2 ಲಕ್ಷ ಲಂಚಕ್ಕೆ ಬೇಡಿಕೆ ಆರೋಪ : ಬೆಂಗಳೂರಲ್ಲಿ ತಹಸೀಲ್ದಾರ್ ಸೇರಿ ಮೂವರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು-ಕಹಳೆ ನ್ಯೂಸ್
ಬೆಂಗಳೂರು : ಜಮೀನು ಮಾಲೀಕರ ಹೆಸರನ್ನು ಪಹಣಿಯಲ್ಲಿ ಸೇರಿಸಲು 2 ಲಕ್ಷ ಲಂಚ ಪಡೆಯುತ್ತಿದ್ದ ಯಲಹಂಕ ತಾಲ್ಲೂಕಿನ ವಿಶೇಷ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಸೇರಿ ಮೂವರನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಧ್ಯವರ್ತಿಗಳಾದ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕ ನಾಗರಾಜು ಮತ್ತು ಸಂದೀಪ್ ಹಾಗೂ ಮುನಿಶಾಮಿ ರೆಡ್ಡಿ ಬಂಧಿತ ಆರೋಪಿಗಳು.
ಜಮೀನಿನ ದಾಖಲೆಗೆ ಮಾಲೀಕರ ಹೆಸರು ಸೇರಿಸುವಂತೆ ವಕೀಲ ಮಹೇಶ್ ಅವರು ಅರ್ಜಿ ಸಲ್ಲಿಸಿದ್ದರು. ಕೆಲಸ ಮಾಡಿಕೊಡಲು ವಿಶೇಷ ತಹಶೀಲ್ದಾರ್ ಅವರು 10 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 3ಲಕ್ಷ ಪಡೆದುಕೊಂಡಿದ್ದರು. ಎರಡನೇ ಕಂತಿನಲ್ಲಿ 2 ಲಕ್ಷ ಕೊಡುವಂತೆ ಸೂಚಿಸಿದ್ದರು. ಈ ಕುರಿತು ಮಹೇಶ್ ಅವರು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು.
ವಿಶೇಷ ತಹಶೀಲ್ದಾರ್ ಸೂಚನೆಯಂತೆ ನಾಗರಾಜು ಅವರನ್ನು ಭೇಟಿಮಾಡಿದ ದೂರುದಾರ 2 ಲಕ್ಷ ನಗದನ್ನು ನೀಡಿದರು. ನಾಗರಾಜು ಹಣವನ್ನು ತನ್ನ ಸಂಬಂಧಿಯೂ ಆದ ವಿಐಟಿ ಕಾಲೇಜು ಪ್ರಯೋಗಾಲಯದ ಸಿಬ್ಬಂದಿ ಸಂದೀಪ್ ಕೈಗೆ ನೀಡಿದ್ದರು. ತಕ್ಷಣ ದಾಳಿಮಾಡಿದ ಲೋಕಾಯುಕ್ತದ ಪೊಲೀಸರು, ಇಬ್ಬರನ್ನೂ ಬಂಧಿಸಿದರು. ಬಳಿಕ ಮುನಿಶಾಮಿ ರೆಡ್ಡಿ ಅವರನ್ನು ವಶಕ್ಕೆ ಪಡೆದು, ಬಂಧಿಸಲಾಯಿತು.