
ಉತ್ತರಪ್ರದೇಶ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ (85ವರ್ಷ) ನಿಧನರಾಗಿರುವುದಾಗಿ ವರದಿ ತಿಳಿಸಿದೆ.
ಸತ್ಯೇಂದ್ರ ದಾಸ್ ಅವರು ಬ್ರೈನ್ (ಮೆದುಳು) ಸ್ಟ್ರೋಕ್ ಗೆ ಒಳಗಾದ ನಂತರ ಲಕ್ನೋದ ಸಂಜಯ್ ಗಾಂಧಿ ಪೋಸ್ಟ್ ಗ್ರ್ಯಾಜ್ಯುಯೇಟ್ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದಾಸ್ ಅವರ ಅನುಯಾಯಿ ಪ್ರದೀಪ್ ದಾಸ್ ಅವರು ನೀಡಿರುವ ಮಾಹಿತಿ ಪ್ರಕಾರ, ದೈವಾಧೀನರಾದ ಸತ್ಯೇಂದ್ರ ದಾಸ್ ಅವರ ಪಾರ್ಥಿವ ಶರೀರವನ್ನು ಪವಿತ್ರ ನಗರಿ ಲಕ್ನೋದಲ್ಲಿ ಇಡಲಾಗಿದ್ದು, ಗುರುವಾರ (ಫೆ.13) ಅಯೋಧ್ಯೆಯ ಸರಯೂ ನದಿ ಪಾತ್ರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮೆದುಳು ಪಾರ್ಶ್ವವಾಯು ಆಘಾತಕ್ಕೆ ಒಳಗಾಗಿದ್ದ ಆಚಾರ್ಯ ಸತ್ಯೇಂದ್ರ ದಾಸ್ ಅವರನ್ನು ಭಾನುವಾರ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿರುವುದಾಗಿ ಎಸ್ ಜಿಪಿಜಿಐ ಆಸ್ಪತ್ರೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.