Recent Posts

Saturday, September 21, 2024
ದಕ್ಷಿಣ ಕನ್ನಡಸುದ್ದಿ

ಜೈನ ಧರ್ಮ ಬಳಗ ಮತ್ತು ಭಾರತೀಯ ಜೈನ್ ಮಿಲನ್ ವಲಯ 8 ಇವರ ಸಹಭಾಗಿತ್ವದೊಂದಿಗೆ ನಡೆದ ಚಿಣ್ಣರ ಜಿನಭಜನಾ ಸ್ಪರ್ಧೆಯ ಫೈನಲ್ ಕಾರ್ಯಕ್ರಮ – ಕಹಳೆ ನ್ಯೂಸ್

ಮಂಗಳೂರು: ಡಿ. 19 ಕರ್ನಾಟಕದಲ್ಲಿ ಜೈನ ಧರ್ಮ ಬಳಗ ಮತ್ತು ಭಾರತೀಯ ಜೈನ್ ಮಿಲನ್ ವಲಯ 8 ಇವರ ಸಹಭಾಗಿತ್ವದೊಂದಿಗೆ ನಡೆದ ಚಿಣ್ಣರ ಜಿನ ಭಜನೆಯ ಫೈನಲ್ ಕಾರ್ಯಕ್ರಮವು ಆನ್ಲೈನ್ ಮಾಧ್ಯಮದ ಮೂಲಕ ಬಹಳ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪರಮ ಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀ ಸೇನ ಭಟ್ಟಾರಕ ಮಹಾಸ್ವಾಮೀಜಿಯವರು ಜಿನ ಭಜನೆಯು ಒಂದು ಕುಟುಂಬದ ಸಾಮರಸ್ಯಕ್ಕೂ ನಾಂದಿಯಾಗುತ್ತದೆ ಹಾಗೂ ಮಕ್ಕಳಲ್ಲಿ ಸಂಸ್ಕಾರಕ್ಕೂ , ಧಾರ್ಮಿಕ ಪ್ರಭಾವನೆಗೂ ಪ್ರೇರಣೆಯಾಗುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಉದ್ಘಾಟನೆಗೃದ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಮಾತನಾಡುತ್ತಾ ಭಾರತೀಯ ಜೈನ್ ಮಿಲನ್ ಚಿಣ್ಣರ ಜಿನ ಭಜನಾ ಸ್ಪರ್ಧೆಯಲ್ಲಿ ಆಯೋಜಕರಾಗಿರುವುದು ಅತ್ಯಂತ ಸಂತಸ ತಂದಿದೆ ಎಂದರು. ಇನ್ನು ಮುಂದೆಯೂ ಚಿಣ್ಣರ ಜಿನ ಭಜನೆಯಲ್ಲಿ ಭಾರತೀಯ ಜೈನ್ ಮಿಲನ್ ಇನ್ನೂ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದರು.

ಜಾಹೀರಾತು

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧೆಯ ರೂವಾರಿ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಮಾತನಾಡಿ ಈಗೀಗ ಜೈನರು ಜಿನ ಭಜನೆಯತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಜಿನ ಭಜನಾ ಸ್ಪರ್ಧೆಯು ಸಣ್ಣದಾಗಿ ಪ್ರಾರಂಭಗೊಂಡು ಇದೀಗ ನಾಡಿನ ಮೂಲೆಮೂಲೆಗೆ ತಲುಪುತ್ತಿದೆ ಎಂದು ಸಂಭ್ರಮವನ್ನು ವ್ಯಕ್ತಪಡಿಸಿದರು.

ವಿಶೇಷ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ಹಾಡುಗಾರ ಶಂಕರ್ ಶಾನುಭೋಗ್ ಮಾತಾನಾಡಿ ಭಜನೆಯು ಪ್ರಸಕ್ತ ಕಾಲದಲ್ಲಿ ಉತ್ತಮ ಧಾರ್ಮಿಕ ಪರಂಪರೆಗೆ ನಾಂದಿಯಾಗಬಲ್ಲುದು ಎಂದರು.

ಮತ್ತೋರ್ವ ಖ್ಯಾತ ಗಾಯಕ ಶಶಿಧರ ಕೋಟೆ ಶುಭಾಶಯಗಳನ್ನು ಸಲ್ಲಿಸುತ್ತಾ ಭಜನೆಯಿಂದ ಭಗವಂತನೆಡೆಗೆ ನಡೆದು ಮುಕ್ತಿಯನ್ನು ಸಾಧಿಸಬಹುದು ಎಂದರು.
ಮತ್ತೋರ್ವ ಮುಖ್ಯ ಅತಿಥಿಯಾಗಿದ್ದ ಜೈನ್ ಮಿಲನ್ ಜಂಟಿ ಕಾರ್ಯದರ್ಶಿ ಎಸ್ ಮೃತ್ಯುಂಜಯ್ ಮಾತನಾಡಿ ಜಿನ ಭಜನೆಯು ನಿರಂತರವಾಗಿ ಸಾಗಿ ಎಲ್ಲರ ಮನೆಮನ ಬೆಳಗಲಿ ಎಂದರು.

ಹದಿಮೂರು ಪುಟಾಣಿಗಳು ಪೈನಲ್ ಗೆ ಪ್ರವೇಶ ಪಡೆದಿದ್ದರು. ಪುಟಾಣಿಗಳೆಲ್ಲ ಬಹಳ ಹರ್ಷೋಲ್ಲಾಸದಿಂದ ಗಾನಲಹರಿ ಹರಿಸಿದ್ದು, ಸ್ಪರ್ಧೆಯಲ್ಲಿ ಮೈಸೂರಿನ ಎ ಸಹಸ್ರ ಜೈನ್ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ದ್ವಿತೀಯ ಬಹುಮಾನವನ್ನು ಕಾರ್ಕಳ ತಾಲ್ಲೂಕಿನ ತನಯ್ ಜೈನ್ ಪಡೆದುಕೊಂಡರೆ, ತೃತೀಯ ಬಹುಮಾನವನ್ನು ಹೊರನಾಡಿನ ಮಹಾನ್ ಪಡೆದುಕೊಂಡರು. ಹಾಗೂ ಮೂರು ಸಮಾಧಾನಕರ ಬಹುಮಾನಗಳನ್ನು ಪ್ರತ್ಯೂಷಾ ಬಲ್ಲಾಳ್ ಮುಂಬೈ, ಲೀಲವರ್ಧನ್ ಉತ್ತರಕನ್ನಡ ಹಾಗೂ ಶ್ರಾವಣಿ ಗೌರಿಬಿದನೂರು ಪಡೆದುಕೊಂಡರು. ಬಹುಮಾನಗಳ ಪ್ರಾಯೋಜಕತ್ವವನ್ನು ಸುಪ್ರೀಂಕೋರ್ಟಿನ ನ್ಯಾಯವಾದಿ ಪಿ.ಪಿ ಹೆಗ್ಡೆ, ವರ್ಧಮಾನ ಶಿಕ್ಷಣ ಸಂಸ್ಥೆ ಕಾರ್ಕಳ, ಪ್ರೇಮಾ ಸುಖಾನಂದ್ ಹಾಗೂ ಯುವ ಅಜಿತ್ ಬೆಂಗಳೂರು ವಹಿಸಿದ್ದರು. ಕಾರ್ಯಕ್ರಮದ ತೀರ್ಪುಗಾರರಾಗಿ ಶ್ರೀಮತಿ ಜಯಶ್ರೀ ಹೊರನಾಡು, ಡಾ. ಸ್ನೇಹಶ್ರೀ ನಿರ್ಮಲ್ ಕುಮಾರ್ ಮೈಸೂರು, ಹಾಗೂ ಎಸ್ ಪಿ ಪದ್ಮಪ್ರಸಾದ್ ಮೈಸೂರು ಭಾಗವಹಿಸಿದ್ದರು.

ಜೈನ್ ಮಿಲನ್ ವಲಯ ಸಂಯೋಜಕರು, ಜೈನ್ ಮಿಲನ್ ಪದಾಧಿಕಾರಿಗಳು, ಕರ್ನಾಟಕದಲ್ಲಿ ಜೈನ ಧರ್ಮ ಬಳಗದ ಸದಸ್ಯರು ದೇಶವಿದೇಶಗಳ ಗಣ್ಯರು , ಮೆಂಟರ್ಸ್ ಗಳು, ಚಿಣ್ಣರ ಪೋಷಕರು ಕಾರ್ಯಕ್ರದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮ ನಿರೂಪಣೆಯನ್ನು ವಾರ್ತಾ ವಾಚಕಿ ನವಿತಾ ಜೈನ್, ನಿರಂಜನ್ ಜೈನ್ ಕುದ್ಯಾಡಿ ಹಾಗೂ ಮಹಾವೀರ್ ಪ್ರಸಾದ್ ಹೊರನಾಡು ನಿರೂಪಿಸಿದರು.
ಜೈನ್ ಮಿಲನ್ ಕಾರ್ಯದರ್ಶಿ ವಿಲಾಸ್ ಪಾಸಣ್ಣನವರ್ ಸ್ವಾಗತಿಸಿ, ಚಿತ್ತ ಜಿನೇಂದ್ರ ಪ್ರಾಸ್ತಾವನೆಗೈದು, ವಜ್ರಕುಮಾರ್ ಜೈನ್ ಧನ್ಯವಾದವಿತ್ತರು. ಮಹಾವೀರ್ ಪ್ರಸಾದ್ ಶಾಂತಿ ಮಂತ್ರ ಹಾಡಿದರು.