Friday, September 20, 2024
ರಾಜಕೀಯ

ಮೂರನ್ನೂ ಬಿಟ್ಟವರು, ಮುಂದಾಳುಗಳು; ಅನಂತ್ ಕುಮಾರ್ ಹೆಗ್ಡೆ – ಕಹಳೆ ನ್ಯೂಸ್

ಬೆಂಗಳೂರು: ಶಬರಿಮಲೆ ಕುರಿತಂತೆ ಹಲವಾರು ರಾಜಕಾರಣಿಗಳು ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ. ಸುಪ್ರೀಂ ಕೋರ್ಟಿನ ನಿರ್ಧಾರ, ಆಗುತ್ತಿರುವ ಬೆಳವಣಿಗೆ ಬಗ್ಗೆ ಗ್ರಾಮೀಣ ಕೌಶಲ್ಯಾಭಿವೃದ್ಧಿ ಸಚಿವ ಅನಂತ್‍ಕುಮಾರ್ ಹೆಗ್ಡೆ ತಮ್ಮ ಫೇಸ್‍ಬುಕ್ ಖಾಯೆಯಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ.
ಶಬರಿಮಲೆ ಅಯ್ಯಪ್ಪನ ದೇವಸ್ಥಾನದಲ್ಲಿ ಪ್ರವೇಶ ಪಡೆಯಬೇಕೆಂದು ಬಯಸಿ ಮುಂದೆ ಬಂದ ಮಹಿಳೆಯರ ಶ್ರದ್ಧೆ ಭಕ್ತಿಗಳನ್ನು, ಅವರ ಹೆಸರು ಮತ್ತು ಇತಿಹಾಸಗಳೇ ಹೇಳುತ್ತವೆ. ಮುಂದೆ ಬಂದ ಮೂವರಲ್ಲಿ ಒಬ್ಬರು ರೆಹಾನಾ ಫಾತಿಮಾ. ಪರಂಪರೆಯಿಂದ ಅವರು ಅಯ್ಯಪ್ಪನ ಸ್ವಾಮಿಯ ಭಕ್ತರಲ್ಲ. ಮೊನ್ನೆ ಕೋರ್ಟ್ ತೀರ್ಪು ಬಂದ ಮೇಲೆ ದಿಢೀರಾಗಿ ಉದ್ಭವಗೊಂಡ ಭಕ್ತಿ ಇದು. ಈಗಾಗಲೇ ಮೈಚಳಿ ಬಿಟ್ಟು ಬೇರೆ ಬೇರೆ ಚಳುವಳಿಗಳಲ್ಲಿ ಭಾಗವಹಿಸಿ ಪ್ರಸಿದ್ಧರಾದವರು. ಇನ್ನುಳಿದ ಇಬ್ಬರು ಕವಿತಾ ಜಕ್ಕಲ್ ಮತ್ತು ಮೇರಿ ಸ್ವೀಟಿಯವರು. ಇವರಿಗೂ ಅಯ್ಯಪ್ಪನ ಸ್ವಾಮಿಯ ಭಕ್ತಿ ಅನ್ಯ ಉದ್ದೇಶದ್ದು.ಇವರಾರೂ ವ್ರತಧಾರಿಗಳಲ್ಲ. ಹಿಂದು ಮಹಿಳೆಯರೇ ಕೇಳದ ಅವಕಾಶವನ್ನು ಅವರಿಗೆ ದೊರಕಿಸಿಕೊಡುವ ಸಮಾನತೆಯ ದಲ್ಲಾಲಿಗಳು. ಬದುಕಿನ ಯಾವ ಸಂಯಮವನ್ನೂ ಪಾಲಿಸದವರಿಗೆ ಜಾಗೃತ ಸ್ಥಳವಾದ ಶಬರಿಮಲೆಗೆ ಪ್ರವೇಶ ಬೇಕಾಗಿದೆ! ಅವರ ಉದ್ದೇಶವೂ ಸ್ಪಷ್ಟವಿದೆ. ಇವರಲ್ಲೊಬ್ಬ ಮಹಿಳೆ ತನ್ನ ಹೊಲಸನ್ನು ಶಬರಿಮಲೆಯಲ್ಲಿ ಚೆಲ್ಲುವುದಕ್ಕೆ ಹೊರಟವಳು ಎಂದು ಹೇಳಿಕೆ ನೀಡಿದವಳು.ಮರ್ಯಾದೆಯ ಎಲ್ಲೆಯನ್ನು ದಾಟಿದ, ಮೂರನ್ನೂ ಬಿಟ್ಟವರೇ ಮುಂದಾಳುಗಳಾಗಿದ್ದಾರೆ. ಒಂದು ಶ್ರದ್ಧಾ ಕೇಂದ್ರದ ಪಾವಿತ್ರ್ಯವನ್ನು ಹಾಳುಮಾಡುವ ಅಧಿಕಾರವನ್ನು ಇವರಿಗೆ ಕೊಟ್ಟವರಾರು? ಇವರಿಗೆಲ್ಲ ಹಿಂದು ಶ್ರದ್ಧೆಯನ್ನು ಅಣಕಿಸುವ ಧೈರ್ಯ ಬಂದಿದ್ದೆಲ್ಲಿಂದ? ಯಾರೆಲ್ಲ ಇವರ ಬೆನ್ನಿಗಿದ್ದಾರೆ? ಎನ್ನುವುದನ್ನು ಕೆದಕಿದಾಗ ಕಮ್ಯುನಿಷ್ಟರ ಕಾರಸ್ಥಾನ ಬಯಲಿಗೆ ಬರುತ್ತದೆ.


ಶಬರಿಮಲೆ ನಿರ್ಜನ ಪ್ರದೇಶ. ಪವಿತ್ರವಾದ ಅಲೌಕಿಕ ತಾಣ. ಅಸ್ಪೃಶ್ಯತೆ, ಅಸಮಾನತೆಯ ಮಾತಿಲ್ಲದೆ ಎಲ್ಲ ಹಿಂದುಗಳು ಭಕ್ತಿಯಿಂದ ಸೇರುವ ಸ್ಥಳ. ಪ್ರತಿ ವರ್ಷ ಕೋಟ್ಯಂತರ ಶ್ರದ್ಧಾಳುಗಳು ಅಲ್ಲಿಗೆ ಭೇಟಿ ನೀಡುತ್ತಾರೆ. ಈ ಶ್ರದ್ಧಾ ಕೇಂದ್ರವನ್ನು ಹಾಳುಮಾಡುವ ಯತ್ನ ಇದೇ ಮೊದಲಲ್ಲ. 1950ರ ಜೂನ್ ತಿಂಗಳಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯವನ್ನು ಸುಟ್ಟು ಧ್ವಂಸ ಮಾಡಿದ್ದರು. ಆ ಕುರಿತು ವಿಶೇಷ ಪೋಲೀಸ್ ತನಿಖೆ ನಡೆಸಲಾಯಿತು. ಪ್ರತ್ಯಕ್ಷ್ಯ ಸಾಕ್ಷ್ಯ ಲಭ್ಯವಾಗದಿದ್ದರೂ ಆ ಕೃತ್ಯ ಕ್ರಿಶ್ಚಿಯನ್ನರಿಂದ ನಡೆದಿರಬಹುದೆಂದು ಶಂಕಿಸಲಾಯಿತು. 1983ರಲ್ಲಿ ಶಬರಿಮಲೆ ಪ್ರದೇಶದಲ್ಲಿ ಎರಡು ಸಾವಿರ ವರ್ಷಗಳ ಹಿಂದಿನ ಶಿಲುಬೆ ಸಿಕ್ಕಿತೆಂದು ಸುದ್ದಿಮಾಡಿದರು. 2006ರಲ್ಲಿ ಅರ್ಚಕರನ್ನು ಅಪಹರಿಸಿ ದೌರ್ಜನ್ಯವೆಸಗಿದರು. 2016ರಲ್ಲಿ ಕಾಡಿನ ರಕ್ಷಕರಿಗೆ ಶಬರಿಮಲೆ ಕಾಡಿನಲ್ಲಿ 300ಕೆ.ಜಿ. ಸ್ಪೋಟಕ ಸಾಮಗ್ರಿಗಳು ಸಿಕ್ಕವು. ಸ್ಪೋಟಕವನ್ನಿಟ್ಟು ದೇವಾಲಯವನ್ನು ಧ್ವಂಸ ಮಾಡುವ ಯೋಜನೆ ನಕ್ಸಲರದ್ದಾಗಿತ್ತು. ಹೀಗೆ ಹುಲಿಯನ್ನೇರಿದ ಅಯ್ಯಪ್ಪನಿಗೂ ಹಿಂಸೆ ತಪ್ಪಿದ್ದಲ್ಲ.
ಮಾತೆತ್ತಿದರೆ ಸಂವಿಧಾನದ ಸೊಲ್ಲೆತ್ತುವ ಎಡಪಂಥೀಯರು ನಗರದಲ್ಲಿ ಸಿದ್ಧಾಂತ ಹೇಳುತ್ತಾರೆ, ಕಾಡಿನಲ್ಲಿ ನಕ್ಸಲರನ್ನು ಸಾಕುತ್ತಾರೆ. ಹಿಂಸೆ ಅವರ ಸ್ವಭಾವ. ವ್ಯವಸ್ಥೆಯೊಂದನ್ನು ನಾಶ ಮಾಡವುದೇ ಅವರ ಗುರಿ. ಕಾಡಿನೊಳಗೆ ಶಾಂತವಾಗಿದ್ದ ಹಳ್ಳಿಯ ಬದುಕಿಗೆ ಬೆಂಕಿ ಹಚ್ಚಿದ್ದಾರೆ. ಆ ಹಳ್ಳಿಗಳಿಗೆ ಯಾವುದೇ ಅಭಿವೃದ್ಧಿಯ ಯೋಜನೆ ತಲುಪದಂತೆ ನೋಡಿಕೊಳ್ಳುತ್ತಾರೆ. ಸರಕಾರದಿಂದ ಅಭಿವೃದ್ಧಿಗಾಗಿ ಬಂದ ಹಣವನ್ನು ದೋಚುತ್ತಾರೆ. ಯಾರೂ ನೆಮ್ಮದಿಯಿಂದ ಬದುಕದಂತೆ ನೋಡಿಕೊಳ್ಳುವ ಹೋರಾಟ ಅವರದ್ದು. ಈ ಕೆಂಪು ಭಯೋತ್ಪಾದನೆಗೆ ಸೈದ್ಧಾಂತಿಕ ನೆರವು ನೀಡುವವರು ವಿಶ್ವವಿದ್ಯಾಲಯಗಳಲ್ಲಿ, ಮಾಧ್ಯಮಗಳಲ್ಲಿ ಅವಿತುಕೊಂಡಿದ್ದಾರೆ. ರಾಜಕೀಯವಾಗಿ ಕಮ್ಯುನಿಷ್ಟ್ ಪಕ್ಷಕ್ಕೆ ಅವರು ನಿಷ್ಠರು. ಶಬರಿಮಲೆಯಲ್ಲಿ ದೇಗುಲ ಪ್ರವೇಶದ ಪ್ರಹಸನ ನಡೆಯುತ್ತಿದ್ದರೆ ಸಿಪಿಐ(ಎಂ) ನಾಯಕ ಸೀತಾರಾಮ ಯೆಚೂರಿಯವರು ಹೇಳುತ್ತಾರೆ “ಅಯ್ಯಪ್ಪ ಸ್ವಾಮಿ ದೇವಾಲಯದೆದುರು ಸೇರಿದ ಭಕ್ತರು ತಲೆಗೆ ಕಟ್ಟಿಕೊಂಡ ಕೇಸರಿ ಪಟ್ಟಿಯನ್ನು ನೋಡಿದರೆ ಅಯೋಧ್ಯೆಯ ನೆನಪಾಗುತ್ತದೆ, ಇದೆಲ್ಲ ಅಂಧಾಭಿಮಾನಿಗಳ ಕೃತ್ಯ” ಎಂದು. ಕಮ್ಯುನಿಷ್ಟರ ಪಾಲಿಗೆ ದೈವ ಭಕ್ತಿಯೇ ಅಂಧಶ್ರದ್ಧೆ.
ಕಮ್ಯನಿಷ್ಟ್ ಚಿಂತನೆ ನಮ್ಮ ದೇಶದ್ದಲ್ಲ. ಮಾಕ್ರ್ಸ್ ಪ್ರಣೀತ ಸಿದ್ಧಾಂತ ಆಮದಾದದ್ದು. ಅವರ ಕುಲದೈವಗಳಿರುವುದು ರಶ್ಯಾ ಹಾಗೂ ಚೀನಾದಲ್ಲಿ. ಹಾಗಾಗಿಯೇ ಇಂಡಿಯನ್ ಕಮ್ಯುನಿಷ್ಟ್ ಪಾರ್ಟಿ ಎನ್ನುವುದಿಲ್ಲ. ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯ ಎನ್ನುತ್ತಾರೆ. ಅದು ಭಾರತೀಯ ಅಲ್ಲ, ಭಾರತದ ಕಮ್ಯುನಿಷ್ಟ್ ಪಕ್ಷ ಅದು. ಅಂದರೆ ಅವರ ಮೂಲ ಕಮ್ಯೂನ್ ಚೀನಾದಲ್ಲಿಯೋ… ರಾಶಿಯಾದಲ್ಲಿಯೋ ಎಲ್ಲೋ ಇದೆ. ಅದರ ಇನ್ನೊಂದು ಭಾಗ ಭಾರತದಲ್ಲೂ ಇದೆ ಎಂದ ಹಾಗೆ. ಇವರ ಎರವಲು ರಾಜನೀತಿ ದೇಶಕ್ಕೆ ಮಾಡಿದ ಅನ್ಯಾಯ ಬಹಳ ದೊಡ್ಡದು. ಅದರಲ್ಲಿ ಮುಖ್ಯವಾದದ್ದು ಬುದ್ಧಿಭೇದ ಮತ್ತು ಶ್ರದ್ದೆಯ ನಾಶ. ಆಶ್ಚರ್ಯವೆಂದರೆ ಕಮ್ಯುನಿಷ್ಟ್ ಪಕ್ಷ ಬೆಳೆದದ್ದು ಪಶ್ಚಿಮ ಬಂಗಾಳದಲ್ಲಿ ಮತ್ತು ಕೇರಳದಲ್ಲಿ. ಶ್ರೀ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಗುರುದೇವ ರವೀಂದ್ರನಾಥ ಟಾಗೋರರು, ಶ್ರೀ ಬಂಕಿಮಚಂದ್ರರು, ಯೋಗಿ ಅರವಿಂದರು, ನೇತಾಜಿ ಸುಭಾಶ್ಚಂದ್ರ ಬೋಸರು ಹೀಗೆ ದೇಶಭಕ್ತರು, ದಾರ್ಶನಿಕರು ಹುಟ್ಟಿ ಬಾಳಿದ ನಾಡಿನಲ್ಲಿ ನಾಸ್ತಿಕರ ಮೆರವಣಿಗೆ ನಡೆದದ್ದು ವಿಸ್ಮಯವಲ್ಲದೆ ಮತ್ತೇನು? ಭಾರತದಲ್ಲಿ ಹೊಸ ಚಿಂತನೆ ಮೊದಲು ಬರುವುದು ಬಂಗಾಳದಲ್ಲಿ ಎನ್ನುವ ಮಾತಿತ್ತು. ಶಿಕ್ಷಣ, ಹೋರಾಟ, ಆಧುನಿಕತೆಯಲ್ಲಿ ಅತ್ಯಂತ ಮುಂದುವರೆದ ಪ್ರಾಂತವಾಗಿತ್ತು. ಮೂರೂವರೆ ದಶಕಗಳ ಕಮ್ಯುನಿಷ್ಟ್ ಆಡಳಿತದ ನಂತರ ಆ ಮಾತು ಸುಳ್ಳಾಗಿದೆ. ಇಂದು ದೇಶದ ಹಿಂದುಳಿದ ರಾಜ್ಯಗಳಲ್ಲಿ ಅದೂ ಒಂದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಕೇರಳವೂ ಕೂಡ ದೇವರ ಸ್ವಂತ ನಾಡು ಎನ್ನಿಸಿಕೊಂಡಿದ್ದು, ಈಗ ದೇಶದ್ರೋಹಿ ಕೃತ್ಯಗಳಿಗೆ ಆಸರೆ ನೀಡುವ ತಾಣವಾಗಿದೆ. ಪ್ರಗತಿಪರರೆಂಬ ಸೋಗಿನ ಶಿಖಂಡಿಗಳಿಗೆ ಬೆಂಬಲ ನೀಡುವ ಕಮ್ಯುನಿಷ್ಟ್ ಆಡಳಿತ ಅಲ್ಲಿದೆ. ಹಿಂದು ಶ್ರದ್ಧೆಯನ್ನು ಅಳಿಸಿಹಾಕುವ ಅವರ ಉತ್ಸಾಹ ಅತಿಯಾದದ್ದು. ಅದಕ್ಕಾಗಿ ಏನನ್ನೂ ಮಾಡಿಯಾರು. ದೇವಸ್ವಂ ಮಂಡಳಿಗೆ ಹಿಂದುಯೇತರರನ್ನು ನೇಮಿಸುವುದಕ್ಕೆ ಬೇಕಾಗಿ ಕಾಯಿದೆಗೆ ತಿದ್ದುಪಡಿ ತಂದವರು ಮುಂದೆ ಏನನ್ನು ಮಾಡಲಿಕ್ಕೂ ಹೇಸದವರು! ಹಿಂದು ಸಂಘಟನೆಯ ಕಾರ್ಯಕರ್ತರನ್ನು ಹಾಡೇಹಗಲು ಕೊಚ್ಚಿಕೊಲ್ಲುವವ ಪರಂಪರೆ ಹೊಂದಿರುವ ಪಕ್ಷಕ್ಕೆ ಇಂದು ಆಡಳಿತದ ಆಶ್ರಯವಿದೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಇದಕ್ಕೆ ಬೆಂಬಲವಾಗಿ ನಿಲ್ಲುವ ಮಾಧ್ಯಮಗಳ ಹಿನ್ನೆಲೆಯೂ ವಿಸ್ತಾರವಾದದ್ದೇ ಆಗಿದೆ.
ಈ ರೀತಿಯಾಗಿ ಅನಂತ್‍ಕುಮಾರ್ ಹೆಗ್ಡೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಜಾಹೀರಾತು