Saturday, September 21, 2024
ರಾಜಕೀಯ

ಉಪ್ಪಿನಂಗಡಿಯಲ್ಲಿ ಅಘೋಷಿತ ಬಂದ್ ; ಕುಪ್ಪೆಟ್ಟಿಯಲ್ಲಿ ಬಸ್‌ಗಳಿಗೆ ಕಲ್ಲು, ಓರ್ವನ ವಶ ; ಮಠದಲ್ಲಿ ಲಾಠಿ ಬೀಸಿ ಗುಂಪು ಚದುರಿಸಿದ ಪೊಲೀಸರು – ಕಹಳೆ ನ್ಯೂಸ್

ಉಪ್ಪಿನಂಗಡಿ: ಪೌರತ್ವ ಮಸೂದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆಯಿಂದ ಜಿಲ್ಲೆಯಾದ್ಯಂತ ಮೂಡಿದ ಭೀತಿಯ ವಾತಾವರಣದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ಡಿ.20 ರಂದು ಅಘೋಷಿತ ಬಂದ್ ಸ್ಥಿತಿ ನಿರ್ಮಾಣವಾಯಿತು. ಬೆಳ್ತಂಗಡಿ ತಾಲೂಕಿನ ಬಂಗಾರಕಟ್ಟೆಯ ಕಾರಂದೂರು ಎಂಬಲ್ಲಿ ಒಂದು ಬಸ್‌ಗೆ ಹಾಗೂ ಕುಪ್ಪೆಟ್ಟಿಯಲ್ಲಿ ನಾಲ್ಕು ಬಸ್‌ಗಳಿಗೆ ದುಷ್ಕರ್ಮಿಗಳು ಹಾನಿಯೆಸಗಿದರು.

ಡಿ.20 ರಂದು ಬೆಳಗ್ಗಿನಿಂದಲೇ ಪೇಟೆಯಲ್ಲಿ ಜನಸಂಖ್ಯೆ ತೀರಾ ವಿರಳವಿತ್ತಲ್ಲದೇ, ಬಹುತೇಕ ಖಾಸಗಿ ವಾಹನಗಳು ರಸ್ತೆಗಿಳಿಯದ್ದರಿಂದ ಅಘೋಷಿತ ಬಂದ್ ಸ್ಥಿತಿ ನಿರ್ಮಾಣವಾಯಿತು. ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬೆಳಗ್ಗೆ ಮಂಗಳೂರಿಗೆ ಹೊರಟವರು ಮಂಗಳೂರಿಗೆ ಹೋಗಲಾಗದೇ ಬಿ.ಸಿ.ರೋಡಿನಿಂದ ವಾಪಸಾಗುತ್ತಿದ್ದರು. ಹೆದ್ದಾರಿಯಲ್ಲಿಯೂ ಘನ ವಾಹನಗಳ ಸಂಚಾರ ವಿರಳವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಬಸ್‌ಗಳಿಗೆ ಕಲ್ಲು :  ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯಲ್ಲಿ ರಸ್ತೆ ಮಧ್ಯೆ ಟಯರ್ ಉರಿಸಿದ ದುಷ್ಕರ್ಮಿಗಳು ಅಲ್ಲೇ ಸಮೀಪದ ಬೋವಿನಕಡವು ಎಂಬಲ್ಲಿ ಖಾಸಗಿ ಬಸ್ಸೊಂದಕ್ಕೆ ಕಲ್ಲೆಸೆದರು. ಬಳಿಕ ಅದೇ ಸ್ಥಳದಲ್ಲಿ ಮೂರು ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಕಲ್ಲೆಸೆದು ಹಾನಿ ಮಾಡಲಾಯಿತು. ಬೋವಿನಕಡವು ನಿರ್ಜನ ಪ್ರದೇಶವಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಮರಗಿಡಗಳು ಆವರಿಸಿದೆ. ಆದ್ದರಿಂದ ಈ ಪರಿಸರದ ಅನುಕೂಲತೆಯನ್ನು ಪಡೆದ ದುಷ್ಕರ್ಮಿಗಳು ಬಸ್‌ಗಳಿಗೆ ಕಲ್ಲೆಸೆದು ಅಲ್ಲಿಂದ ಪರಾರಿಯಾಗುತ್ತಿದ್ದರು. ಸ್ಥಳಕ್ಕೆ ಪೊಲೀಸರು ತೆರಳಿದಾಗ ಅಲ್ಲಿ ಯಾರೂ ಇರುತ್ತಿರಲಿಲ್ಲ. ಆದರೆ ಪೊಲೀಸರು ಅಲ್ಲಿಂದ ವಾಪಸಾಗಿ ಒಂದು ಗಂಟೆಯಾಗುವಷ್ಟು ಹೊತ್ತಿಗೆ ಮತ್ತೆ ಅದೇ ಸ್ಥಳದಲ್ಲಿ ಬಸ್‌ಗಳಿಗೆ ಕಲ್ಲೆಸೆಯುವ ಘಟನೆ ನಡೆಯುತ್ತಿತ್ತು. ಇಲ್ಲಿ ಬೆಳಿಗ್ಗೆ 9.30 ರ ಸುಮಾರಿಗೆ ಧರ್ಮಸ್ಥಳದಿಂದ ಮಡಿಕೇರಿಗೆ ಬರುವ ಕೆಎಸ್ಸಾರ್ಟಿಸಿ ಬಸ್‌ಗೆ ಕಲ್ಲೆಸೆದರೆ, ಅದಾಗಿ ಒಂದು ಗಂಟೆಯ ಬಳಿಕ ಉಪ್ಪಿನಂಗಡಿಯಿಂದ ಧರ್ಮಸ್ಥಳವಾಗಿ ಬೆಂಗಳೂರು ಹೋಗುವ ಕೆಎಸ್ಸಾರ್ಟಿಸಿ ಬಸ್‌ಗೆ ಕಲ್ಲೆಸೆಯಲಾಯಿತು. ಬೆಳಿಗ್ಗೆ 11.30 ರ ಸುಮಾರಿಗೆ ಪುತ್ತೂರಿನಿಂದ ಉಪ್ಪಿನಂಗಡಿಯಾಗಿ ಧರ್ಮಸ್ಥಳಕ್ಕೆ ಹೋಗುವ ಕೆಎಸ್ಸಾರ್ಟಿಸಿ ಬಸ್‌ಗೆ ಕಲ್ಲೆಸೆಯಲಾಯಿತು. ಇದರಿಂದಾಗಿ ಬಸ್‌ನ ಗಾಜುಗಳಿಗೆ ಹಾನಿಯಾಗಿದ್ದು ಬಿಟ್ಟರೆ, ಬೇರೇನೂ ಅಪಾಯ ಸಂಭವಿಸಿಲ್ಲ. ಇದರಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್‌ನಲ್ಲಿ ಕಳುಹಿಸಿಕೊಡಲಾಯಿತು. ಬೆಳಗ್ಗೆ ಬಂಗಾರಕಟ್ಟೆಯ ಕಾರಂದೂರಿನಲ್ಲಿಯೂ ಖಾಸಗಿ ಬಸ್ಸೊಂದಕ್ಕೆ ಕಲ್ಲೆಸೆಯಲಾಗಿತ್ತು.

ಓರ್ವನ ವಶ : ಬೋವಿನಕಡವು ಎಂಬಲ್ಲಿ ಬಸ್‌ಗಳಿಗೆ ಕಲ್ಲೆಸೆಯುತ್ತಿದ್ದ ಪ್ರಕರಣದಲ್ಲಿ ಅನುಮಾನದ ಮೇರೆಗೆ ಓರ್ವನನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಶುಕ್ರವಾರ ಮುಸ್ಲಿಂ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದರು. ಮುಂಜಾಗೃತ ಕ್ರಮವಾಗಿ ಬೆಳಗ್ಗೆಯೇ ಪೊಲೀಸರು ಇತರ ಅಂಗಡಿಗಳನ್ನು ಬಂದ್ ನಡೆಸುವಂತೆ ಸೂಚಿಸಿದ್ದರು. ಪೊಲೀಸರ ಮಾತು ಕೇಳಿ ಕೆಲ ಮುಸ್ಲಿಮೇತರರು ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿದರು. ಆದರೆ ಪೇಟೆಯಲ್ಲಿ ಜನಸಂಚಾರವಿರದಿದ್ದರಿಂದ ವ್ಯಾಪಾರವಿಲ್ಲದೆ ಬಳಿಕ ಬಹುತೇಕ ಮುಸ್ಲಿಮೇತರ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ತೆರಳಿದರು.

ಲಾಠಿ ಬೀಸಿ ಗುಂಪು ಚದುರಿಸಿದ ಪೊಲೀಸರು : ಉಪ್ಪಿನಂಗಡಿಯ ಮಠದಲ್ಲಿ ಗುಂಪು ಜಮಾವಣೆಯಾಗುತ್ತಿದ್ದಂತೆಯೇ ಸಕಾಲಕ್ಕೆ ಸ್ಥಳಕ್ಕೆ ತೆರಳಿದ ಪೊಲೀಸರು ಲಾಠಿ ಬೀಸಿ ಗುಂಪು ಚದುರಿಸಿದರು.

ಬೆಳಗ್ಗೆಯೇ ಖಾಸಗಿ ಬಸ್‌ಗಳಿಗೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದರಿಂದ ಬಳಿಕ ಖಾಸಗಿ ಬಸ್‌ಗಳು ಸಂಪೂರ್ಣ ಸಂಚಾರ ಸ್ಥಗಿತಗೊಳಿಸಿದ್ದವು. ಬೆಳಗ್ಗೆ 7.30ರ ಮೊದಲು ಮಂಗಳೂರಿನಿಂದ ಬಂದ ಎರಡು ಕೆಎಸ್ಸಾರ್ಟಿಸಿ ಬಸ್‌ಗಳು ಹಾಸನ ಕಡೆ ತೆರಳಿದ್ದು ಬಿಟ್ಟರೆ ಬಳಿಕ ಮಂಗಳೂರಿನಿಂದ ಯಾವುದೇ ಕೆಎಸ್ಸಾರ್ಟಿಸಿ ಬಸ್ ಉಪ್ಪಿನಂಗಡಿ ಕಡೆ ಆಗಮಿಸಲಿಲ್ಲ. ಉಪ್ಪಿನಂಗಡಿಯಿಂದ ಪುತ್ತೂರು ಸೇರಿದಂತೆ ಇನ್ನಿತರ ಕಡೆಗೆ ಹೋಗುವ ಬಸ್‌ಗಳನ್ನು 10 ಗಂಟೆಯ ಬಳಿಕ ಸ್ಥಗಿತಗೊಳಿಸಲಾಯಿತು. ಹಾಸನದಿಂದ ಮಂಗಳೂರಿಗೆ ತೆರಳುವ ಬಸ್ಸೊಂದನ್ನು ಉಪ್ಪಿನಂಗಡಿ ಬಸ್‌ನಿಲ್ದಾಣದಲ್ಲಿಯೇ ನಿಲುಗಡೆಗೊಳಿಸಲಾಯಿತು. ಧರ್ಮಸ್ಥಳ ಕಡೆ ಹೋಗುವ ಬಸ್‌ಗಳಿಗೆ ದುಷ್ಕರ್ಮಿಗಳು ಕಲ್ಲೆಸೆದಿದ್ದು, ಬಳಿಕ ಆ ಭಾಗಕ್ಕೂ ಬಸ್ ಸಂಚಾರ ಸ್ಥಗಿತಗೊಳಿಸಲಾಯಿತು. ಜನಸಂಖ್ಯೆ ವಿರಳವಾಗಿದ್ದರಿಂದ ಬಸ್‌ಗಳೂ ಪ್ರಯಾಣಿಕರ ಕೊರತೆ ಎದುರಿಸಬೇಕಾಯಿತು. ಬಸ್ ನಿಲ್ದಾಣವು ಬಿಕೋ ಎನ್ನುತ್ತಿತ್ತು. ಇನ್ನು ದೂರದೂರಿನಿಂದ ಬಂದ ಪ್ರಯಾಣಿಕರು ತಾವು ತಲುಪಬೇಕಾದ ಸ್ಥಳ ತಲುಪಲು ಸಾರಿಗೆ ವ್ಯವಸ್ಥೆಯಿಲ್ಲದ್ದರಿಂದ ಪರದಾಡುವಂತಾಯಿತು. ಏಕಾಏಕಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿರುವುದಕ್ಕೆ ಪ್ರಯಾಣಿಕರು ಉಪ್ಪಿನಂಗಡಿಯ ಟಿಸಿ ಪಾಯಿಂಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಪೇಟೆಯಲ್ಲಿಯೂ ಕೂಡಾ ಬೆರಳೆಣಿಕೆಯ ಅಟೋಗಳು ಮಾತ್ರ ಬಾಡಿಗೆ ನಡೆಸುತ್ತಿದ್ದವು.

ಒಟ್ಟಿನಲ್ಲಿ ಕೆಲವೊಂದು ಅಹಿತಕರ ಘಟನೆಗಳನ್ನು ಬಿಟ್ಟರೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಈ ಅಘೋಷಿತ ಬಂದ್ ಶಾಂತಿಯುತವಾಗಿಯೇ ನಡೆಯಿತು. ಮುಂಜಾಗೃತ ಕ್ರಮವಾಗಿ ಅಲ್ಲಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಶಾಂತಿ ಕಾಪಾಡಲು ನೆರವಾದರು.