ನವದೆಹಲಿ – ಲೋಕಸಭಾ ಚುನಾವಣಾ ಪ್ರಚಾರ ಭಾಷಣದ ವೇಳೆ ಮತದಾರರಿಗೆ ಬೆದರಿಕೆ ಹಾಕುವ ಧಾಟಿಯಲ್ಲಿ ಮಾತನಾಡಿರುವ ಕೇಂದ್ರ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ಮತ್ತು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರಿಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದೆ.
ಈ ರೀತಿಯ ಹೇಳಿಕೆಗಳನ್ನು ನೀಡಿದ ಬಗ್ಗೆ ಪ್ರತ್ಯುತ್ತರ ನೀಡುವಂತೆ ಆಯೋಗ ಕೋರಿದೆ. ಮನೇಕಾ ಗಾಂಧಿ ಅವರು, ಚುನಾವಣಾ ಪ್ರಚಾರ ವೇಳೆ ಮುಸ್ಲಿಮರು ತಮಗೆ ಮತ ಹಾಕಬೇಕು. ಇಲ್ಲದಿದ್ದರೆ ನನ್ನ ಬಳಿ ಯಾವುದೇ ಕೆಲಸ ಕೇಳಿಕೊಂಡು ಬರಬೇಡಿ ಎಂದು ಹೇಳಿದ್ದರು.
ಉತ್ತರಪ್ರದೇಶದ ಉನ್ನಾವೋ ಸಂಸದ ಮತ್ತು ಬಿಜೆಪಿ ಮುಖಂಡ ಸಾಕ್ಷಿ ಮಹಾರಾಜ್ ತಮ್ಮ ಕ್ಷೇತ್ರದ ಚುನವಣಾ ಪ್ರಚಾರದ ವೇಳೆ ನನಗೆ ಮತ ಹಾಕದಿದ್ದರೆ ಶಾಪ ಕೊಡುತ್ತೇನೆ ಎಂದು ಮತದಾರರಿಗೆ ವಿಲಕ್ಷಣ ಬೆದರಿಕೆ ಹಾಕಿದ್ದರು.
ಈ ಎರಡು ಹೇಳಿಕೆಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿವೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಈ ಸಂಬಂಧ ಗಾಂಧಿ ಮತ್ತು ಮಹಾರಾಜ್ ಅವರಿಗೆ ಶೋಕಾಸ್ ನೋಟಿಸ್ ನೀಡಿ ಪ್ರತ್ಯುತ್ತರ ಕೋರಿದೆ.