![](https://www.kahalenews.com/wp-content/uploads/2025/02/573b9d2a7bed4d09842fc02d6dfb14b036dd5f214f3376154bd2510ac0840ea9-750x450.jpg)
ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯನ್ನು ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಏಕೆಂದರೆ ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ, ಆದರೆ ಅವರಲ್ಲಿ ಸುಮಾರು 1000-1200 ಅಭ್ಯರ್ಥಿಗಳನ್ನು ಮಾತ್ರ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.
ಹಲವಾರು ಪ್ರಯತ್ನಗಳ ನಂತರವೂ UPSC ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ. ಆದರೆ ಇಲ್ಲೊಂದು ಕುಟುಂಬ ಇಬ್ಬರು ಸಹೋದರಿಯರು ತಮ್ಮ ಬಡತನವನ್ನು ಮೆಟ್ಟಿನಿಂತು ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ತಮಿಳುನಾಡಿನ ಕಡಲೂರು ಜಿಲ್ಲೆಯ ಬಡ ಕುಟುಂಬದಲ್ಲಿ ಜನಿಸಿದರೂ ಕೂಡ ಐಶ್ವರ್ಯ ರಾಮನಾಥನ್ ಮತ್ತು ಸುಶ್ಮಿತಾ ರಾಮನಾಥನ್ ಅವರ ಸಾಧನೆಗೆ ಬಡತನ ಸ್ವಲ್ಪವೂ ಅಡ್ಡಿಯಾಗಲಿಲ್ಲ. ಶಾಲಾ ದಿನಗಳಿಂದಲೇ ಟಾಪರ್ ಆಗಿದ್ದ ಈ ಸಹೋದರಿಯರಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗುವುದು ಕನಸಾಗಿತ್ತು. ಅದರಂತೆ ತನ್ಮ ಕನಸುಗಳನ್ನು ಎಂದಿಗೂ ಬಿಟ್ಟುಕೊಡದೇ ಇದೀಗ ಅಕ್ಕ IAS ಅಧಿಕಾರಿಯಾಗಿ ಮತ್ತು ತಂಗಿ IPS ಅಧಿಕಾರಿ ಮಿಂಚಿದ್ದಾರೆ. ಈ ಮೂಲಕ ಸಾಕಷ್ಟು ಯುವಪೀಳಿಗೆಗೆ ಮಾದರಿಯಾಗಿದ್ದಾರೆ.
ಐಶ್ವರ್ಯ ರಾಮನಾಥನ್ ಐಎಎಸ್ ಅಧಿಕಾರಿ:
ಐಶ್ವರ್ಯ ರಾಮನಾಥನ್ 2018 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 628 ನೇ ರ್ಯಾಂಕ್ ಗಳಿಸಿ, ರೈಲ್ವೆ ಅಕೌಂಟ್ಸ್ ಸೇವೆ (ಆರ್ಎಎಸ್) ಗೆ ಆಯ್ಕೆಯಾಗಿದ್ದರು. ಇದರಿಂದ ತೃಪ್ತರಾಗದ ಐಶ್ವರ್ಯ 2019 ರಲ್ಲಿ ಮತ್ತೆ ಪರೀಕ್ಷೆಗೆ ಹಾಜರಾದರು. ಈ ಬಾರಿ 44 ನೇ ಶ್ರೇಯಾಂಕದೊಂದಿಗೆ ತೇರ್ಗಡೆಯಾದ ಐಶ್ವರ್ಯ ತನ್ನ 22 ನೇ ವಯಸ್ಸಿನಲ್ಲಿ ಐಎಎಸ್ ಅಧಿಕಾರಿಯಾಗಿ ಹೊರ ಹೊಮ್ಮಿದ್ದರು.
ಸುಶ್ಮಿತಾ ರಾಮನಾಥನ್ ಐಪಿಎಸ್ ಅಧಿಕಾರಿ:
ತನ್ನ ಸಹೋದರಿಯ ಹೆಜ್ಜೆಗಳನ್ನು ಸ್ಪೂರ್ತಿಯಾಗಿಸಿಕೊಂಡ ಸುಶ್ಮಿತಾ ಕೂಡ UPSC ಗೆ ಚೆನ್ನಾಗಿ ತಯಾರಿ ನಡೆಸಿದ್ದರು,ಆದರೆ ಮೊದಲ ಐದು ಪ್ರಯತ್ನಗಳಲ್ಲಿ ವಿಫಲರಾದರು. ಆದಾಗ್ಯೂ, ಛಲವನ್ನು ಬಿಡದೇ 2022 ರಲ್ಲಿ ಮತ್ತೆ ಪರೀಕ್ಷೆಗೆ ಹಾಜರಾದರು. ಈ ಬಾರಿ ಅಖಿಲ ಭಾರತ ಮಟ್ಟದಲ್ಲಿ 528 ನೇ ಶ್ರೇಯಾಂಕದೊಂದಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸುಶ್ಮಿತಾ ಐಪಿಎಸ್ ಆಗುವ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಈ ಸಹೋದರಿಯರು ಇದೀಗ ಲಕ್ಷಾಂತರ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ.