Recent Posts

Saturday, September 21, 2024
ಸುದ್ದಿ

ಪ್ರತಿ ಅವಕಾಶಗಳನ್ನು ನಮ್ಮದಾಗಿಸುವ ಚಾಕಚಕ್ಯತೆ ನಮ್ಮದಾಗಬೇಕು: ಸುದರ್ಶನ್ – ಕಹಳೆ ನ್ಯೂಸ್

ಪುತ್ತೂರು: ನಾವು ಕೇಳಿಸಿಕೊಳ್ಳುವುದರ ಬದಲಾಗಿ ಆಲಿಸಿಕೊಳ್ಳಬೇಕು, ನೋಡುವುದರ ಬದಲಿಗೆ ವೀಕ್ಷಿಸಬೇಕು ಹಾಗೂ ಮಾತನಾಡುವುದರ ಬದಲಾಗಿ ಸಂಪರ್ಕ ಸಾಧಿಸಬೇಕು. ಹಾಗಾದಾಗ ನಮ್ಮ ವ್ಯಕ್ತಿತ್ವ ಅರಳುತ್ತದೆ. ತನ್ಮೂಲಕ ಬದುಕಿನಲ್ಲಿ ಯಶಸ್ಸು ಸಾಧ್ಯ ಎಂದು ಮೈಸೂರಿನ ವಿವೇಕಾನಂದ ಇನ್‍ಸ್ಟಿಟ್ಯೂಟ್ ಫಾರ್ ಲೀಡರ್‍ಶಿಪ್ ಅಂಡ್ ಡೆವಲಪ್‍ಮೆಂಟ್ ಸಂಸ್ಥೆಯ ನಿರ್ದೇಶಕ ಸುದರ್ಶನ್ ಎಸ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಉದ್ಯೋಗ ಮತ್ತು ತರಬೇತಿ ಘಟಕದ ವತಿಯಿಂದ ಶುಕ್ರವಾರ ಅಂತಿಮ ಬಿ.ಎ ವಿದ್ಯಾಥಿಗಳಿಗಾಗಿ ಆಯೋಜಿಸಲಾದ ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವ್ಯಕ್ತಿತ್ವ ಎಲ್ಲರಲ್ಲಿಯೂ ಇದೆ. ಅದನ್ನು ಅಭಿವ್ಯಕ್ತಗೊಳಿಸುವ ಕಲೆಯನ್ನು ನಾವು ಕರಗತಮಾಡಿಕೊಳ್ಳಬೇಕಿದೆ. ಒಂದು ಸ್ಪಷ್ಟ ಗುರಿಯ ಸಾಧನೆಗೆ ಆತ್ಮವಿಶ್ವಾಸ, ಸ್ಪರ್ಧಾತ್ಮಕತೆ ಹಾಗೂ ಉದ್ಯೋಗಶೀಲತೆ ಎಂಬ ಮೂರು ಗುಣಗಳು ಅಗತ್ಯ ಇವೆ. ಪ್ರತಿಯೊಬ್ಬರ ಮುಂದೆಯೂ ಅಪಾರ ಅವಕಾಶಗಳಿವೆ. ಅವುಗಳನ್ನು ನಮ್ಮದಾಗಿಸುವ ಚಾಕಚಕ್ಯತೆ ನಮ್ಮದಾಗಬೇಕು ಎಂದರು.

ಜಾಹೀರಾತು

ಮತ್ತೋರ್ವ ತರಬೇತುದಾರ ಕೃಷ್ಣಪ್ರಸಾದ್ ನಡ್ಸಾರ್ ಮಾತನಾಡಿ ಇಂದು ಅನೇಕ ಕಂಪೆನಿಗಳು ಉದ್ಯೋಗಿಗಳಿಲ್ಲ ಎಂದು ಅರಸುತ್ತಿದ್ದರೆ ಅನೇಕ ಯುವ ಜನ ಉದ್ಯೋಗವಿಲ್ಲ ಎಂದು ಪರಿತಪಿಸುತ್ತಿದ್ದಾರೆ. ಕಂಪೆನಿ ಹಾಗೂ ಉದ್ಯೋಗಿಗಳ ನಡುವೆ ಸಂಪರ್ಕ ಸಾಧಿಸಬೇಕಾದ್ದು ಇಂದಿನ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ.ಶ್ರೀಧರ ಎಚ್ ಜಿ ಮಾತನಾಡಿ ಶ್ರದ್ಧೆ ಹಾಗೂ ನಿಷ್ಟೆ ನಮ್ಮನ್ನು ಎತ್ತರಕ್ಕೆ ಒಯ್ಯುತ್ತದೆ. ಕಲಾ ವಿದ್ಯಾರ್ಥಿಗಳಿಗೆ ಅಪಾರವಾದ ಅವಕಾಶಗಳಿವೆ. ಆದರೆ ಹಾಗೆ ಅವಕಾಶಗಳಿರುವಲ್ಲಿಗೆ ತೆರಳುವ ಮಾರ್ಗದ ಅರಿವಿರಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಶಿಕ್ಷಣದ ಉದ್ದೇಶ.

ಈ ಹಿನ್ನೆಲೆಯಲ್ಲಿ ಸಾಕಷ್ಟು ವ್ಯವಸ್ಥೆಗಳನ್ನು ಕಾಲೇಜಿನಲ್ಲಿ ಕಲ್ಪಿಸಲಾಗಿದೆ. ಹಾಗೆಯೇ ಕಾಲಕಾಲಕ್ಕೆ ತಜ್ಞರಿಂದ ಮಾರ್ಗದರ್ಶನವೂ ದೊರೆಯುವಂತೆ ಮಾಡಲಾಗಿದೆ ಎಂದರು. ಉದ್ಯೋಗ ಮತ್ತು ತರಬೇತಿ ಘಟಕದ ಸಂಯೋಜಕಿ ರೇಖಾ ಈ ಸಂದರ್ಭದಲ್ಲಿ ಹಾಜರಿದ್ದರು.

ಉದ್ಯೋಗ ಮತ್ತು ತರಬೇತಿ ಘಟಕದ ಸಂಯೋಕರಲ್ಲೊಬ್ಬರಾದ ಪ್ರೊ.ವಾಸುದೇವ ಪ್ರಸ್ತಾವನೆಗೈದು, ಸ್ವಾಗತಿಸಿದರು. ಮತ್ತೋರ್ವ ಸಂಯೋಜಕ ಡಾ.ಅರುಣ್ ಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು.