ಏ.13ರಂದು ಎಕೆಬಿಎಂಎಸ್ ಅಧ್ಯಕ್ಷ ಹುದ್ದೆಗೆ ಮತದಾನ: ವೇದಬ್ರಹ್ಮ ಡಾ. ಭಾನುಪ್ರಕಾಶ ಶರ್ಮ- ಕಹಳೆ ನ್ಯೂಸ್

ಬೆಂಗಳೂರು: ದೇಶದ ಪ್ರತಿಷ್ಠಿತ ಸಂಘಟನೆಗಳಲ್ಲೊಂದಾದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್)ನ ನೂತನ ಅಧ್ಯಕ್ಷರ ಹಾಗು ಜಿಲ್ಲಾ ಪ್ರತಿನಿಧಿಗಳ ಆಯ್ಕೆಗೆ ಭಾನುವಾರ ಏಪ್ರಿಲ್ 13ರಂದು ಮತದಾನ ನಡೆಯಲಿದೆ.
ಅಂದು ಬೆಳಗ್ಗೆ 8ರಿಂದ ಸಂಜೆ 4ಗಂಟೆಯವರೆಗೆ ಮತದಾನ ನಡೆಯಲಿದೆ ಎಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ವೇದಬ್ರಹ್ಮ ಡಾ. ಭಾನುಪ್ರಕಾಶ ಶರ್ಮ ತಿಳಿಸಿದ್ದಾರೆ.
ಈಗಾಗಲೆ 11 ಜಿಲ್ಲೆಗಳಲ್ಲಿ ಶ್ರೀ ಅಶೋಕ್ ಹಾರನಹಳ್ಳಿ ಬೆಂಬಲಿತ ಡಾ. ಭಾನುಪ್ರಕಾಶ್ ಶರ್ಮ ತಂಡದ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಭಾನುಪ್ರಕಾಶ್ ಶರ್ಮ, ರಾಜ್ಯಾದ್ಯಂತ ಸುಮಾರು 64 ಸಾವಿರಕ್ಕೂ ಅಧಿಕ ಮತದಾರರು ಇದ್ದು, ಈ ಪೈಕಿ 34,000 ಸಾವಿರಕ್ಕೂ ಅಧಿಕ ಮಂದಿ ಬೆಂಗಳೂರು ನಗರದಲ್ಲಿದ್ದಾರೆ ಎಂದು ಅವರು ತಿಳಿಸಿದರು.
“ಈ ಚುನಾವಣೆ ಸಂಘಟನೆ ಬಲವರ್ಧನೆ ಹಿನ್ನಲೆಯಲ್ಲಿ ಮಹತ್ವದ್ದಾಗಿದ್ದು, ಪ್ರತಿ ಸದಸ್ಯರೂ ತಪ್ಪದೆ ಮತ ಚಲಾಯಿಸಬೇಕು,” ಎಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಅಧ್ಯಕ್ಷರ ಜೊತೆಗೆ ವಿಭಾಗೀಯ ಪ್ರತಿನಿಧಿಗಳ ಆಯ್ಕೆಗೆ ಕೂಡಾ ಮತದಾನ ನಡೆಯಲಿದೆ. ಬೆಂಗಳೂರು ದಕ್ಷಿಣದ ಮತದಾನ ಎನ್ ಆರ್ ಕಾಲನಿಯ ಎಪಿಎಸ್ ಕಾಲೇಜಿನಲ್ಲಿ ನಡೆಯಲಿದೆ. ಬೆಂಗಳೂರು (ಉತ್ತರ)ದ ಮತದಾರರು ಶ್ರೀ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪ, ಶಂಕರಪುರಂ, ಪಂಪ ಮಹಾಕವಿ ರಸ್ತೆ ಇಲ್ಲಿ ತಮ್ಮ ಹಕ್ಕು ಚಲಾಯಿಸಬಹುದು. ಬೆಂಗಳೂರು ಕೇಂದ್ರ, ಗ್ರಾಮಾಂತರ ಹಾಗು ರಾಮನಗರದ ಮತದಾರರು ಶ್ರೀ ರಾಯ ರಾಯ ಕಲ್ಯಾಣ ಮಂಟಪ ನಂ. 88, ಪಂಪಮಹಾಕವಿ ರಸ್ತೆ ಇಲ್ಲಿ ತಮ್ಮ ಮತ ಚಲಾಯಿಸಬಹುದು. ಕೋಲಾರದ ಮತದಾನ ಶ್ರೀ ಗಾಯತ್ರಿ ಪ್ರಾರ್ಥನಾ ಮಂದಿರ, ಪಿಸಿ ಬಡಾವಣೆ, ಕೋಲಾರ ಇಲ್ಲಿ ನಡೆಯಲಿದೆ ಎಂದು ಅವರು ವಿವರಿಸಿದರು.
ಅನೇಕಲ್ , ಉತ್ತರಹಳ್ಳಿ ಮತ್ತು ಇತರೆ ಬಡಾವಣೆಗಳನ್ನು ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿನಗರ ಬಡಾವಣೆಯನ್ನು ಬೆಂಗಳೂರು ಕೇಂದ್ರ ಕ್ಷೇತ್ರ, ಹಾಗು ಯಲಹಂಕ ಪ್ರದೇಶವನ್ನು ಬೆಂಗಳೂರು ಉತ್ತರ ಎಂದು ಪರಿಗಣಿಸಲಾಗಿದೆ ಎಂದು ಅವರು ವಿವರಿಸಿದರು.
ಹೊಸಕೋಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ ಹಾಗು ನೆಲಮಂಗಲ ಬೆಂಗಳೂರು ಗ್ರಾಮಾಂತರ ಎಂದು ಪರಿಗಣಿಸಲ್ಪಡುತ್ತದೆ ಎಂದು ಅವರು ತಿಳಿಸಿದರು.
“ಬೆಂಗಳೂರಿನ ಜೊತೆಗೆ, ಮೈಸೂರು, ಕಲಬುರುಗಿ, ಕೋಲಾರ, ಚಿಕ್ಕಬಳ್ಳಾಪುರ, ವಿಜಯಪುರ, ಬೆಳಗಾಂ,ಗದಗ, ಶಿರಸಿ, ಕೊಪ್ಪಳ, ರಾಯಚೂರು, ಹಾವೇರಿ, ಹುಬ್ಬಳ್ಳಿ, ದಾವಣಗೆರೆ, ಶಿವಮೊಗ್ಗ, ಹಾಸನ, ಕುಂದಾಪುರ, ಮಂಗಳೂರು ಚಿಕ್ಕಮಗಳೂರು, ಕೊಪ್ಪ, ತುಮಕೂರು ಹೀಗೆ ರಾಜ್ಯದ ಹಲವೆಡೆ ಏಕ ಕಾಲದಲ್ಲಿ ಮತದಾನ ನಡೆಯಲಿದೆ,” ಎಂದು ಅವರು ವಿವರಿಸಿದರು.