ಉಡುಪಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಐತಿಹಾಸಿಕ ಮಹಾಕುಂಭಮೇಳ ನಡೆಯುತ್ತಿದೆ. 144 ವರ್ಷಗಳ ನಂತರ ನಡೆಯುತ್ತಿರುವ ಅತ್ಯಂತ ಅಪರೂಪದ ಕುಂಭಮೇಳ ಇದಾಗಿದ್ದು, ಈವರೆಗೆ ಸುಮಾರು ಕೋಟ್ಯಾಂತರ ಜನರು ಪುಣ್ಯ ಸ್ನಾನ ಮಾಡಿದ್ದಾರೆ. ಉಡುಪಿಯ ಸ್ಯಾಂಡ್ ಥೀಮ್ ತಂಡ ಕೋಟೇಶ್ವರದ ಹಳೆಅಳಿವೆ ಕಡಲ ತೀರದಲ್ಲಿ “ಅಮೃತ ಸ್ನಾನ” ಧ್ಯೇಯದೊಂದಿಗೆ ರಚಿಸಿದ ಮಹಾಕುಂಭಮೇಳದ ಮರಳು ಶಿಲ್ಪ ಕಣ್ಮನ ಸೆಳೆಯುತ್ತಿದೆ.
144 ವರ್ಷಕ್ಕೊಮ್ಮೆ ನಡೆಯುವ ಅಮೃತಸ್ನಾನದ ಪಾಪ ಕರ್ಮ-ಮೋಕ್ಷಗಳ ಸಾಕಾರಗೊಳಿಸುವ ಮಹಾಕುಂಭ ಮೇಳವನ್ನು ಕೇಂದ್ರೀಕರಿಸಿ 5 ಅಡಿ ಎತ್ತರ ಮತ್ತು 7 ಅಡಿ ಅಗಲದ ಮರಳು ಶಿಲ್ಪ ಕಲಾಕೃತಿಯನ್ನು ಸ್ಯಾಂಡ್ ಥೀಮ್ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ ಮತ್ತು ಉಜ್ವಲ್ ನಿಟ್ಟೆ ರಚಿಸಿದರು.