Friday, September 20, 2024
ರಾಜ್ಯಸುದ್ದಿ

ಲಾಕ್​ಅಪ್ ಡೆತ್ ತಡೆಗೆ ಸಿಸಿಟಿವಿ ಅಳವಡಿಸಿದ್ದನ್ನು ಖಾತರಿಪಡಿಸಿ – ಕೇಂದ್ರಕ್ಕೆ ಸುಪ್ರೀಂ ಸೂಚನೆ – ಕಹಳೆ ನ್ಯೂಸ್

ನವದೆಹಲಿ: ಎಲ್ಲ ವಿಚಾರಣಾ ಕೊಠಡಿಗಳು ಮತ್ತು ಲಾಕ್​ಅಪ್​ಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಆಡಿಯೋ ರೆಕಾರ್ಡರ್​ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಇದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನೀಡಿದ ಐತಿಹಾಸಿಕ ತೀರ್ಪು ಒಂದರಲ್ಲಿ ಸೂಚಿಸಿದೆ. ಸುಪ್ರೀಂ ಕೋರ್ಟ್​ನ ಈ ಆದೇಶವು ಪೊಲೀಸರಿಗಷ್ಟೇ ಅಲ್ಲ ಸಿಬಿಐ, ಇಡಿ, ಎನ್​ಐಎಗೂ ಅನ್ವಯವಾಗುತ್ತದೆ. ಲಾಕ್​ಅಪ್ ಡೆತ್ ಕೇಸ್​ಗಳು, ಚಿತ್ರಹಿಂಸೆ ಪ್ರಕರಣಗಳನ್ನು ತಡೆಯುವ ದೃಷ್ಟಿಯಿಂದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ 2018ರಲ್ಲೇ ಸುಪ್ರೀಂ ಕೋರ್ಟ್​ ಆದೇಶ ನೀಡಿತ್ತು.

ನ್ಯಾಯಮೂರ್ತಿಗಳಾದ ಆರ್​ಎಫ್​ ನಾರಿಮನ್, ಕೆ.ಎಂ.ಜೋಸೆಫ್​, ಅನಿರುದ್ಧಾ ಬೋಸ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಸೂಚನೆ ನೀಡಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲೂ ಸಿಸಿಟಿವಿ ಕ್ಯಾಮೆರಾ, ಆಡಿಯೋ ರೆಕಾರ್ಡರ್ ಅಳವಡಿಸಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಸಿಸಿಟಿವಿ ಕ್ಯಾಮೆರಾಗಳು ಪೊಲೀಸ್ ಠಾಣೆಯ ಪ್ರವೇಶ ಮತ್ತು ನಿರ್ಗಮನ, ಮುಖ್ಯದ್ವಾರ, ಲಾಕ್​ಅಪ್​, ಕಾರಿಡಾರ್​, ಲಾಬಿ, ರಿಸೆಪ್ಶನ್​, ಲಾಕ್​ಅಪ್​ ಹೊರಭಾಗದಲ್ಲೂ ಅಳವಡಿಸಿರಬೇಕು. ಯಾವುದೇ ಪ್ರದೇಶ ಸಿಸಿಟಿವಿ ಕ್ಯಾಮೆರಾದಿಂದ ಮರೆಯಾಗಿದೆ ಎನ್ನುವ ನೆಪ ಬಾರದಂತೆ ಖಾತರಿಪಡಿಸಿಕೊಳ್ಳಬೇಕು ಎಂದು ತೀರ್ಪು ಸೂಚಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳವಾರದ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ, ನೈಟ್​ ವಿಷನ್ ಮತ್ತು ಆಡಿಯೋ ಮುದ್ರಿಸಿಕೊಳ್ಳುವ ಸೌಲಭ್ಯವಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರಬೇಕು. ಅವು ದೃಶ್ಯ ಮತ್ತು ಧ್ವನಿಯನ್ನು ಸ್ಪಷ್ಟವಾಗಿ ದಾಖಲಿಸಿಕೊಳ್ಳುವಂತೆ ಇರಬೇಕು. ಅಂತಹ ಸಿಸಿಟಿವಿ ವ್ಯವಸ್ಥೆಯನ್ನು ಖರೀದಿಸುವುದನ್ನು ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತ ಕಡ್ಡಾಯಗೊಳಿಸಬೇಕು. ಈ ರೀತಿ ಚಿತ್ರೀಕೃತವಾದ ದೃಶ್ಯಗಳನ್ನು ಗರಿಷ್ಠ ಅವಧಿಗೆ ಸಾಧ್ಯವಾಗದೇ ಹೋದರೆ ಕನಿಷ್ಠ ಒಂದು ವರ್ಷವಾದರೂ ಜಾಗರೂಕತೆಯಿಂದ ಉಳಿಸಿಕೊಳ್ಳಬೇಕು ಎಂದು ಹೇಳಿತ್ತು.

ಜಾಹೀರಾತು

ಇದಲ್ಲದೆ, ಬಂಧಿಸುವ ಮತ್ತು ವಿಚಾರಣೆ ನಡೆಸುವ ಅಧಿಕಾರ ಉಳ್ಳ ಸಿಬಿಐ, ಎನ್​ಐಎ, ಇಡಿ, ಎನ್​ಸಿಬಿ, ಡಿಆರ್​ಐ, ಎಸ್​ಎಫ್​ಐಒ ಮತ್ತು ಇತರೆ ತನಿಖಾ ಸಂಸ್ಥೆಗಳಿಗೂ ಇದು ಅನ್ವಯವಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿರುವ ನ್ಯಾಯಪೀಠ, ಇವುಗಳ ಉಸ್ತುವಾರಿಗೆ ಸಮಿತಿ ರಚಿಸುವಂತೆ ಸೂಚಿಸಿತ್ತು. ರಾಜ್ಯ ಮಟ್ಟದ ಉಸ್ತುವಾರಿ ಸಮಿತಿ, ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿಗಳನ್ನು ರಚಿಸಿ ನಿಗಾವಹಿಸಬೇಕು ಎಂದಿದೆ.