Friday, September 20, 2024
ರಾಜಕೀಯ

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ 30 ದಿನಗಳಲ್ಲಿ ಲೈಟ್‌ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿಯವರ ಹೆಸರು – ನಾಗರಾಜ ಶೆಟ್ಟಿ

ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ 30 ದಿನಗಳ ಒಳಗೆ ಮಂಗಳೂರು ನಗರದ ಲೈಟ್‌ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿಯವರ ಹೆಸರು ಇಡಲಾಗುವುದು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ನಾಗರಾಜ ಶೆಟ್ಟಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ಮಂಗಳೂರು ದಕ್ಷಿಣ ಪ್ರಚಾರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗರಾಜ ಶೆಟ್ಟಿ, ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲೇ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ ನಾಮಕರಣವಾಗಿ, ರಾಜ್ಯ ಸರಕಾರದಿಂದ ಅಧಿಸೂಚನೆಯೂ ಆಗಿತ್ತು. ಹಾಗಿದ್ದರೂ ಶಾಸಕರಾಗಿದ್ದ ಜೆ.ಆರ್. ಲೋಬೋ ಅದಕ್ಕೆ ತಡೆ ತಂದು ಇದೀಗ ನ್ಯಾಯಾಲಯದಲ್ಲಿ ಹೋರಾಟ ನಡೆಯುತ್ತಿದೆ ಎಂದು ನಾಗರಾಜ ಶೆಟ್ಟಿ ಹೇಳಿದರು.

ಜಾಹೀರಾತು

ಮುಲ್ಕಿ ಸುಂದರರಾಮ ಶೆಟ್ಟರ ಹೆಸರಿನಲ್ಲಿ ಸರಕಾರದಿಂದ ಅಧಿಕೃತವಾಗಿ ರಸ್ತೆಯೊಂದಿಗೆ ನೀಡಲಾದ ಹೆಸರಿಗೆ ತಡೆ ತಂದಿರುವುದರಿಂದ ಜನತೆಗೆ ನೋವಾಗಿದೆ. ಈ ಬಗ್ಗೆ ಬಿಜೆಪಿ ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ತಾನು ಕೂಡಾ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲಿತವನಾಗಿದ್ದು, ಆ ಸಂಸ್ಥೆಯ ಬಗ್ಗೆ ಅಪಾರ ಗೌರವವಿದೆ. ಕಾಲೇಜು ಈ ರಸ್ತೆಯಿಂದಾಗಿ ಗುರುತಿಸಬೇಕಾಗಿಲ್ಲ. ಹಾಗಾಗಿ ಸರಕಾರದಿಂದಲೇ ಮಾನ್ಯತೆ ದೊರಕಿರುವ ಮುಲ್ಕಿ ಸುಂದರ ಶೆಟ್ಟಿ ಹೆಸರನ್ನು ರಸ್ತೆಗೆ ನಾಮಕರಣ ಮಾಡಲು ಪಕ್ಷ ಬದ್ಧ.  ಈ ನಡುವೆ ಬಿಜೆಪಿಯಲ್ಲಿದ್ದ ಶ್ರೀಕರ ಪ್ರಭು ಈ ರಸ್ತೆ ಬಗ್ಗೆ ಜೆ.ಆರ್.ಲೋಬೋ ಪರವಾಗಿ ಹೇಳಿಕೆ ನೀಡಿರುವುದಾಗಿ ಜನರಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಬಿಜೆಪಿ ವತಿಯಿಂದ ತಾನು ಈ ಬಗ್ಗೆ ಸ್ಪಷ್ಟನೆ ನೀಡುತ್ತಿರುವುದಾಗಿ ನಾಗರಾಜ ಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಭಾಸ್ಕರ ಚಂದ್ರ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ಸುಧಾಕರ ಜೋಶಿ ಉಪಸ್ಥಿತರಿದ್ದರು.