ಮನ್ ಕೀ ಬಾತ್ ಜನತೆ ಜತೆಗೆ ಸಂವಹನ ನಡೆಸಲು ಆರಂಭಿಸಿರುವ ರಚನಾತ್ಮಕ ರೇಡಿಯೋ ಕಾರ್ಯಕ್ರಮ: ಪ್ರಧಾನಿ ಮೋದಿ – ಕಹಳೆ ನ್ಯೂಸ್
ನವದೆಹಲಿ: ಮನ್ ಕೀ ಬಾತ್ ಕುರಿತು ವಿಪಕ್ಷಗಳಿಂದ ಸತತ ಟೀಕೆಗಳು ಬರುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕಾರ್ಯಕ್ರಮದ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ. ‘ಮನ್ ಕೀ ಬಾತ್ನಲ್ಲಿ ರಾಜಕೀಯವಿಲ್ಲ. ದೇಶದ ಜನತೆ ಜತೆಗೆ ಸಂವಹನ ನಡೆಸಲು ಆರಂಭಿಸಿರುವ ರಚನಾತ್ಮಕ ರೇಡಿಯೋ ಕಾರ್ಯಕ್ರಮ’ ಎಂದಿದ್ದಾರೆ.
ಕಾರ್ಯಕ್ರಮದ 50ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಸ್ವಂತ ಅಥವಾ ಸರ್ಕಾರದ ಸಾಧನೆ ಹೇಳಿಕೊಳ್ಳಲು ಈ ಕಾರ್ಯಕ್ರಮವನ್ನು ನಾನು ಬಳಸಿಕೊಳ್ಳುತ್ತಿಲ್ಲ. ಬದಲಾಗಿ ದೇಶದ ಜನತೆ ಆಶಿಸುವ ವಿಚಾರಗಳ ಕುರಿತು ಅವರೊಂದಿಗೆ ಮಾತನಾಡುತ್ತಿದ್ದೇನೆ. ದೇಶದ ಜನರ ಸುಖ-ದುಃಖಗಳ ಬಗ್ಗೆ ಇಲ್ಲಿ ರ್ಚಚಿಸಿದ್ದೇನೆ. ಸ್ವಚ್ಛ ಭಾರತ, ಬೇಟಿ ಬಚಾವೊ, ರಸ್ತೆ ಸುರಕ್ಷತೆ ಸೇರಿ ಇತರ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ.
ಮೋದಿ ಎನ್ನುವ ವ್ಯಕ್ತಿ ಶಾಶ್ವತವಲ್ಲ. ಅಂಥವರು ಬಹಳಷ್ಟು ಜನರು ಬಂದು ಹೋಗುತ್ತಾರೆ. ಆದರೆ ಈ ದೇಶದ ಸಂಸ್ಕೃತಿ, ಪರಂಪರೆ ಅಮರವಾಗಿರುತ್ತದೆ. ಈ ಕಾರ್ಯಕ್ರಮದ ಮೂಲಕ ಅದರ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಾಡಿದ್ದೇನೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.