ರಂಗೋತ್ಸವ ಕಾರ್ಯಕ್ರಮದ ಪಟ್ಟಿಯಿಂದ ಭೂತಾರಾಧನೆ ಕೈ ಬಿಡಲು ತುಳು ಅಕಾಡೆಮಿ ಆಗ್ರಹ-ಕಹಳೆ ನ್ಯೂಸ್

ಮಂಗಳೂರು: ಶಾಲೆಗಳಲ್ಲಿ ಆಯೋಜಿಸಲು ಉದ್ದೇಶಿಸಿರುವ ರಂಗೋತ್ಸವ ಕಾರ್ಯಕ್ರಮದ ಪಟ್ಟಿಯಿಂದ ಭೂತಾರಾಧನೆಯ ಉಲ್ಲೇಖವನ್ನು ಕೈ ಬಿಡುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಯೋಜನಾ ನಿರ್ದೇಶಕರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ದೇಶದ ವಿಭಿನ್ನ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅಭಿರುಚಿ ಮೂಡಿಸುವ ಸಲುವಾಗಿ ಆಯೋಜಿಸಿರುವ ರಂಗೋತ್ಸವವು ಉತ್ತಮ ಪರಿಕಲ್ಪನೆಯಾಗಿದೆ. ಆದರೆ, ಕಾರ್ಯಕ್ರಮದ ಪಟ್ಟಿಯಲ್ಲಿ ಭೂತಾರಾಧನೆಯನ್ನು ಉಲ್ಲೇಖ ಮಾಡಿರುವುದು ಇಲಾಖೆಯ ಸರಿಯಾದ ನಡೆಯಲ್ಲ. ಭೂತಾರಾಧನೆಯು ಕರಾವಳಿಯ ಅತ್ಯುನ್ನತ ಸಾಂಸ್ಕೃತಿಕ ಹಾಗೂ ಆರಾಧನಾ ಪರಂಪರೆಯಾಗಿದೆ. ಹೀಗಾಗಿ, ಭೂತಾರಾಧನೆಯನ್ನು ಸಾಂಸ್ಕೃತಿಕ ಸ್ಪರ್ಧೆಯ ಭಾಗವಾಗಿ ಪರಿಗಣಿಸಬಾರದು. ಭೂತಾರಾಧನೆಯ ಹೆಸರನ್ನು ಕೈ ಬಿಟ್ಟು ಪ್ರತ್ಯೇಕ ಸುತ್ತೋಲೆಯನ್ನು ಹೊರಡಿಸಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.