
ಪುತ್ತೂರು: ಅಂತರ್ಜಾಲದ ಮುಖಾಂತರ ನಾವು ಮಾಡುವ ಪ್ರತಿಯೊಂದು ಕಾರ್ಯವೂ ನಮ್ಮ ಹೆಜ್ಜೆ ಗುರುತನ್ನು ಅಚ್ಚಳಿಯದೆ ಮೂಡಿಸುತ್ತದೆ. ಒಮ್ಮೆ ನಾವು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮಾಹಿತಿಯನ್ನು ಮುಂದೆ ನಾವು ಬೇಡವೆಂದು ಅಳಿಸಿದರೂ ಅದು ಜಾಲತಾಣದ ಸರ್ವರ್ಗಳಲ್ಲಿ ಭದ್ರವಾಗಿ ಸಂಗ್ರಹಗೊಂಡಿರುತ್ತದೆ. ಆದುದರಿಂದ ನಮ್ಮ ಖಾಸಗಿ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಸಂದರ್ಭದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಬೇಕು. ನಮ್ಮ ಖಾಸಗಿ ಮಾಹಿತಿಯನ್ನು ಗೌಪ್ಯವಾಗಿಡದೆ ಹೋದಲ್ಲಿ ಹ್ಯಾಕರ್ಗಳು, ಸೈಬರ್ ಅಪರಾಧಿಗಳು ಅದನ್ನು ದುರ್ವಿನಿಯೋಗಮಾಡುತ್ತಾರೆ ಎಂದು ಬೆಂಗಳೂರಿನ ಎನ್. ಎ. ಪಿ. ಲ್ಯಾಬ್ಸ್ನ ಪ್ರೊಡಕ್ಟ್ ಸೆಕ್ಯುರಿಟಿ ಇಂಜಿನಿಯರ್ ಪ್ರಣಿತಾ ಕೆ ಎಸ್ ಹೇಳಿದರು. ಸಂತ ಫಿಲೋಮಿನಾ ಕಾಲೇಜಿನ ಆಂಗ್ಲ ಭಾಷಾ ವಿಭಾಗ ಮತ್ತು ಗಣಕ ವಿಜ್ಞಾನ ವಿಭಾಗಗಳ ಸಹಯೋಗದಲ್ಲಿ ‘ಸೈಬರ್ ಸೆಕ್ಯುರಿಟಿ ಅ್ಯಂಡ್ ಪರ್ಸನಲ್ ಡೇಟಾ ಪ್ರೊಟೆಕ್ಷನ್’ ಎಂಬ ವಿಷಯದ ಕುರಿತು ಜುಲೈ 14 ರಂದು ಆಯೋಜಿಸಲಾದ ರಾಷ್ಟ್ರ ಮಟ್ಟದ ವೆಬಿನಾರ್ನಲ್ಲಿ ಸಂಪನ್ಮೂಲ ವ್ಯಕಿಯಾಗಿ ಭಾಗವಹಿಸಿ, ಮಾತನಾಡಿದರು. ನಮ್ಮ ಬ್ಯಾಂಕ್ ಖಾತೆಯ ವಿವರ, ಆಧಾರ್ ನಂಬರ್ ಮುಂತಾದ ಮಾಹಿತಿಯ ಗೌಪ್ಯತೆಯನ್ನು ಹೇಗೆ ಕಾಪಾಡುವುದು? ಯಾವೆಲ್ಲ ರೀತಿಯಲ್ಲಿ ಜನರು ಸೈಬರ್ ಅಪರಾಧಿಗಳಿಗೆ ತಮಗರಿವಿಲ್ಲದೇ ಮಾಹಿತಿ ನೀಡುತ್ತಾರೆ. ನಮ್ಮ ಮಾಹಿತಿಯ ದುರ್ಬಳಕೆ ಹೇಗೆ ನಡೆಯುತ್ತದೆ? ಮುಂತಾದ ವಿಷಯಗಳನ್ನು ಅವರು ವಿವರಿಸಿದರು. ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ಭಾರತಿ ಎಸ್ ರೈ ಸ್ವಾಗತಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ ವಂದಿಸಿ, ಸಹಾಯಕ ಪ್ರಾಧ್ಯಾಪಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು.