Friday, September 20, 2024
ಸುದ್ದಿ

ಅಂಬರೀಶ್ ಅಂತಿಮ ದರ್ಶನಕ್ಕೂ ಭಾರದೇ ಅಂಬಿಯನ್ನು ಮರೆತ ರಮ್ಯಾ ವಿರುದ್ಧ ವ್ಯಾಪಕ ಆಕ್ರೋಶ – ಕಹಳೆ ನ್ಯೂಸ್

ಮಂಡ್ಯ: ಮಾಜಿ ಸಂಸದೆ ರಮ್ಯಾ ವಿರುದ್ಧ ನಟ ಅಂಬರೀಶ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಬಿ ಅಂತಿಮ ದರ್ಶನ ಪಡೆಯಲು ಮಂಡ್ಯಕ್ಕೆ ಬಾರದ ರಮ್ಯಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಅಂಬರೀಶ್ ಅವರು ರಮ್ಯಾಗೆ ರಾಜಕೀಯವಾಗಿ ದಾರಿ ತೋರಿಸಿದ್ದಾರೆ. ಹೀಗಾಗಿ ಅಂಬಿ ಅಂತಿಮ ದರ್ಶನಕ್ಕಾದರೂ ರಮ್ಯಾ ಮಂಡ್ಯಕ್ಕೆ ಬರಬೇಕಿತ್ತು. ಅಲ್ಲದೇ ಓರ್ವ ಮಂಡ್ಯದ ಮಗಳಾಗಿ ರಮ್ಯಾ ಮಂಡ್ಯಕ್ಕೆ ಆಗಮಿಸಬೇಕಿತ್ತು. ಆದರೆ ತಮ್ಮನ್ನು ರಾಜಕೀಯವಾಗಿ ಬೆಳೆಸಿದ ಅಂಬರೀಶ್ ವಿರುದ್ಧವೇ ಇನ್ನೂ ದ್ವೇಷ ಸಾಧಿಸುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಅಂಬಿ ನಿಧನರಾಗಿ ಒಂದು ದಿನಕಳೆದರೂ ಅಂತಿಮ ದರ್ಶನಕ್ಕೆ ರಮ್ಯಾ ಬಂದಿಲ್ಲ. ಘಟಾನುಘಟಿ ನಾಯಕರು, ಸಿನಿಮಾ ತಾರೆಯರು ಬಂದು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ದಾರೆ. ರಮ್ಯಾ ಅವರೆಲ್ಲರಿಗಿಂತ ಬ್ಯುಸಿ ಇದ್ದಾರಾ ಎಂದು ಪ್ರಶ್ನಿಸುವ ಮೂಲಕ ಅಂಬಿ ಅಭಿಮಾನಿಗಳು ರಮ್ಯಾ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾಗ ರಮ್ಯಾ ಗೆಲುವಲ್ಲಿ ಅಂಬರೀಶ್ ಪ್ರಮುಖ ಪಾತ್ರ ವಹಿಸಿದ್ದರು. ಅಂಬಿಯಂತೆ ರಮ್ಯಾ ಕೂಡ ಚಿತ್ರರಂಗ, ರಾಜಕೀಯ ಎರಡೂ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಅಲ್ಲದೇ ಇಬ್ಬರೂ ಮಂಡ್ಯದವರೇ. ಹೀಗಾಗಿ ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ತಂದಾಗ ರಮ್ಯಾ ಕೂಡ ತವರು ಜಿಲ್ಲೆಗೆ ಬಂದು ಅಂತಿಮ ದರ್ಶನ ಪಡೆಯುತ್ತಾರೆ ಅಂತ ಅಭಿಮಾನಿಗಳು ನಂಬಿದ್ದರು.

ಕಳೆದ ಎರಡು ವರ್ಷದಿಂದ ಮಂಡ್ಯ ಕಡೆ ಆಗಮಿಸದ ರಮ್ಯಾ, ಇದೀಗ ಅಂಬಿ ಕೊನೆಯುಸಿರೆಳೆದಾಗಲೂ ಅಂತಿಮ ದರ್ಶನ ಪಡೆಯಲು ಮಂಡ್ಯಕ್ಕೆ ಆಗಮಿಸದಿರುವುದು ಇದೀಗ ಅಭಿಮಾನಿಗಳ ಕೆಂಗಣ್ಣಿಗೆ ಕಾರಣರಾಗಿದ್ದಾರೆ.