Recent Posts

Sunday, September 22, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಅಂಬಿಕಾ ಕಾಲೇಜಿನ ಅನುಪಮ ಪ್ರತಿಭಾ ವೇದಿಕೆಯಲ್ಲಿ ಕಥೆ, ಕವನ ವಾಚನ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ಕಥೆ ಅಥವಾ ಕವನವನ್ನು ರಚಿಸಲು ಒಂದು ವಸ್ತು ಮುಖ್ಯವಾಗಿರುತ್ತದೆ. ಅನೇಕರು ಪ್ರಕೃತಿಯನ್ನು ಆಧರಿಸಿ ಸಾಹಿತ್ಯವನ್ನು ಸೃಷ್ಟಿಸುತ್ತಾರೆ. ಆದರೆ ಬರಹಗಳು ಕೇವಲ ನಿಸರ್ಗ ಆಧಾರಿತವಾಗಿಯೇ ಇರಬೇಕೆಂಬ ನಿಯಮವೇನೂ ಇಲ್ಲ. ಯಾವುದೇ ಸ್ಪೂರ್ತಿಯೊಂದಿಗೆ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಗಿರೀಶ್ ಭಟ್ ಇಳಂತಿಲ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು

ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾಗುತ್ತಿರುವ ಅನುಪಮ ಪ್ರತಿಭಾ ವೇದಿಕೆಯಲ್ಲಿ ನಡೆದ ಕಥೆ-ಕವನ ವಾಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಾಹಿತ್ಯ ಸೃಷ್ಟಿಯನ್ನು ಮಾಡಬಯಸುವವರು ಅತ್ಯಂತ ಒಳ್ಳೆಯ ಓದುಗರಾಗಿರಬೇಕಾದದ್ದು ಮುಖ್ಯ. ವಿವಿಧ ಬರಹಗಳ ಕುರಿತಾದ ಅಧ್ಯಯನವು ಉತ್ತಮ ಕಥೆ, ಕವನಗಳಿಗೆ ಸಹಾಯಕವಾಗುತ್ತವೆ. ವಿದ್ಯಾರ್ಥಿಗಳಾದವರು ಉತ್ಕøಷ್ಟ ಕಥೆ ಕವನಗಳನ್ನು ರಚಿಸುತ್ತಾರೆ ಎನ್ನುವುದಕ್ಕಿಂತ ವೇದಿಕೆಗೆ ಬಂದು ತಾವು ಬರೆದದ್ದನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತಾರೆ ಎಂಬುದೇ ಮುಖ್ಯವಾದದ್ದು. ನಿರಂತರವಾಗಿ ಬರೆಯುವುದರಿಂದ ಉತ್ತಮ ಬರಹಗಾರರಾಗುವುದಕ್ಕೆ ಸಾಧ್ಯ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ ನಾವು ವಾಚಿಸುವ ಕಥೆ, ಕವನಗಳು ಕೇಳುವವರಿಗೆ ಸುಲಭಕ್ಕೆ ಅರ್ಥ ಆಗುವಂತಿರಬೇಕು. ಸಾಹಿತ್ಯಮಂಡನೆಯನ್ನು ಮಾಡುವಾಗ ಶೀರ್ಷಿಕೆಯ ಸಮೇತ ವಾಚಿಸುವುದು ಅತ್ಯಂತ ವಿಹಿತವಾದದ್ದು. ಜೊತೆಗೆ ವಾಚಿಸುವವರ ಮುಖಭಾವವೂ ಸಾಹಿತ್ಯದ ಭಾವನೆಗಳಿಗೆ ಪೂರಕವಾಗಿದ್ದರೆ ಉತ್ತಮ. ಆಗ ಮಾತ್ರ ಹೇಳಿದ ಸಂಗತಿಗಳು ಕೇಳುಗನ ಅಂತರಾಳಕ್ಕೆ ಇಳಿಯುವುದಕ್ಕೆ ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ, ಸಾಹಿತ್ಯ ಸೃಷ್ಟಿ ಎನ್ನುವುದು ವಿಶಿಷ್ಟ ಚಿಂತನೆಯಲ್ಲಿ ಹುಟ್ಟಿಕೊಂಡ ಕಾರ್ಯವಾಗಿರಬೇಕು. ಮುಖದಲ್ಲಿ ಮೂಡಿರುವ ಕಣ್ಣುಗಳು ಬೆರಳುಗಳಲ್ಲಿ ಮೂಡಿದರೆ ಹೇಗಿರಬಹುದು ಎಂಬ ಕಲ್ಪನೆ ಹೊಸ ಬಗೆಯ ಯೋಚನೆಗಳಿಗೆ ನಾಂದಿ ಹಾಡುತ್ತವೆ. ಇಂತಹ ಆಲೋಚನೆಗಳೇ ಕಥೆ, ಕವನ ಸೃಷ್ಟಿಗೆ ಪ್ರೇರಣೆಯನ್ನೊದಗಿಸುತ್ತವೆ ಎಂದರಲ್ಲದೆ ಕವನಗಳಿಗೆ ಗೇಯತೆ ಅತ್ಯಂತ ಮುಖ್ಯ. ಹಾಗೆಯೇ ವಿದ್ಯಾರ್ಥಿಗಳು ಬರೆದ ಕಥೆ, ಕವನಗಳು ಪುಸ್ತಕ ರೂಪದಲ್ಲಿ ದೊರಕುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ್ ಪ್ರಸಾದ್ ಎ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ವಿ, ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿ.ತೇಜಶಂಕರ ಸೋಮಯಾಜಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಅಭಿಷೇಕ್ ಎನ್, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಅಕ್ಷಯ್ ಹೆಗಡೆ, ಇಂಗ್ಲಿಷ್ ಉಪನ್ಯಾಸಕಿ ಸಂಧ್ಯಾ ಎಂ, ಅನುಪಮ ಪ್ರತಿಭಾ ವೇದಿಕೆಯ ಕಾರ್ಯದರ್ಶಿ ವೈಷ್ಣವಿ ಜೆ ರಾವ್, ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿ ಮೇಘ ಡಿ ಸ್ವಾಗತಿಸಿದರು. ಪ್ರಥಮ ವರ್ಷದ ವಿದ್ಯಾರ್ಥಿನಿಯರಾದ ಜಯಶ್ರೀ ವಂದಿಸಿ, ಪಂಚಮಿ ಬಾಕಿಲಪದವು ಕಾರ್ಯಕ್ರಮ ನಿರ್ವಹಿಸಿದರು.