Friday, September 20, 2024
ರಾಜಕೀಯ

ಒಬ್ಬ ಹರೀಶ್ ಪೂಂಜಾರನ್ನು ಸೋಲಿಸಲು ಜೊತೆಯಾಗಿದ್ದು ಎಷ್ಟು ವಿರೋಧಿಗಳು ಗೊತ್ತೇ? ಆದರೆ, ಎಷ್ಟೇ ವಿರೋಧ ಬಂದರು ಗೆಲುವು ಪೂಂಜರದ್ದೇ! – ಕಹಳೆ ನ್ಯೂಸ್

೨೦೧೪ರಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿಯೇ ಲೋಕಸಭಾ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ಘೋಷಣೆ ಮಾಡಿದಾಗ,ವಿರೋಧಪಕ್ಷಗಳು ತಡಬಡಾಯಿಸಿ ಹೋಗಿದ್ದವು.

೨೦೦೨ರಿಂದ ದೇಶದಾದ್ಯಂತ ಇದ್ದ ಗಂಜಿಕೇಂದ್ರದ ಮಾಫಿಯಾಗಳಿಂದ Hate Campaign ನಡೆಸಿ,ಅಂತರರಾಷ್ಟ್ರೀಯ ಮಟ್ಟದ ಲಾಬಿ ನಡೆಸಿಯೂ ಮೋದಿಯವರ ಅಶ್ವಮೇಧವನ್ನು ಸಾಧ್ಯವಾಗಲಿಲ್ಲವೆಂಬ ಹತಾಶೆಯಿಂದ ಬಾಲಿಶವಾಗಿ ವರ್ತಿಸುತ್ತಾ ಬಾಯಿಗೆ ಬಂದಂತೆ ಹೇಳಿಕೆಗಳನ್ನು ಕೊಡಲಾರಂಭಿಸಿದ್ದರು. ಅಂತಹ ತಲೆಕೆಟ್ಟ ಹೇಳಿಕೆಗಳಲ್ಲೊಂದು ‘ಮೋದಿ ವಿಭಜನಕಾರಿ’ ಎನ್ನುವುದಾಗಿತ್ತು. ಮೋದಿ ವಿಭಜನಕಾರಿಯೋ ಅಲ್ಲವೋ ಎನ್ನುವುದು ಕೆಲವೇ ವರ್ಷಗಳಲ್ಲಿ ಸಾಬೀತಾಗಿ ಹೋಯಿತು. ಲೋಕಸಭಾ ಚುನಾವಣೆಯಲ್ಲಿ ವೈಟ್ ವಾಷ್ ಆಗಿ ಹೋಗಿದ್ದ ಕಾಂಗ್ರೆಸ್ ಮತ್ತಿತರ ವಿರೋಧಪಕ್ಷಗಳಿಗೆ, ಮೋದಿ ಎಂಬ ವಿಭಜನಕಾರಿಯನ್ನು ಎದುರಿಸಲು ನಾವೆಲ್ಲರೂ ಒಂದಾಗಲೇಬೇಕು ಎಂಬ ವಿಷಯ ಅರ್ಥವಾಗಿ ಹೋಗಿತ್ತು.ದಶಕಗಳ ಕಾಲ ಪರಸ್ಪರ ಕತ್ತಿಮಸೆಯುತ್ತಿದ್ದವರೆಲ್ಲ ಒಂದಾಗಿದ್ದರು. ಬಿಹಾರದಲ್ಲಿ ಒಂದು ಕಾಲದ ಸ್ನೇಹಿತರಾಗಿದ್ದು ನಂತರ ಎದುರಾಳಿಗಳಾಗಿದ್ದ ಲಾಲೂ-ನಿತೀಶ್,ಪಶ್ಚಿಮ ಬಂಗಾಳದ ಕಮ್ಯುನಿಸ್ಟ್-ಮಮತಾ ಬ್ಯಾನರ್ಜಿ,ಉತ್ತರಪ್ರದೇಶದ ಮುಲಾಯಂ-ಮಾಯಾವತಿ ಹೀಗೆ ಎಲ್ಲಾ ಅವಕಾಶವಾದಿಗಳು ಒಂದಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ರಾಜಕೀಯ ಜೀವನದಲ್ಲಿ ಪಕ್ಷಗಳಿಗೆ ಐಡಿಯಾಲಜಿ,ಸಿದ್ಧಾಂತಗಳಿರಬೇಕು ಮತ್ತು ತಮ್ಮ ಪಕ್ಷದ ಸಿದ್ಧಾಂತಗಳಲ್ಲಿ ರಾಜಕಾರಣಿಗಳಾದವರಿಗೆ ಬದ್ಧತೆಯಿರಬೇಕು. ಅಂತಹ ಬದ್ಧತೆಯಿಲ್ಲದವರು ಮಾತ್ರವೇ, ಲಾಭದ ಲೆಕ್ಕಾಚಾರ ಹಾಕಿಕೊಂಡು, ಜೀವನವಿಡೀ ನಂಬಿಕೊಂಡ ಸಿದ್ಧಾಂತಕ್ಕೆ ತಿಲಾಂಜಲಿಯಿಟ್ಟು ವಿರೋಧಿಗಳ ಜೊತೆಗೂ ಪಲ್ಲಂಗವೇರಲು ಹಿಂಜರಿಯಲಾರರು.ರಾಷ್ಟ್ರೀಯ ಮಟ್ಟದಲ್ಲಿ ಮೋದಿ ವಿರೋಧಿಗಳು ಮಾಡಿದ್ದೂ ಅದನ್ನೇ. ತಮ್ಮ ರಾಜಕೀಯ ಲಾಭಕ್ಕಾಗಿ ಸಾಕಿ ಬೆಳೆಸಿದ ತಾಯಿ (ಪಕ್ಷ ಮತ್ತು ಸಿದ್ಧಾಂತ)ಯನ್ನೇ ತೊರೆದು ಹೋದರು. ಯಾವ ಮೋದಿಯನ್ನು ವಿಭಜನಕಾರಿಯೆಂದು ಜರಿಯುತ್ತಿದ್ದರೋ ಅದೇ ಮೋದಿಯವರ ಸೈದ್ಧಾಂತಿಕ ಬದ್ಧತೆ,ಯುವಕರ ನಡುವಿನ ಜನಪ್ರಿಯತೆಗೆ ಬೆದರಿ,ಕಳ್ಳರೆಲ್ಲ ಸಂತೆಯಲ್ಲಿ ಒಂದಾಗುವಂತೆ ರಾಜಕೀಯ ಎದುರಾಳಿಗಳು ಒಂದಾಗಿದ್ದರು.ರಾಷ್ಟ್ರಮಟ್ಟದಲ್ಲಿ ನೋಡಿದ್ದ ಇಂತಹ ರಾಜಕೀಯ ಪರಿಸ್ಥಿತಿಗೆ ಇಂದು ಬೆಳ್ತಂಗಡಿ ಕ್ಷೇತ್ರದ ಜನತೆಗಳು ಸಾಕ್ಷಿಗಳಾಗಿದ್ದಾರೆ.

ಒಂದೆಡೆ ೮೦ ವರ್ಷದ ವಸಂತ್ ಬಂಗೇರಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೇ ಅವರ ನೇರ ಎದುರಾಳಿಯಾಗಿ ಬಿಜೆಪಿ ಅಭ್ಯರ್ಥಿಯಾಗಿರುವುದು ೩೫ ಹರೆಯದ ಯುವನಾಯಕ, ಅಭಿಮಾನಿಗಳ ಪಾಲಿನ ಹಿಂದೂ ಫೈರ್ ಬ್ರ್ಯಾಂಡ್ ಹರೀಶ್ ಪೂಂಜಾ ಇದ್ದಾರೆ.ವಸಂತ್ ಬಂಗೇರಾ ಅವರ ರಾಜಕೀಯ ಅನುಭವಕ್ಕಿಂತ ಕಡಿಮೆ ವಯಸ್ಸಿನ ಯುವನಾಯಕನ್ನು ವಸಂತ್ ಅವರು ಕ್ರೀಡಾಸ್ಫೂರ್ತಿಯಿಂದಲೇ ಎದುರಿಸಬೇಕಿತ್ತು.ಆದರೆ ಕ್ಷೇತ್ರದ ಸದ್ಯದ ಸ್ಥಿತಿಗತಿಯನ್ನು ನೋಡಿದರೆ ಹಾಗೆ ಅನ್ನಿಸುತ್ತಿಲ್ಲ. ಕಳೆದ ವಾರವಷ್ಟೇ, ಮಾಜಿ ಸಚಿವ,ವಯಸ್ಸಿನ ಹಿರಿಯ ಗಂಗಾಧರ ಗೌಡ ಅವರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಬಾಗಿಲು ಬಡಿದು,ಒಳ ಸೇರಿಕೊಂಡಿದ್ದಾರೆ. ಬಂಗೇರಾ ಮತ್ತು ಗಂಗಾಧರ ಗೌಡರು ಶಾಲಾ ಸಹಪಾಠಿಗಳಂತೆ! ಇವರ ಶಾಲೆ ಬಿಡಿ,ಕಾಲೇಜು ದಿನಗಳು ಮುಗಿದು ರಾಜಕೀಯ ಜೀವನ ಆರಂಭವಾದಾಗ ಇನ್ನೂ ಹುಟ್ಟಿರದಿದ್ದ ಯುವಕ ಹರೀಶ್ ಪೂಂಜಾರ ರಾಜಕೀಯ ಅಶ್ವಮೇಧ ಯಜ್ಞವನ್ನು ಮಣಿಸಲು ಕ್ಷೇತ್ರದ ಪುರಾತನ ಎದುರಾಳಿಗಳು ಈಗ ಕೈ ಜೋಡಿಸಿದ್ದಾರಂತೆ. ಪ್ರತಿ ಚುನಾವಣೆಗಳಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್-ಜೆಡಿಎಸ್-ಬಿಜೆಪಿ ಎನ್ನದೇ ಪಕ್ಷಾಂತರ ಮಾಡಿ ಎದುರಾಳಿಗಳಾಗುತ್ತಿದ್ದ ಈ ಇಬ್ಬರು ಇಂದು ಒಂದಾಗಿರುವುದು ಹರೀಶ್ ಪೂಂಜರೆಂಬ ಯುವನಾಯಕನನ್ನು ಎದುರಿಸಲು. ಅಸಲಿಗೆ ಒಂದಾಗಿರುವದು ಇವರಿಬ್ಬರು ಮಾತ್ರವೇ ಅಲ್ಲ, ಕಮ್ಯುನಿಸ್ಟ್,SDPI,ಜೆಡಿಎಸ್ ಹೀಗೆ ಎಲ್ಲಾ ಪಕ್ಷಗಳು ಒಟ್ಟಾಗಿ ಮುಗಿಬಿದ್ದಿರುವುದು ೩೫ರ ಯುವಕನ ಮೇಲೆ. ಭಾರತದ ಮಟ್ಟಿಗೆ ಮೋದಿ ವಿಭಜನಕಾರಿಯಾದರೇ , ಬೆಳ್ತಂಗಡಿಯ ಮಟ್ಟಿಗೆ ಈಗ ಹರೀಶ್ ಪೂಂಜಾ ವಿಭಜನಕಾರಿಯಾಗಿದ್ದಾರೆ ಎನಿಸುತ್ತಿದೆ.

ಇಷ್ಟಕ್ಕೂ ಹರೀಶರ ಜನಪ್ರಿಯತೆ ನೋಡಿ ಈ ಪುರಾತನ ರಾಜಕಾರಾಣಿಗಳು ದಿಗಿಲಿಗೆ ಬಿದ್ದಿರುವುದು ಸಹಜವೇ ಆಗಿದೆ ಬಿಡಿ. ಬೆಳ್ತಂಗಡಿಯ ಹಳ್ಳಿಯೊಂದರೆ ಹುಡುಗ ಸ್ವಪ್ರತಿಭೆ ಮತ್ತು ಶ್ರಮದಿಂದ ಹೈಕೋರ್ಟಿನ ವಕೀಲನಾಗಿ ಮಾತ್ರ ಬೆಳೆಯಲಿಲ್ಲ.ಹಾಗೆ ಬೆಳೆಯುತ್ತಲೇ ಅವರು ವಿದ್ಯಾರ್ಥಿ ಚಳವಳಿಗಳ ನಾಯಕನಾಗಿ ಹೋರಾಟ ಮಾಡಿದ್ದರು. ಬೆಂಗಲೂರಿನಲ್ಲಿದ್ದಾಗಲೂ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆಯವರು ಆಗಿನ ಸೋನಿಯಾ ಗಾಂಧೀ ಸರ್ಕಾರದ ವಿರುದ್ಧ ನಡೆಸಿದ್ದ ಚಳವಳಿಯಲ್ಲೂ ಭಾಗವಹಿಸಿದ್ದರು. ಇನ್ನು ಬೆಳ್ತಂಗಡಿ ಕ್ಷೇತ್ರದ ಪ್ರತಿ ಗ್ರಾಮದ ಮತ್ತು ಗ್ರಾಮದ ಪ್ರತಿಕಾರ್ಯಕರ್ತನನ್ನು ಹೆಸರು ಗುರುತು ಹಿಡಿದು ಮಾತನಾಡಿಸಬಲ್ಲ ಈ ವ್ಯಕ್ತಿಗೆ ಕ್ಷೇತ್ರದ ಸಮಸ್ಯೆಗಳು,ಜನರ ನಾಡಿಮಿಡಿತದ ಬಗ್ಗೆ ಈಗಾಗಲೇ ಅರಿವಿದೆ.ಈಗಾಗಲೇ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಕ್ಷೇತ್ರದ ಅಷ್ಟೂ ಗ್ರಾಮಗಳನ್ನು ಸುತ್ತಿ ಬಂದಿದ್ದಾರೆ ಈ ಪುಣ್ಯಾತ್ಮ. ಹೋದಕಡೆಯಲ್ಲೆಲ್ಲಾ ಯುವಕರು ಒಡಹುಟ್ಟಿದ ಸಹೋದರನಂತೆ ಕಂಡರೆ ,ಮಾತೆಯರು ಇದ್ದರೆ ಇಂತಹ ಮಗನೊಬ್ನಿರಬೇಕು ಎನ್ನುತ್ತಾ ಗೆದ್ದು ಬಾ ಮಗ ಎಂದು ಹಾರೈಸುತ್ತಿದ್ದಾರೆ.ಇವೆಲ್ಲದರ ಜೊತೆಗೆ ಇಷ್ಟುವರ್ಷ ಕ್ಷೇತ್ರದಲ್ಲಿ ಅಧಿಕಾರವಿಲ್ಲದೆಯೇ ಸ್ವಂತ ಖರ್ಚಿನಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರದಂತಹ ಪುಣ್ಯಕಾರ್ಯಗಳನ್ನು,ಕಂಬಳ,ಎಂಡೋ ಸಲ್ಫಾನ್ ಪೀಡಿತರ ಪರವಾದ ಹೋರಾಟವನ್ನು ಜನಸಾಮನ್ಯರು ಮರೆತಿಲ್ಲ. ಇಂತಹ ಟ್ರ್ಯಾಕ್ ರೆಕಾರ್ಡ್ ಇಟ್ಟುಕೊಂಡ ಹರೀಶ್ ಪೂಂಜಾರನ್ನು ನೇರವಾಗಿ ಮತ್ತು ಏಕಾಂಗಿಯಾಗಿ ಎದುರಿಸಲು

ಸಾಧ್ಯಾವಿಲ್ಲವೆಂದೇ ಬಂಗೇರಾ-ಗಂಗಾಧರ ಗೌಡ-ಮತ್ತಿತರು ಒಂದಾಗಿದ್ದಾರೆ. ಗಂಗಾಧರ ಗೌಡರಂತೂ ತಮ್ಮ ವಯಸ್ಸು,ರಾಜಕೀಯ ಅನುಭವವನ್ನೆಲ್ಲ ಬದಿಗಿಟ್ಟು, ಹರೀಶ್ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿ ಕ್ಷುಲ್ಲಕ ರಾಜಕಾರಣಕ್ಕೆ ಇಳಿದಿರುವುದು ಅವರ ಹತಾಶೆಯನ್ನು ತೋರಿಸುತ್ತಿದೆ. ಭ್ರಷ್ಟಾಚಾರಕ್ಕೆ ದಾಖಲೆಯಿದ್ದರೆ ದೂರು ದಾಖಲಿಸಬೇಕಿತ್ತು,ಅದನ್ನು ಬಿಟ್ಟು ಹೀಗೆ ತಮ್ಮ ಬೆಂಬಲಿಗರ ಪಡೆಯ ನಡುವೆ ಹೇಳುವ ಮೂಲಕ,ಹರೀಶ್ ಎಂಬ ಯುವಕನ ಮೇಲೆ ಇವರಿಗೆ ಎಷ್ಟು ದ್ವೇಷವಿದೆ ಎನ್ನುವುದನ್ನು ಬಹಿರಂಗಗೊಳಿಸಿದ್ದಾರೆ ಗಂಗಾಧರ ಗೌಡರು.ಈ ಸಿಟ್ಟು ಸಹಜವೇ ಬಿಡಿ, ಮಾಜಿ ಸಚಿವ ಮತ್ತು ಕುಟುಂಬಕ್ಕೆ ಸಿಗದ ಟಿಕೆಟ್ ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ಯುವಕನಿಗೆ ಸಿಕ್ಕರೆ ಸಿಟ್ಟು ಬರುವುದಿಲ್ಲವೇ? ಬೆಳ್ತಂಗಡಿ ಕ್ಷೇತ್ರವೆಂದರೆ ಒಂದೋ ವಸಂತ್ ಬಂಗೇರಾ ಅವರ ಕೈಯ್ಯಲ್ಲಿರಬೇಕು ಅಥವಾ ಗಂಗಾಧರ ಗೌಡರ ಕುಟುಂಬದ ತೆಕ್ಕೆಯಲ್ಲಿರಬೇಕು ಎನ್ನಲಿಕ್ಕೆ ಬೆಳ್ತಂಗಡಿಯೇನೂ ಯಾರ ಸ್ವತ್ತೂ ಅಲ್ಲ ಎನ್ನುವುದು ಇವರಿಗೆ ಅರ್ಥವಾಗಬೇಕಿತ್ತು. ಈ ವಯಸ್ಸಿಗೆ ಅರ್ಥವಾಗಿಲ್ಲವೆಂದರೆ ಇನ್ನು ಅರ್ಥವಾಗುವುದೂ ಸಾಧ್ಯವಿಲ್ಲ ಬಿಡಿ. ಆದರೆ ಬೆಳ್ತಂಗಡಿಯ ಸ್ವಾಭಿಮಾನಿ ಮತ್ತು ಬುದ್ಧಿವಂತ ಮತದಾರರಿಗೆ ಈ ಪುರಾತನ ರಾಜಕಾರಣಿಗಳ ವಂಶಪಾರಂಪರ್ಯ ರಾಜಕಾರಣದ ಆಟಗಳೂ ಗೊತ್ತಿವೆ ಹರೀಶ್ ಪೂಂಜಾ ಎಂಬ ಕಾರ್ಯಕರ್ತರ ನಾಯಕನ ಹೋರಾಟ ಮನೋಭಾವವೂ ಗೊತ್ತಿದೆ. ಮೇ ೧೨ಕ್ಕೆ ಬೆಳ್ತಂಗಡಿಯ ಮಹಾಜನತೆ ಉತ್ತರಿಸಲಿದ್ದಾರೆ. ಮೇ ೧೫ಕ್ಕೆ ಚಕ್ರವ್ಯೂಹದೊಳಗೆ ಸಿಕ್ಕಿಕೊಂಡಿರುವ ಅಭಿಮನ್ಯು ಹರೀಶ್ ಪೂಂಜಾ,ಯಶಸ್ವಿಯಾಗಿ ವ್ಯೂಹ ಭೇದಿಸಿ ಹೊರಬರಲಿದ್ದಾರೆನ್ನುವ ವಿಶ್ವಾಸವಿದೆ.ಏಕೆಂದರೆ ಹರೀಶ್ ಪೂಂಜಾ ಹಿಂದೆ ನಿಂತು ಪಾಂಚಜನ್ಯ ಮೊಳಗಿಸುತ್ತಿರುವುದು ಬೆಳ್ತಂಗಡಿಯ ಮಹಾಜನತೆ.

ಲೇಖನ : ರಾಜೇಶ್ ಕೃಷ್ಣಪ್ಪ ಪೂಜಾರಿ, ಮಡಂತ್ಯಾರ್