
ಕುಂದಾಪುರ: ಆಜ್ರಿ ಗ್ರಾ.ಪಂ ವ್ಯಾಪ್ತಿಯ ಬಾಂಡ್ಯ ಸರಕಾರಿ ಪ್ರಾಥಮಿಕ ಶಾಲೆಯ ಹಿಂಭಾಗ ಖಾಸಗಿ ವ್ಯಕ್ತಿಯೋರ್ವರು ಸರ್ಕಾರಿ ಜಾಗಕ್ಕೆ ತಂತಿಬೇಲಿ ಅಳವಡಿಸಿದ ಬಗ್ಗೆ ಸಾರ್ವಜನಿಕ ದೂರು ಬಂದ ಹಿನ್ನೆಲೆ ವಂಡ್ಸೆ ಹೋಬಳಿ ಕಂದಾಯ ಇಲಾಖೆ ಕಾರ್ಯಚರಣೆ ನಡೆಸಿ ತಂತಿಬೇಲಿಯನ್ನು ತೆರವುಗೊಳಿಸಿ ಜಮೀನನ್ನು ಸರ್ಕಾರದ ಸುಪರ್ದಿಗೆ ಪಡೆದ ಘಟನೆ ಗುರುವಾರ ನಡೆದಿದೆ.
ಕಳೆದ ವಾರಗಳ ಹಿಂದೆ ಬಾಂಡ್ಯ ಸರ್ಕಾರಿ ಶಾಲೆಯ ಹಿಂಭಾಗ ಕೊಡ್ಲಾಡಿ ಗ್ರಾಮದ ಸರ್ವೇ ನಂಬರ್ 118/* ರಲ್ಲಿ ಸುಮಾರು 10 ಎಕರೆ ವಿಸ್ತೀರ್ಣವುಳ್ಳ ಸರಕಾರಿ ಅರಣ್ಯ ಪ್ರದೇಶಕ್ಕೆ, ಸರ್ಕಾರಿ ಜಾಗದ ಸಮೀಪದಲ್ಲಿ ಪಟ್ಟಾ ಜಾಗವನ್ನು ಹೊಂದಿದ ಒಂದೇ ಕುಟುಂಬದ ಖಾಸಗಿ ವ್ಯಕ್ತಿಗಳು ಈ ಭೂಮಿಯನ್ನು ಒತ್ತುವರಿ ಮಾಡುವ ಉದ್ದೇಶದಿಂದ ಜಾಗದ ಸುತ್ತಲೂ ಬೇಲಿ ಅಳವಡಿಸಿದಲ್ಲದೇ, ಸರಕಾರಿ ಜಾಗದ ನಡುವೆಯೇ ಮರಗಳನ್ನು ಕಡಿದು ರಸ್ತೆ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯಲ್ಲಿಯೂ ಪ್ರಕರಣ ದಾಖಲಾಗಿದೆ.
ಸರಕಾರಿ ಜಮೀನು ಒತ್ತುವರಿ ದೂರು ಬಂದ ಹಿನ್ನೆಲೆ ಕುಂದಾಪುರ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್ ಆದೇಶದಂತೆ ಗುರುವಾರದಂದು ವಂಡ್ಸೆ ಹೋಬಳಿಯ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಹೋಬಳಿಯ 15 ಮಂದಿ ಗ್ರಾಮ ಆಡಳಿತಾಧಿಕಾರಿಗಳು, 15 ಗ್ರಾಮ ಸಹಾಯಕರು ಸಹಿತ 35 ಕ್ಕೂ ಅಧಿಕ ಸಿಬ್ಬಂದಿ ಅಳವಡಿಸಿದ್ದ ಬೇಲಿ ತೆರವುಗೊಳಿಸಿ ಸೂಚನಾ ಫಲಕವನ್ನು ಅಳವಡಿಸಿದ್ದಾರೆ. ಸರ್ಕಾರ ಅಧೀನಕ್ಕೆ ಪಡೆದ ಜಮೀನನ್ನು ಶೈಕ್ಷಣಿಕ ಮತ್ತು ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೋಟ್:
– ಪ್ರದೀಪ್ ಕುರ್ಡೇಕರ್, ಕುಂದಾಪುರ ತಹಶಿಲ್ದಾರ್
ಕೊಡ್ಲಾಡಿ ಗ್ರಾಮದ ಸರ್ವೇ ನಂಬರ್ 118/* ರ ಮೂಲತಃ ಸರಕಾರಿ ಜಮೀನಾಗಿದ್ದು ಖಾಸಗಿಯವರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಕಳೆದ ವಾರ ದೂರು ಬಂದ ಹಿನ್ನೆಲೆ ಕಂದಾಯ ನಿರೀಕ್ಷಕರಿಗೆ ಒತ್ತುವರಿ ತೆರವುಗೊಳಿಸಲು ಸೂಚಿಸಲಾಗಿತ್ತು. ಅದರಂತೆಯೇ ಗುರುವಾರ ವಂಡ್ಸೆ ಹೋಬಳಿಯ ಸಿಬ್ಬಂದಿಗಳು ಒತ್ತುವರಿ ತೆರವುಗೊಳಿಸಿ ಸರಕಾರದ ಸುಪರ್ದಿಗೆ ಪಡೆಯಲಾಗಿದ್ದು, ಆ ಸ್ಥಳದಲ್ಲಿ ಸರಕಾರಿ ಜಮೀನು ಅತಿಕ್ರಮಿಸಬಾರದು ಎಂದು ಎಚ್ಚರಿಕೆ ಫಲಕ ಅಳವಡಿಸಲಾಗಿದೆ. ಮುಂದಿನ ದಿನದಲ್ಲಿ ಈ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಲಾಗುತ್ತದೆ.