Friday, September 20, 2024
ಸುದ್ದಿ

ಡಿ.1ರಂದು ಜೋಡುಕರೆ ಬಯಲು ಕಂಬಳ, ಕಾನೂನಿನ ಚೌಕಟ್ಟಿನೊಳಗೆ ಸಂಘಟಿಸಲಾಗುವುದು: ಉಮಾನಾಥ ಕೋಟ್ಯಾನ್ – ಕಹಳೆ ನ್ಯೂಸ್

ಮೂಡುಬಿದಿರೆ : ಇಲ್ಲಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ 16ನೇ ವರ್ಷದ ಹೊನಲು ಬೆಳಕಿನ ಜೋಡುಕರೆ ಬಯಲು ಕಂಬಳ ಡಿ.1ರಂದು ನಡೆಯಲಿದ್ದು, ಅಹಿಂಸತ್ಮಾಕವಾಗಿ ಕಾನೂನಿನ ಚೌಕಟ್ಟಿನ ಒಳಗೆ ನಿಗದಿತ ಕಾಲಮಿತಿಯೊಂದಿಗೆ ಸಂಘಟಿಸಲಾಗುವುದು ಎಂದು ಕಂಬಳ ಸಮಿತಿ ಅಧ್ಯಕ್ಷ ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ತಿಳಿಸಿದ್ದಾರೆ.

ಅವರು ಗುರುವಾರ ಕಡಲಕಕೆರೆಯ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.  ಶನಿವಾರದಂದು ಬೆಳಿಗ್ಗೆ ಕಂಬಳವು ಆರಂಭಗೊಳ್ಳಲಿದ್ದು ಪ್ರತಿ ವರ್ಷದಂತೆ ಈ ಬಾರಿಯೂ ಆಲಂಗಾರು ಚರ್ಚಿನ ಧರ್ಮಗುರು ರೆ/ಫಾ/ ವಾಲ್ಟರ್ ಡಿ”ಸೋಜ, ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ/ಮೂ/ಈಶ್ವರ್ ಭಟ್, ನೂರಾನಿ ಮಸ್ಜೀದ್‍ನ ಮೌಲಾನ ಝೀಯ್ಯಾಲ್ಲಾ ಅವರು ಉದ್ಘಾಟಿಸಲಿದ್ದಾರೆ. ಚೌಟರ ಅರಮನೆಯ ಕುಲದೀಪ್ ಎಂ.ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಂಬಳಕ್ಕೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ,ಕೇಂದ್ರದ ಸಚಿವ ಸಾಂಖ್ಯಿಕ ಮತ್ತು ಕಾರ್ಯಕ್ರಮದ ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ, ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಭಾಗವಹಿಸಲಿದ್ದಾರೆ.

ಜಾಹೀರಾತು

ಸಂಸದರಾದ ನಳಿನ್‍ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುರಸಭಾಧ್ಯಕ್ಷೆ ಹರಿಣಾಕ್ಷಿ ಎಸ್.ಸುವರ್ಣ ಸೇರಿದಂತೆ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಕಂಬಳದಲ್ಲಿ ಪಾಲ್ಗೊಳ್ಳಲಿದ್ದಾರೆ.

ಆನಂದ ಆಳ್ವ, ಯುವರಾಜ್ ಜೈನ್‍ರಿಗೆ ಕಂಬಳದ ಸನ್ಮಾನ : ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವರಿಗೆ ಗೌರವ ಸನ್ಮಾನ, 2017ರ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ನಾರಾವಿ ಯುವರಾಜ್ ಜೈನ್‍ರಿಗೆ ಸನ್ಮಾನ ನಡೆಯಲಿದೆ.

ಕನೆಹಲಗೆ ವಿಭಾಗದಲ್ಲಿ ನಿಶಾನೆಗೆ ನೀರು ಹಾಯಿಸಿದ ಕೋಣಗಳಿಗೆ ಪ್ರಥಮ 2 ಪವನು, ದ್ವಿತೀಯ 1 ಪವನ್, ನೇಗಿಲು ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ 2 ಪವನು, ದ್ವಿತೀಯ 1 ಪವನು, ಅಡ್ಡಹಲಗೆ ಹಗ್ಗ, ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ 1 ಪವನು, ದ್ವಿತೀಯ ಅರ್ಧ ಪವನ್.
ಅಡ್ಡ ಹಲಗೆ ವಿಭಾಗದಲ್ಲಿ 8 ಜೊತೆಗಿಂತ ಹೆಚ್ಚು ಕೋಣಗಳು ಭಾಗವಹಿಸಿದ್ದಲ್ಲಿ 2 ಪವನ್, ವಿಜೇತ ಕೋಣ ಓಡಿಸಿದವರಿಗೆ ಕಾಲು ಪವನ್ ಚಿನ್ನದ ಬಹುಮಾನವಿದೆ. ವಿಜೇತ ಕೋಣಗಳ ಸಹಾಯಕ ತಂಡಕ್ಕೆ 1 ಸಾವಿರ ನಗದು ಬಹುಮಾನವಿದೆ.

ಸಮಾರಂಭದಲ್ಲಿ ತುಳು ಚಿತ್ರನಟರಾದ ದೇವದಾಸ್ ಕಾಪಿಕಾಡ್, ನವೀನ್ ಡಿ”ಪಡೀಲ್, ಅರವಿಂದ ಬೋಳಾರ್, ಬೋಜರಾಜ್ ವಾಮಂಜೂರು ಮತ್ತಿತರರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆಂದು ಕೋಟ್ಯಾನ್ ತಿಳಿಸಿದರು.

ಸಮಿತಿಯ ಪ್ರ.ಕಾರ್ಯದರ್ಶಿ ಗುಣಪಾಲ ಕಡಂಬ, ಜಿಲ್ಲಾ ಕೋಶಾಧಿಕಾರಿ ಸುರೇಶ್ ಕೆ.ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.