
ಉಡುಪಿ : ಸುಡುಬಿಸಿಲಿನಿಂದ ಕಂಗೆಟ್ಟಿರುವ ಕರಾವಳಿಯಲ್ಲಿ ವರುಣಾಗಮನ ತಂಪೆರೆದಿದೆ. ಆದರೆ, ದಿಢೀರ್ ಆಗಿ ಸುರಿಯುವ ಮಳೆಯಿಂದಾಗಿ ಹಲವೆಡೆ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರಮುಖವಾಗಿ ಜಾತ್ರೋತ್ಸವಗಳು ನಡೆಯುತ್ತಿರುವ ಊರುಗಳಲ್ಲಿ ಮಳೆಯಿಂದಾಗಿ ದೇವರ ಉತ್ಸವಕ್ಕೆ ಮಳೆ ಅಡ್ಡಿ ಪಡಿಸಿದ್ರೆ, ಜಾತ್ರೆಯ ವ್ಯಾಪಾರಿಗಳು ಪರದಾಡುವಂತೆ ಮಾಡಿದೆ.
ಇದೀಗ ಅಂತಹುದೇ ಒಂದು ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ನಡೆದಿದೆ. ದೈವದ ನೇಮವೊಂದಕ್ಕೆ ಮಳೆ ವಿಘ್ನ ತಂದೊಡ್ಡಿದೆ. ಸಾಮಾನ್ಯವಾಗಿ ಮಳೆ ಸಂಜೆ ಸುರಿಯುತ್ತಿದ್ದಾದ್ರೂ ಇಂದು ಮುಂಜಾನೆಯೇ ಎಂಟ್ರಿ ಕೊಟ್ಟಿದ್ದಾನೆ. ಹೀಗಾಗಿ ಉಡುಪಿಯ ಕಟಪಾಡಿ ಏಣಗುಡ್ಡೆ ಬಬ್ಬಸ್ವಾಮಿ ಪರಿವಾರ ದೈವಗಳ ನೇಮೋತ್ಸವಕ್ಕೆ ಅಡ್ಡಿ ಉಂಟು ಮಾಡಿದ್ದಾನೆ.
ನಿನ್ನೆ ರಾತ್ರಿ ನೇಮೋತ್ಸವ ಆರಂಭವಾಗಿದ್ದು ಇಂದು ಮುಂಜಾನೆ ಬಬ್ಬು ಸ್ವಾಮಿ ಮತ್ತು ತನ್ನಿ ಮಾನಿಗ ದೈವದ ನೇಮತ್ಸವ ನಡೆಯುವಾಗ ಮಳೆ ಒಕ್ಕರಿಸಿದೆ. ಮಳೆಯ ಹಿನ್ನೆಲೆಯಲ್ಲಿ ದೈವದ ಚಾಕರಿಯವರು ಹಾಗೂ ಪ್ರಮುಖರನ್ನು ಹೊರತು ಪಡಿಸಿ ಉಳಿದವರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.
ಆದರೆ, ದೈವದ ನರ್ತನ ಸೇವೆ ಮಳೆಯ ನಡುವೆಯೇ ಮುಂದುವರಿಸಿಕೊಂಡು ಹೋಗಲಾಗಿದೆ. ನರ್ತನ ಸೇವೆ ನಡೆಯುತ್ತಿದ್ದ ಜಾಗದಲ್ಲಿ ಮಳೆ ನೀರು ತುಂಬಿಕೊಂಡು ಕೆಸರಾಗಿದ್ರೂ ದೈವದ ಪಾತ್ರಿಗಳು ತಮ್ಮ ನರ್ತನ ಸೇವೆಯನ್ನು ಪೂರ್ತಿಗೊಳಿಸಿದ್ದಾರೆ.