ಪದಚ್ಯುತ ಅಧ್ಯಕ್ಷ ಸೈರಸ್ ಮಿಸ್ತ್ರಿ ತಾವು ಮತ್ತೆ ಟಾಟಾ ಗ್ರೂಪ್ನ ಅಧ್ಯಕ್ಷರಾಗಿ ಅಥವಾ ಯಾವುದೇ ಹುದ್ದೆಯ ಸ್ವರೂಪದಲ್ಲಿರಲು ತಮಗೆ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.
ಪದಚ್ಯುತ ಅಧ್ಯಕ್ಷ ಸೈರಸ್ ಮಿಸ್ತ್ರಿ ತಾವು ಮತ್ತೆ ಟಾಟಾ ಗ್ರೂಪ್ನ ಅಧ್ಯಕ್ಷರಾಗಿ ಅಥವಾ ಯಾವುದೇ ಹುದ್ದೆಯ ಸ್ವರೂಪದಲ್ಲಿರಲು ತಮಗೆ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ಅಧ್ಯಕ್ಷ ಹುದ್ದೆಗೆ ಮರು ನೇಮಕ ಮಾಡುವಂತೆ ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿ(ಎನ್ಸಿಎಲ್ಎಟಿ) ಆದೇಶ ನೀಡಿದೆ.
”ಟಾಟಾ ಸಮೂಹದ ಹಿತಾಸಕ್ತಿಗಳಿಗಾಗಿ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನನ್ನ ವಿರುದ್ಧದ ಅಪಪ್ರಚಾರವನ್ನು ಹೋಗಲಾಡಿಸಲು ನಾನು ಕಾನೂನು ಹೋರಾಟ ಮಾಡಿದೆ. ಈಗ ಎನ್ಸಿಎಲ್ಟಿ ಆದೇಶದ ಹೊರತಾಗಿಯೂ ನಾನು ಟಾಟಾ ಸನ್ಸ್ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನ ಅಥವಾ ಕಂಪನಿಯ ಯಾವುದೇ ನಿರ್ದೇಶಕ ಸ್ಥಾನವನ್ನು ವಹಿಸಿಕೊಳ್ಳುವುದಿಲ್ಲ” ಎಂದು ಸೈರಸ್ ಮಿಸ್ತ್ರಿ ಹೇಳಿದ್ದಾರೆ.
ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿ ಸೈರಸ್ ಮಿಸ್ತ್ರಿಯವರನ್ನು ಟಾಟಾ ಸನ್ಸ್ ಅಧ್ಯಕ್ಷ ಹುದ್ದೆಗೆ ಮರು ನೇಮಕ ಮಾಡುವಂತೆ ಆದೇಶ ನೀಡಿತ್ತು. ಮೂರು ವರ್ಷಗಳ ಹಿಂದೆ 2016ರಲ್ಲಿ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿ ಸೈರಸ್ ಮಿಸ್ತ್ರಿಯನ್ನು ಟಾಟಾ ಗ್ರೂಪ್ನ ಆಡಳಿತ ಮಂಡಳಿಯಿಂದ ಹೊರ ಹಾಕಲಾಗಿತ್ತು. ನಂತರ ರತನ್ ಟಾಟಾ ಸಂಸ್ಥೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಆ ಬಳಿಕ ಮಿಸ್ತ್ರಿ ಕಂಪನಿಯ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿ ನ್ಯಾಯಮಂಡಳಿ ಮೊರೆ ಹೋಗಿದ್ದರು.
ಸೈರಸ್ ಮಿಸ್ತ್ರಿ ಅವರನ್ನು ಮರುನೇಮಕ ಮಾಡಬೇಕೆಂಬ ಎನ್ಸಿಎಲ್ಎಟಿ ಆದೇಶ ರದ್ದುಪಡಿಸಬೇಕೆಂದು ಟಾಟಾ ಸನ್ಸ್ನ ಅರ್ಜಿಯು ಈ ವಾರ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ಆದರೆ ಅದಕ್ಕೂ ಮುಂಚೆಯೇ ಸೈರಸ್ ಮಿಸ್ತ್ರಿ ಈ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ.