Friday, September 20, 2024
ಸುದ್ದಿ

ವಿವೇಕಾನಂದ ಕಾಲೇಜಿನ ಎಂಕಾಂ ವಿಭಾಗದಿಂದ ಕುಡಿಪ್ಪಾಡಿಯಲ್ಲಿ ವಾಣಿಜ್ಯ ವ್ಯವಹಾರಗಳ ಬಗ್ಗೆ ಮಾಹಿತಿ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿ ದೆಸೆಯಿಂದಲೇ ಹೇಗೆ ಸಮಾಜ ಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಜನರೊಂದಿಗೆ, ಸ್ಥಳೀಯ ಶಾಲೆಯೊಂದಿಗೆ ಒಂದಾಗಿ ಅವರ ಅಭಿವೃದ್ಧಿಗೆ ಶ್ರಮಿಸುತ್ತಾ, ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಗ್ರಾಮ ವಿಕಾಸ ಯೋಜನೆಯ ಕಾರ್ಯಕ್ರಮಗಳು ಉಪಕಾರಿ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯೆ ಶೋಭಾ ಕೊಳತ್ತಾಯ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಮತ್ತು ಕುಡಿಪ್ಪಾಡಿ ಗ್ರಾಮ ವಿಕಾಸ ಸಮಿತಿ ಆಶ್ರಯದಲ್ಲಿ ವಿವೇಕಾನಂದ ಕಾಲೇಜು ದತ್ತು ಸ್ವೀಕರಿಸಿದ ಕುಡಿಪ್ಪಾಡಿ ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ‘ವಾಣಿಜ್ಯ ವ್ಯವಹಾರದ ಬಗ್ಗೆ ಪ್ರಾಯೋಗಿಕ ಮಾಹಿತಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.

ಜಾಹೀರಾತು

ದೀಪ ಶುಭ ಸೂಚಕ ಯಾವುದೇ ಒಂದು ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸುವುದು ಈ ನೆಲದ ಸಂಸ್ಕ್ರತಿ. ಬೆಳಕು ಅಜ್ಞಾನದ ಕತ್ತಲನ್ನು ದೂರಮಾಡಿ ಸುಜ್ಞಾನದ ಬೆಳಕನ್ನು ನಮ್ಮ ಬದುಕಿಗೆ ನೀಡುತ್ತದೆ. ನಾವು ಕೈಗೊಂಡ ಕಾರ್ಯ ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗುತ್ತದೆ. ಬೆಳಕು ಸದಾ ಧನಾತ್ಮಕತೆಯನ್ನು ಪಸರಿಸುತ್ತದೆ. ಗ್ರಾಮಗಳ ಅಭಿವೃದ್ಧಿಯಲ್ಲಿ ವಿದ್ಯಾ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳುವುದು ಪ್ರಶಂಸನೀಯ ಎಂದು ಅಭಿಪ್ರಾಯಪಟ್ಟರು.

ಕುಡಿಪ್ಪಾಡಿ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ಸುಕುಮಾರ್ ಮಾತನಾಡಿ, ಒಂದೊಂದು ರೂಪಾಯಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಕೂಡಿಡುವುದು ಒಳ್ಳೆಯ ವಿಚಾರ. ಆದರೆ ನಾವು ನಮ್ಮ ಮನೆಯಲ್ಲಿ ಕೂಡಿಟ್ಟ ಹಣಕ್ಕೆ ಬೆಳವಣಿಗೆಯಿಲ್ಲ. ಅದೇ ಹಣವನ್ನು ಉಳಿತಾಯ ಖಾತೆಗಳಲ್ಲಿ ಹೂಡಿದಾಗ ಆ ಹಣವನ್ನು ಹೆಚ್ಚು ಮಾಡಲು ಸಾಧ್ಯ ಎಂದು ನುಡಿದರು.

ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಕೇಂದ್ರಗಳು ವಿದ್ಯೆ ನೀಡುತ್ತದೆ. ಆದರೆ ಪ್ರಪಂಚ ಜ್ಞಾನವನ್ನು ಬೆಳೆಸಿಕೊಳ್ಳಲು ಪ್ರಾಯೋಗಿಕ ಅನುಭವ ಸಹಕಾರಿ. ನಾವು ಯಾವ ಘಟನೆಗೆ ಯಾವ ರೀತಿಯಾಗಿ ಪ್ರತಿಕ್ರಿಯಿಸುತ್ತೇವೆ ಎನ್ನುವುದನ್ನು ನಮ್ಮ ಅನುಭವ ಹೇಳಿಕೊಡುತ್ತದೆ ಎಂದರು.

ವ್ಯವಹಾರಿಕ ಜ್ಞಾನವೆಂಬುವುದು ಇಂದಿನ ದಿನಗಳಲ್ಲಿ ವಿದ್ಯೆಯಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ. ಅದು ನಮಗೆ ಯಾವುದು ಅಗತ್ಯ ಎಂಬುವುದನ್ನು ನಿರ್ಧರಿಸುವುದರೊಂದಿಗೆ ನಮ್ಮ ಖರ್ಚನ್ನು ಮಿತವ್ಯಯಗೊಳಿಸುತ್ತದೆ. ಖರೀದಿ ಹಾಗೂ ಖರ್ಚಿನ ಮೇಲಿನ ಹಿಡಿತ ನಮ್ಮ ಹಣಕಾಸಿನ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಲು ಸಹಕಾರಿ. ಈ ಕ್ಷೇತ್ರದ ಅನುಭವಿಗಳು ನೀಡುವ ಅವರ ಅನುಭವದ ವಿಚಾರಧಾರೆ ನಮ್ಮ ವ್ಯವಹಾರ ಜ್ಞಾನವನ್ನು ಉತ್ತಮ ಪಡಿಸಿಕೊಳ್ಳಲು ಉಪಕಾರಿ ಎಂದು ನುಡಿದರು.

ಈ ಸಂದರ್ಭ ಕುಡಿಪ್ಪಾಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಗೋಮುಖ, ಗ್ರಾಮಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಾಮ್ ಜೋಯಿಸ್, ಕುಡಿಪಾಡಿ ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ್, ಕುಡಿಪ್ಪಾಡಿ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಲಕ್ಷ್ಮೀ ಜಿ. ಭಟ್, ರಾಘವೆಂದ್ರ ಉಪಸ್ಥಿತರಿದ್ದರು.

ವಿವಿಧ ಚಟುವಟಿಕೆ, ಮಾಹಿತಿ
ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕುಡಿಪ್ಪಾಡಿ ಶಾಲಾ ವಿದ್ಯಾರ್ಥಿಗಳೊಂದಿಗೆ ಬೆರೆತು, ಅವರಿಗಾಗಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಿದರು. ಅವರಿಗೆ ವಾಣಿಜ್ಯ ವ್ಯವಹಾರಗಳ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ಡಾ. ವಿಜಯ ಸರಸ್ವತಿ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿದ್ಯಾರ್ಥಿನಿಯರಾದ ರಶ್ಮಿ ಹಾಗೂ ಅನುಷ ಪ್ರಾರ್ಥಿಸಿದರು. ಎಂಕಾಂ ವಿಭಾಗದ ಉಪನ್ಯಾಸಕಿ ಅನನ್ಯ ವಿ. ವಂದಿಸಿದರು. ಉಪನ್ಯಾಸಕ ವರ್ಷಿತ್ ಕಾರ್ಯಕ್ರಮ ನಿರೂಪಿಸಿದರು.