ಪತ್ನಿಯ ನಡವಳಿಕೆಯಿಂದ ಬೇಸತ್ತ ಪತಿ ;ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ-ಕಹಳೆ ನ್ಯೂಸ್

ಹುಣಸೂರು: ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ನಡವಳಿಕೆಯಿಂದ ಬೇಸತ್ತ ಪತಿ ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ತಾಲೂಕಿನ ಬಿಳಿಕೆರೆ ಠಾಣಾ ವ್ಯಾಪ್ತಿಯ ಬೂಚಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ತುಮಕೂರು ಮೂಲದವಳೆನ್ನಲಾದ ಪವಿತ್ರ (26) ಕೊಲೆಯಾದಾಕೆ. ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಬೂಚ ಹಳ್ಳಿಯ ನಾಗೇಶರವರ ಪುತ್ರ ಎಳನೀರು ವ್ಯಾಪಾರಿ ಸಚಿನ್(26) ಶರಣಾಗಿರುವ ಆರೋಪಿ. ಈತನೊಂದಿಗೆ ಬಾಲಪರಾಧಿಯೊಬ್ಬನಿದ್ದಾನೆ.
ಕಳೆದ ಆರು ತಿಂಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಪವಿತ್ರ ತನಗೆ ಯಾರೂ ಇಲ್ಲ, ತಾನು ಇನ್ಫೋಸಿಸ್ ಉದ್ಯೋಗಿ ಎಂದು ನಂಬಿಸಿ, ಆರೋಪಿ ಸಚಿನ್ ಮನೆಯವರ ಸಮ್ಮುಖದಲ್ಲೇ ಸರಳವಾಗಿ ವಿವಾಹವಾಗಿದ್ದರು.
ಸಚಿನ್ ನಿತ್ಯ ಮೈಸೂರಿನ ಇನ್ಪೋಸಿಸ್ಗೆ ಪವಿತ್ರಳನ್ನು ಕರೆದೊಯ್ಯುತ್ತಿದ್ದ, ಆದರೆ ಈಕೆ ನಡವಳಿಕೆ ಮೇಲೆ ಅನುಮಾನಗೊಂಡು ತನ್ನ ದೊಡ್ಡಮ್ಮ ಎಂದು ಹೇಳಿಕೊಂಡಿದ್ದವರಿಗೆ ಕರೆ ಮಾಡಿದಾಗ ಆಕೆ ಯಾರೆಂದು ಗೊತ್ತಿಲ್ಲವೆಂದು ಹೇಳಿದರು, ಅಣ್ಣನೆಂದು ನೀಡಿದ್ದ ಮೊಬೈಲ್ ನಂಬರ್ಗೆ ಕರೆ ಮಾಡಿದರೆ ಆತ ಈಕೆಗೆ ಹಿಂದೆಯೇ ಮದುವೆಯಾಗಿ ವಿಚ್ಛೇದನ ಆಗಿದೆ ಎಂದು ತಿಳಿಯುತ್ತಿದ್ದಂತೆ ಪತ್ನಿಯ ಮೇಲೆ ಸಚಿನ್ ನಿಗಾ ಇಟ್ಟಿದ್ದ, ಆಗಾಗ್ಗೆ ಇಬ್ಬರ ನಡುವೆ ಜಗಳ ನಡೆದಿತ್ತು. ಶುಕ್ರವಾರ ಇನ್ಫೋಸಿಸ್ಗೆ ಕರೆದೊಯ್ಯಲು ಮುಂದಾದಾಗ ಆರೋಗ್ಯ ಸರಿ ಇಲ್ಲವೆಂದು ನೆಪ ಹೇಳುತ್ತಾಳೆ. ಆಕೆಯ ಬಳಿ ಇದ್ದ ಐ.ಡಿ ಕಾರ್ಡ್ ಪಡೆದು ವಿಚಾರಿಸಲಾಗಿ ಇದು ನಕಲಿ ಐಡಿ ಎಂದು ತಿಳಿದು ಆಕ್ರೋಶಿತನಾಗಿ ಮನೆಗೆ ಬಂದು ವಿಚಾರಿಸಿದ್ದು, ಇಬ್ಬರ ನಡುವೆ ಮಾತಿನ ಚಕಮಖಿ ನಡೆದಿದೆ.
ಕೊನೆಗೆ ಆಟೋದಲ್ಲಿ ಗೋಬಿ ತಿನ್ನುವ ಬಾ ಎಂದು ಪುಸಲಾಯಿಸಿ ಪತ್ನಿಯನ್ನು ಕರೆತರುವಾಗ ರಸ್ತೆ ಮಧ್ಯೆದಲ್ಲೇ ಜಮೀನಿನಲ್ಲಿ ಮೋಟಾರ್ ಆಫ್ ಮಾಡಿ ಬರೋಣವೆಂದು ಕರೆದೊಯ್ದು, ಅಪ್ರಾಪ್ತ ಬಾಲಕನ ನೆರವಿನೊಂದಿಗೆ ಕತ್ತಿಗೆ ಹಗ್ಗ ಬಿಗಿದು ಸಾಯಿಸಿ, ನೇರವಾಗಿ ಬಿಳಿಕೆರೆ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಸ್ಥಳಕ್ಕೆ ಎಸ್ .ಪಿ.ವಿಷ್ಣುವರ್ಧನ್, ಅಡಿಷನಲ್ ಎಸ್ .ಪಿ.ಮಾಲಿಕ್, ಡಿವೈಎಸ್ಪಿ ಗೋಪಾಲಕೃಷ್ಣ, ಇನ್ಸ್ಪೆಕ್ಟರ್ ಲೋಲಾಕ್ಷಿ ಭೇಟಿ ಇತ್ತು ಪರಿಶೀಲಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶವ ವನ್ನು ಕೆ.ಆರ್.ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ.