Friday, September 20, 2024
ಸುದ್ದಿ

ಭಾರತ್ ಬಂದ್‌ಗೆ ದ.ಕ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ: ವಾಹನಗಳ ಸಂಚಾರ ಯಥಾ ಸ್ಥಿತಿ – ಕಹಳೆ ನ್ಯೂಸ್

ಮಂಗಳೂರು: ಭಾರತ್ ಬಂದ್‌ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ಎಡಪಕ್ಷಗಳ ಕಾರ್ಮಿಕ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯಲ್ಲಿ ನಾಗರಿಕರಿಗೆ ಬಂದ್‌ನ ಬಿಸಿ ತಟ್ಟಿಲ್ಲ. ಖಾಸಗಿ, ಸರ್ಕಾರಿ ಬಸ್‌ಗಳು ಸೇರಿದಂತೆ ಎಲ್ಲಾ ವಾಹನಗಳ ಸಂಚಾರ ಯಥಾ ಸ್ಥಿತಿಯಲ್ಲಿದೆ.

ಇನ್ನು ಬಂದ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ಇಂದು ರಜೆ ಘೋಷಿಸಿದ್ದಾರೆ. ಮಂಗಳೂರು ನಗರದಲ್ಲಿ ಖಾಸಗಿ ಸಿಟಿ ಬಸ್ ಹಾಗೂ ಸರ್ಕಾರಿ ಬಸ್ ಗಳು ಎಂದಿನಂತೆ ಮುಂಜಾನೆಯಿಂದಲೇ ರಸ್ತೆಗಿಳಿದು ಸಂಚಾರ ಆರಂಭಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಅದಲ್ಲದೇ ಆಟೋರಿಕ್ಷಾಗಳು ಕೂಡ ಓಡಾಟ ಆರಂಭಿಸಿವೆ. ಮಂಗಳೂರು ವಿಭಾಗದಿಂದ ಕೆಎಸ್ ಆರ್‌ಟಿಸಿ ಬಸ್ ಗಳು ಕಾರ್ಯಾಚರಣೆ ಆರಂಭಿಸಿವೆ. ಆದರೆ ಕೇರಳ, ಕಾಸರಗೋಡಿಗೆ ತೆರಳುವ ಬಸ್ ಸೇವೆ ಮಾತ್ರ ಸ್ಥಗಿತಗೊಳಿಸಲಾಗಿದೆ. ಉಡುಪಿ, ಉಪ್ಪಿನಂಗಡಿ, ಪುತ್ತೂರು ಕಡೆ ಹೋಗುವ ಖಾಸಗಿ ಸರ್ವಿಸ್ ಬಸ್ ಸಂಚಾರದಲ್ಲಿ ವ್ಯತ್ಯಯವುಂಟಾಗಿದೆ.

ಟ್ಯಾಕ್ಸಿ ಹಾಗೂ ಕ್ಯಾಬ್ ಸಂಚಾರವೂ ಎಂದಿನಂತೆ ಮುಂದುವರಿದಿದೆ. ಕಾರ್ಮಿಕ ಸಂಘಟನೆ ಬೆಂಬಲಿತ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಅಂಗಡಿ- ಮುಂಗಟ್ಟು, ಹೋಟೆಲ್ ಗಳು ತೆರೆದಿವೆ. ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ.