್ಗಳು
ಬಿ.ಸಿ.ರೋಡು-ಪೆರಿಯಶಾಂತಿ ಮಧ್ಯದ 48 ಕಿ.ಮೀ.ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆ ಕೆಎನ್ಆರ್ ಕನ್ಸ್ಟ್ರಕ್ಷನ್ ಕಂಪೆನಿಯೇ ಟೋಲ್ ಪ್ಲಾಝಾನಿರ್ಮಾಣದ ಕಾರ್ಯವನ್ನೂ ನಿರ್ವಹಿಸುತ್ತಿದೆ. ಚತುಷ್ಪಥ ಹೆದ್ದಾರಿಯಲ್ಲಿ ಎರಡೂ ಕಡೆ ತಲಾ ನಾಲ್ಕು ಟೋಲ್ ಬೂತ್ಗಳು ಅನುಷ್ಠಾನಗೊಳ್ಳಲಿದ್ದು, ಅಂದರೆ ಒಂದೇ ಸಮಯಕ್ಕೆ ಎರಡು ಬದಿ ಸೇರಿ ಒಟ್ಟು ಎಂಟು ಲೇನ್ಗಳಲ್ಲಿ ವಾಹನ ಸಾಗಲು ಅವಕಾಶ ಇರಲಿದೆ.
ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿಯ ಭಾಗದಲ್ಲಿ ವಳಾಲು-ನೀರಕಟ್ಟೆ ಮಧ್ಯೆ ಟೋಲ್ ನಿರ್ಮಾಣಗೊಳ್ಳುತ್ತಿದ್ದು, ಒಂದೇ ಕಡೆ ಟೋಲ್ ಇರುತ್ತದೆ. ಅದು ಯಾವ ರೀತಿ ಕಾರ್ಯಾಚರಿಸುತ್ತದೆ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರಗೊಳ್ಳಲಿದೆ.