ಮಾನಸಿಕ ಸಮತೋಲನ ಸಾಧಿಸಲು ಸಾಹಿತ್ಯ ನೆರವು ನೀಡುತ್ತದೆ: ಡಾ. ಸೌಮ್ಯ ಎಚ್-ಕಹಳೆ ನ್ಯೂಸ್

ಮಂಗಳೂರು, ಮಾ. 20: ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಸಾಹಿತ್ಯ ನೆರವಾಗುತ್ತದೆ. ಸಾಹಿತ್ಯವನ್ನು ಜ್ಞಾನವಾಗಿಸಿಕೊಂಡಾಗ ನಿಜಾರ್ಥದಲ್ಲಿ ಬದುಕನ್ನು ಸರಳೀಕರಣಗೊಳಿಸಿಕೊಳ್ಳಲು ಸಾಧ್ಯ ಕಾಸರಗೋಡಿನಪೆರಿಯ ಕೇಂದ್ರೀಯ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ ಎಚ್. ಅವರು ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಕನ್ನಡ ಸಂಘ ಹಾಗೂ ಕಾಸರಗೋಡಿನ ಪೆರಿಯ ಕೇಂದ್ರೀಯ ವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ನಡೆದ ಸವಿ ಸವಿ ಸಾಹಿತ್ಯ ವಿಶೇಷ ಉಪನ್ಯಾಸ ಮತ್ತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಸಾಹಿತ್ಯ ಮನುಷ್ಯನಲ್ಲಿರುವ ಭಯವನ್ನು ಹೋಗಲಾಡಿಸಿ ಆತ್ಮಶುದ್ಧೀಕರಣ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೇ, ಅಂತರAಗ ಶಿಸ್ತಿಗೆ ಕೊಡುಗೆ ನೀಡುತ್ತದೆ. ಆ ಮೂಲಕ ಅಜ್ಞಾನದ ಪೊರೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕಿನ್ನು ಹೊರಸೂಸುತ್ತದೆ. ಕನ್ನಡ ಭಾಷೆ ಎಂದು ಕೀಳರಿಮೆ ಬೆಳೆಸಿಕೊಳ್ಳುವ ಅಗತ್ಯವಿಲ್ಲ. ಅದು ನನ್ನ ಬೇರು ಅದರೊಟ್ಟಿಗೆ ಬೆಳೆಯುವ ಮನಸ್ಥಿತಿ ಬೆಳೆಸಿಕೊಂಡಾಗ ಸಾಹಿತ್ಯ ವಾತಾವರಣ ಸೃಷ್ಟಿಯಾಗಲು ಸಾಧ್ಯ. ಜೊತೆಗೆ ಸಮಾಜದಲ್ಲಿ ಸಾಹಿತ್ಯ ಪರಿಸರ ನಿರ್ಮಾಣ ಮಾಡಬಹುದು ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಹಣ ಸಂಪಾದನೆ ಮಾಡಿದವರಿಗಿಂತ ಜ್ಞಾನ ಸಂಪಾದನೆ ಮಾಡಿದವರನ್ನು ಹೆಚ್ಚಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ. ಹಾಗಾಗಿ, ಜ್ಞಾನ ಸಂಪಾದನೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೇ ಹೊರತು ಹಣ ಸಂಪಾದನೆಗೆ ಅಲ್ಲ. ಸಾಮಾನ್ಯ ಜನರಲ್ಲೂ ಸಾಹಿತ್ಯದ ಪ್ರಜ್ಞೆ ಇರುತ್ತದೆ.
ಅದನ್ನು ಸಂವೇದನಾಶೀಲ ಸೂಕ್ಷ್ಮಮತಿಗಳಾಗಿ ಗ್ರಹಿಸುವ ಕೆಲಸ ಮಾಡಬೇಕು. ಕೇವಲ ಮನುಷ್ಯನಾಗಿ ಹುಟ್ಟಿದರೆ ಸಾಲದು, ಪ್ರತಿಯೊಬ್ಬರೂ ಮನುಷ್ಯತ್ವ ಗುಣವನ್ನು ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ವಿಕಾಸ ಹೊಂದಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಗಣಪತಿ ಗೌಡ, ಸಮಾಜದಲ್ಲಿ ಜ್ಞಾನ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸಾಹಿತ್ಯವನ್ನು ಅಧ್ಯಯನ ಮಾಡಬೇಕಿದೆ.
ವಿಶ್ಲೇಷಣಾತ್ಮಕ ಸಾಮರ್ಥ್ಯ ವೃದ್ಧಿಸಿಕೊಂಡಾಗ ಮಾತ್ರ ಶಿಲೆಗೆ ನಿರ್ದಿಷ್ಟ ರೂಪ ಬರುವ ರೀತಿಯಲ್ಲಿ ಸಾಹಿತ್ಯ ಕ್ಷೇತ್ರ ಮತ್ತಷ್ಟು ಪ್ರಗತಿದಾಯಕವಾಗಿರುತ್ತದೆ. ಇನ್ನಷ್ಟು ಸಾಧನೆ ಮಾಡಲು ಸಾಧ್ಯ.
ಸಮಾಜದಲ್ಲಿ ಅಂತರ ಕಡಿಮೆ ಮಾಡಲು ವೈವಿಧ್ಯಮಯ ಸಾಹಿತ್ಯಗಳ ಅಧ್ಯಯನ ನೆರವಾಗುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಹಿತ್ಯ ಕ್ಷೇತ್ರದಲ್ಲಿ ಲಭ್ಯವಿರುವ ವೇದಿಕೆಗಳನ್ನು ಸಶಕ್ತವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಕನ್ನಡ ಸಾಹಿತ್ಯ ಕುರಿತು ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದೇ ವೇಳೆ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಲಕ್ಷ್ಮಿದೇವಿ ಎಲ್., ಕನ್ನಡ ಸಂಘದ ಸಂಚಾಲಕ ಡಾ. ಮಾಧವ ಎಂ. ಸೇರಿದಂತೆ ವಿಭಾಗದ ಇತರೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.