
ಹುಬ್ಬಳ್ಳಿ: ಜೀವನಾಂಶ ಕೇಳಿ ಕೋರ್ಟ್ ಮೆಟ್ಟಿಲೇರಿದ್ದ ಮಹಿಳೆಯೊಬ್ಬಳು ಒಂದು ವರ್ಷದ ಹಿಂದೆಯೇ ಪತಿ ವಿಚ್ಛೇದನ ಪಡೆದಿರುವುದು ಗೊತ್ತಾಗಿ ಕೋರ್ಟ್ ಆವರಣದಲ್ಲಿಯೇ ಸಹೋದರಿಯೊಂದಿಗೆ ಪತಿಗೆ ಥಳಿಸಿದ ಘಟನೆ ಸೋಮವಾರ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ನಗರದ ಶಾಂತಿನಿಕೇತನ ಕಾಲೋನಿ ನಿವಾಸಿ ಲಲಿತಾ ಎಂಬುವರು ವಾಯವ್ಯ ಸಾರಿಗೆ ಸಂಸ್ಥೆಯ ನೌಕರ ಬೆಳಗಾವಿ ಜಿಲ್ಲೆ ರಾಮದುರ್ಗದ ಕುಮಾರನಿಂದ ಜೀವನಾಂಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ಆದರೆ ಕುಮಾರ ಕೋರ್ಟ್ಗೆ ಹಾಜರಾಗಿರಲಿಲ್ಲ. ಸೋಮವಾರ ನ್ಯಾಯಾಲಯಕ್ಕೆ ಆಗಮಿಸಿದ್ದಾಗ, ರಾಮದುರ್ಗ ಕೋರ್ಟ್ನಲ್ಲಿ ಕಳೆದ ವರ್ಷ ಜೂನ್ನಲ್ಲೇ ವಿಚ್ಛೇದನ ಪಡೆದಿರುವುದು ಗೊತ್ತಾಗಿದೆ. ಇದರಿಂದ ಸಿಟ್ಟಾದ ಲಲಿತಾ ತನ್ನ ನಕಲಿ ಸಹಿ ಮಾಡಿ ವಿಚ್ಛೇದನ ಪಡೆಯಲಾಗಿದೆ ಎಂದು ಆರೋಪಿಸಿ, ಸಹೋದರಿಯೊಂದಿಗೆ ಪತಿಗೆ ಥಳಿಸಿದ್ದಾರೆ.
ಅಲ್ಲಿಯೇ ಇದ್ದ ಕೆಲ ವಕೀಲರು ಹಾಗೂ ಸಾರ್ವಜನಿಕರು ಕುಮಾರ ಅವರನ್ನು ಅವರಿಂದ ಬಿಡಿಸಿ ಕಳುಹಿಸಿದ್ದಾರೆ. ಪತ್ನಿಯು ಪತಿ ಮೇಲೆ ಹಲ್ಲೆ ಮಾಡುತ್ತಿರುವುದನ್ನು ಅಲ್ಲಿದ್ದ ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.