ಟೆಹರಾನ್: ಸೇನಾಧಿಕಾರಿ ಮೇಜರ್ ಜನರಲ್ ಖಾಸಿಂ ಸುಲೇಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲೆಂದು ಇರಾಕ್ನಲ್ಲಿರುವ ಅಮೆರಿಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿದ್ದ ಇರಾನ್, ಇದೀಗ ಮಾಧ್ಯಮಗಳ ಮೂಲಕ ತನ್ನ ವಾದವನ್ನು ಮುಂದಿಡುವ ಮತ್ತು ತಾನು ಮಾಡಿದ್ದನ್ನು ಸರಿಯೆಂದು ಬಿಂಬಿಸುವ ‘ಕಥನ ಯುದ್ಧ’ ಆರಂಭಿಸಿದೆ

.
ದಾಳಿಯ ನಂತರ ಹೇಳಿಕೆ ಬಿಡುಗಡೆ ಮಾಡಿದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕೋರ್ (ಐಆರ್ಜಿಸಿ), ‘ಜಗತ್ತಿನ ದೊಡ್ಡ ಸೈತಾನ, ಯುದ್ಧಪಿಪಾಸು ಮತ್ತು ಉದ್ಧಟ ಅಮೆರಿಕ ಸರ್ಕಾರಕ್ಕೆ ಇದು ನಮ್ಮ ಎಚ್ಚರಿಕೆ. ಇರಾನ್ ವಿರುದ್ಧ ನೀವು ಇನ್ನೊಂದು ಹೆಜ್ಜೆ ಮುಂದಿಟ್ಟರೂ, ನಾವು ಮತ್ತಷ್ಟು ಹಿಂಸಾತ್ಮಕವಾಗಿ ನಿಮ್ಮನ್ನು ಹೊಸಕಿಹಾಕುವಂಥ ಪ್ರತಿಕ್ರಿಯೆಗೆ ಮುಂದಾಗಬೇಕಾಗುತ್ತದೆ’ ಎಂದು ಕಟುವಾಗಿ ಎಚ್ಚರಿಸಿದೆ.
ಕ್ಷಿಪಣಿ ದಾಳಿಯನ್ನು ‘ಆಪರೇಷನ್ ಮಾರ್ಟೈರ್ ಸುಲೇಮಾನಿ (ಹುತಾತ್ಮ ಸುಲೇಮಾನಿ ಕಾರ್ಯಾಚರಣೆ) ಎಂದು ಬಣ್ಣಿಸಿರುವ ಐಆರ್ಜಿಸಿ, ನಮ್ಮ ನಾಯಕನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದು ನಮ್ಮ ಹಕ್ಕು. ಅದರಂತೆ ಈ ದಾಳಿ ಮಾಡಿದ್ದೇವೆ’ ಎಂದು ಹೇಳಿಕೊಂಡಿದೆ.
‘ಅಮೆರಿಕ ಸೇನೆಗೆ ಸಹಾಯ ಮಾಡುವ ಯಾವುದೇ ದೇಶ ಇರಾನ್ ದಾಳಿ ಎದುರಿಸಬೇಕಾಗುತ್ತದೆ’ ಎಂದು ಪರೋಕ್ಷವಾಗಿ ಇಸ್ರೇಲ್ ಮತ್ತು ಸೌದಿ ಅರೇಬಿಯಾಗಳಿಗೆ ಎಚ್ಚರಿಕೆ ನೀಡಿದೆ.