
ಮಂಗಳೂರು : 27-05-2019 ರಂದು ಮಂಗಳೂರು ನಗರದ ಬೋಳಾರ “MFAR” ಕ್ಯಾಂಪ್ ಲೇಬರ್ ಕಾಲೋನಿಯಲ್ಲಿ ತಾತ್ಕಾಲಿಕ ಶೆಡ್ ನಲ್ಲಿ ವಾಸ್ತವ್ಯವಾಗಿದ್ದ ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ಜೂಲಕುಂಟಿ ನಿವಾಸಿಗಳಾದ ಲಕ್ಷ್ಮಣ ತೆಮ್ಮಿನಾಳ ಹಾಗೂ ಶ್ರೀಮತಿ ರೂಪಾ ತೆಮ್ಮಿನಾಳರವರ ಎಂಟು ತಿಂಗಳ ಹೆಣ್ಣು ಮಗು ಮೌನಶ್ರೀ ಮೃತ ದೇಹವು ಮಂಗಳೂರು ಬೋಳಾರ ಫೆರಿ ಪಾರ್ಕ್ ಬಳಿ ನೇತ್ರಾವತಿ ನದಿ ನೀರಿನಲ್ಲಿ ಪತ್ತೆಯಾಗಿರುವ ಬಗ್ಗೆ ಮಂಗಳೂರು ಪಾಂಡೇಶ್ವರ ಠಾಣೆಯಲ್ಲಿ ಕೊಲೆ ಕೇಸು ದಾಖಲಾಗಿತ್ತು.
ಇದೀಗ ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರಿಗೆ ಬೆಚ್ಚಿ ಬೀಳಿಸುವ ಸತ್ಯ ಹೊರಬಿದ್ದಿದೆ. ಆರೋಪಿಗೆ ಎರಡೂ ಮಂದಿಯೂ ಹೆಣ್ಣು ಮಕ್ಕಳಾಗಿದ್ದು, ಇದರಿಂದ ಈ ಹೆಣ್ಣು ಮಗುವಿನ ಬಗ್ಗೆ ತಾತ್ಸಾರ ಹೊಂದಿ, ದಿನಾಂಕ:27-05-2019 ರಂದು ಮಗುವನ್ನು ಕೊಲೆ ಮಾಡುವ ಉದ್ದೇಶದಿಂದ ಒತ್ತಾಯ ಪೂರ್ವಕವಾಗಿ ಹೆಂಡತಿ ರೂಪಾ ತೆಮ್ಮಿನಾಳ ರನ್ನು ಕೆಲಸಕ್ಕೆ ಕಳುಹಿಸಿಕೊಟ್ಟಿದ್ದು, ಆ ಬಳಿಕ ಮಗುವಿನ ಉಸಿರುಗಟ್ಟಿಸಿ ಕೊಲೆ ನಡೆಸಿ ನೇತ್ರಾವತಿ ನದಿ ನೀರಿಗೆ ಎಸೆದಿರುತ್ತಾನೆ.
ಈ ಕೇಸಿನಲ್ಲಿ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ. ಸಂದೀಪ್ ಪಾಟೀಲ್ ಐಪಿಎಸ್, ಮಾನ್ಯ ಉಪ ಪೊಲೀಸ್ ಆಯುಕ್ತರು (ಕಾ&ಸು) ರವರಾದ ಶ್ರೀ ಹನುಮಂತರಾಯ ಐ.ಪಿ.ಎಸ್ , ಮಾನ್ಯ ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ರವರಾದ ಶ್ರೀ ಲಕ್ಷ್ಮಿ ಗಣೇಶ್, ಕೆ.ಎಸ್.ಪಿ.ಎಸ್, ಮಂಗಳೂರು ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಸುಧೀರ್ ಹೆಗ್ಡೆ ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಎನ್ ಕುಮಾರ್ ಆರಾಧ್ಯ ರವರು ಆರೋಪಿಯನ್ನು ಬಂಧಿಸಿರುತ್ತಾರೆ. ಆರೋಪಿ ಪತ್ತೆಗೆ ಮಂಗಳೂರು ದಕ್ಷಿಣ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ರಾಜೇಂದ್ರ ಬಿ, ಎಲ್ ಮಂಜುಳಾ ಹಾಗೂ ದಕ್ಷಿಣ ಠಾಣೆಯ ಸಿಬ್ಬಂಧಿಗಳು ಸಹಕರಿಸಿರುತ್ತಾರೆ.