
ಉಡುಪಿ: ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಭಾಗವಹಿಸಲು ಕರಾವಳಿಗರ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಿರುವ ವಿಶೇಷ ರೈಲು ಸೇವೆಗೆ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸೋಮವಾರ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದರು.
ಯಾತ್ರಾರ್ಥಿಗಳು ಸಾವಧಾನದಿಂದ ಪುಣ್ಯಸ್ನಾನ ಮಾಡಿ ಎಂದು ಕಿವಿಮಾತು ಹೇಳಿದ ಅವರು, ಭರತಭೂಮಿ ಪವಿತ್ರ ಕ್ಷೇತ್ರ. ಉಡುಪಿ ಕೂಡ ತೀರ್ಥಕ್ಷೇತ್ರ. ಮಧ್ವಾಚಾರ್ಯರು ದ್ವಾರಕೆಯಿಂದ ಶ್ರೀಕೃಷ್ಣನನ್ನು ತಂದು ಪ್ರತಿಷ್ಠಾಪನೆ ಮಾಡಿದ್ದಾರೆ. ಪ್ರತಿ 12 ವರ್ಷಕ್ಕೊಮ್ಮೆ ಇಲ್ಲಿನ ಮಧcಸರೋವರಕ್ಕೆ ಗಂಗೆ ಬರುತ್ತಾಳೆ ಎಂಬ ಪ್ರತೀತಿಯಿದೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮೊದಲು 21 ಬೋಗಿಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಬೇಡಿಕೆ ಹೆಚ್ಚಿದ್ದರಿಂದ ಎರಡು ಬೋಗಿಗಳನ್ನು ಹೆಚ್ಚುವರಿಯಾಗಿ ಜೋಡಿಸಲಾಗಿದೆ. ಸುಮಾರು 1,400 ಯಾತ್ರಾರ್ಥಿಗಳಿಗೆ ಪ್ರಯಾಣಕ್ಕೆ ವ್ಯವಸ್ಥೆಯಾಗಿದೆ ಎಂದರು.
ಒಂದೊಮ್ಮೆ ಕುಂಭಮೇಳ ವಿಸ್ತರಣೆ ಯಾದಲ್ಲಿ ಇನ್ನೊಂದು ವಿಶೇಷ ರೈಲಿಗೆ ಬೇಡಿಕೆ ಮುಂದಿಡಲಿದ್ದೇವೆ. ಈಗಾಗಲೇ ಮನವಿ ಸಲ್ಲಿಸಿದ್ದೇವೆ ಎಂದರು.
ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಬಿಜೆಪಿ ಪ್ರಮುಖರಾದ ಕುಯಿಲಾಡಿ ಸುರೇಶ್ ನಾಯಕ್, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ, ಶ್ರೀಶ ನಾಯಕ್ ಪೆರ್ಣಂಕಿಲ, ಕೊಂಕಣ ರೈಲು ಗೋವಾ ವಲಯ ವಾಣಿಜ್ಯ ವ್ಯವಹಾರ ವಿಭಾಗದ ಕಾರ್ಯಕಾರಿ ನಿರ್ದೇಶಕ ಜೋಸೆಫ್ ಇ. ಜಾರ್ಜ್, ಹಿರಿಯ ಟ್ರಾಫಿಕ್ ಮ್ಯಾನೇಜರ್ ದಿಲೀಪ್ ಡಿ. ಭರ್, ಪಿಆರ್ಒ ಸುಧಾ ಕೃಷ್ಣಮೂರ್ತಿ, ಕಾರವಾರ ಡೆಪ್ಯೂಟಿ ಚೀಫ್ ಎಂಜಿನಿಯರ್ ವಿಜಯ ಕುಮಾರ್ ಉಪಸ್ಥಿತರಿದ್ದರು.