ಕೊರೊನಾ ಎಫೆಕ್ಟ್ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಷು ಮಾಸ ಜಾತ್ರಾ ಮಹೋತ್ಸವ, ರಥೋತ್ಸವ ರದ್ದು ; ಪ್ರಕಟಣೆಯಲ್ಲಿ ಡಾ. ವೀರೇಂದ್ರ ಹೆಗ್ಗಡೆ ಮಾಹಿತಿ – ಕಹಳೆ ನ್ಯೂಸ್
ಬೆಳ್ತಂಗಡಿ : ನಾಡು ಕೊರೊನಾ ವೈರಸ್ ಸೋಂಕಿನ ಭೀತಿಯಿಂದ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಬೇಕಿದ್ದ ವಿಷು ಮಾಸದ ಜಾತ್ರೆ ರದ್ದುಪಡಿಸಲಾಗಿದೆ.
ಇದರೊಂದಿಗೆ ನಡೆಯಬೇಕಾಗಿದ್ದ ಮಂಜುನಾಥ ಸ್ವಾಮಿ ರಥೋತ್ಸವ, ಕಟ್ಟೆ ಪೂಜೆ ಎಲ್ಲವೂ ರದ್ದಾಗಿದೆ.
ದೇವ ಪ್ರಶ್ನೆಯ ಮೂಲಕ ಪರಿಶೀಲಿಸಿದ ಬಳಿಕ ರದ್ದು ನಿರ್ಧಾರವನ್ನು ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರು ಪ್ರಕಟಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬೀಡುಗಡೆ ಮಾಡಿರುವ ಅವರು ಮಂಜುನಾಥ ಸ್ವಾಮಿಯ ಒಪ್ಪಿಗೆ ಪಡೆದು ಜಾತ್ರಾ ಮಹೋತ್ಸವ ರದ್ದು ಪಡಿಸಲಾಗಿದೆ.
ಐದು ದಿನಗಳ ಕಾಲ ನಡೆಯಬೇಕಾಗಿದ್ದ ಶ್ರೀ ಮಂಜುನಾಥ ಸ್ವಾಮಿಯ ರಥೋತ್ಸವ, ವಿವಿಧ ಕಟ್ಟೆಗಳಿಗೆ ವಿಹಾರ ಇತ್ಯಾದಿಗಳ ಜೊತೆಗೆ ನೇತ್ರಾವತಿ ನದಿಗೆ ಅವಭ್ರತ ವಿಹಾರ ಮಾಡುವುದನ್ನು ರದ್ದುಪಡಿಸಲಾಗಿದೆ.
ಜಾತ್ರೆ ರದ್ದಾದ ಬಗ್ಗೆ ಭಕ್ತರು ಸಂಕೋಚ ಪಡಬೇಕಾಗಿಲ್ಲ. ಆದರೆ ಮಹಾಮಾರಿ ಕೊರೊನಾ ಸೋಂಕು ರೋಗ ಮುಕ್ತಿಗಾಗಿ ಕ್ಷೇತ್ರದಲ್ಲಿ ನಿರಂತರ ಪ್ರಾರ್ಥನೆ ಮುಂದುವರೆಯಲಿದೆ ಎಂದು ಅವರು ಹೇಳಿದ್ದಾರೆ.