Recent Posts

Saturday, September 21, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದಪದವಿ ಪೂರ್ವಕಾಲೇಜಿನಲ್ಲಿ ಫೋಟೋಗ್ರಫಿ ಮತ್ತು ವರದಿಗಾರಿಕೆ ಬಗ್ಗೆ ವಿಶೇಷ ಉಪನ್ಯಾಸ- ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಮಾಧ್ಯಮ ವಿಭಾಗದ ವತಿಯಿಂದ ಸಂಯೋಜಿಸಲಾದ ಉಪನ್ಯಾಸ ಮಾಲಿಕೆಯಲ್ಲಿ ಫೋಟೋಗ್ರಫಿ ಮತ್ತು ವರದಿಗಾರಿಕೆ ಎಂಬ ವಿಷಯವಾಗಿ ಮಾತನಾಡಿದ ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರ ಹರೀಶ್ ರೈ ಪಿ. ಬಿ. ಯವರು ವರದಿಗಾರಿಕೆ ಒಂದು ಕಲೆ. ಇದು ಸ್ವಯಂಚಾಲಿತವಾಗಿ ಒಬ್ಬರ ಭಾಷಾಕೌಶಲ್ಯವನ್ನು ಸುಧಾರಿಸುತ್ತದೆ. ವರದಿ ಬರೆಯುವುದು ವಿದ್ಯಾರ್ಥಿಗಳಲ್ಲಿ ಹವ್ಯಾಸವಾಗಿ ಮಾರ್ಪಟ್ಟರೆ ಭವಿಷ್ಯದಲ್ಲಿ ಅವರಿಗೆ ಬಹಳ ಉಪಯೋಗವಿದೆ. ವರದಿಗಾರರು ನೇರವಂತಿಕೆ, ವಸ್ತುನಿಷ್ಠ ಮತ್ತು ಸತ್ಯನಿಷ್ಠ ವರದಿಗಳನ್ನು ನೀಡುತ್ತಾ, ಮಾಧ್ಯಮದ ಮೌಲ್ಯಗಳನ್ನು ಸದಾಕಾಲ ಎತ್ತಿಹಿಡಿಯಬೇಕು.

ಸಮಾಜಕ್ಕೆ ಸಹಕಾರಿಯಾಗುವಂತಹ ಸಂಗತಿಗಳನ್ನು ಪ್ರಬಲ ಮಾಧ್ಯಮವಾದ ಪತ್ರಿಕೆ ಅಥವಾ ನಿಯತಕಾಲಿಕೆಗಳ ಮೂಲಕ ಸಹೃದಯರಿಗೆ ತಲುಪಿಸುವ ಕೆಲಸ ವರದಿಗಾರಿಕೆಯಿಂದಾಗುತ್ತದೆ. ಆಧುನಿಕ ಪ್ರಪಂಚದ ಪ್ರಚಲಿತ ವಿದ್ಯಾಮಾನಗಳ, ಬದಲಾಗುತ್ತಿರುವ ಜನಜೀವನದ ಬಗ್ಗೆ ತಿಳಿಸುವ ಸಂವಹನದ ಭಾಗವಾಗಿದೆ. ಓದುಗರಿಗೆ ಬೇಕಾಗುವ ಧಾರ್ಮಿಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಮತ್ತುರಾಜಕೀಯ ವಿಷಯಗಳನ್ನು ಸಮಗ್ರವಾಗಿ ಒದಗಿಸಿಕೊಡುತ್ತದೆ.ಇಂದಿನ ಯಾಂತ್ರಿಕ ಬದುಕಿನಲ್ಲಿ ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಆಸಕ್ತಿ ಕುಂಠಿತವಾಗಿರುವುದಕ್ಕೆ ಅನೇಕ ಕಾರಣಗಳಿವೆ. ಆದರೂ ನಿಖರವಾದ ಮಾಹಿತಿ ಅವರಿಗೆ ಲಭ್ಯವಾದಲ್ಲಿ ಮುಂದೆ ಇನ್ನಷ್ಟು ಅತ್ಯುತ್ತಮ ವರದಿಗಾರರು ಹುಟ್ಟಿಕೊಳ್ಳಬಹುದು. ವರದಿಯ ಮೂಲಕ ಸುದ್ದಿ ಪ್ರಸಾರದ ಜೊತೆಗೆ ಸುದ್ದಿಗಳ ವಿಶ್ಲೇಷಣೆಗೂ ಕೂಡ ಒತ್ತು ನೀಡಲಾಗುತ್ತಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಪತ್ರಿಕಾ ವರದಿಯನ್ನು ತಯಾರಿಸಲು ಬೇಕಾದ ಸರಳ ಮಾರ್ಗವನ್ನು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿವರಿಸಿದರು. ಇದರ ಜೊತೆಗೆ ಛಾಯಾಚಿತ್ರದ ಮಹತ್ವದ ಕುರಿತು ವಿವರಿಸುತ್ತಾ ಫೋಟೋಗ್ರಪಿ ಎಂಬುದು ಪತ್ರಿಕೋದ್ಯಮದ ಅವಿಭಾಜ್ಯ ಅಂಗ. ಇದು ಸುದ್ದಿಯನ್ನು ಅಧಿಕೃತಗಳಿಸುತ್ತದೆ. ಸುದ್ದಿಯನ್ನು ದೊಡ್ಡದಾಗಿ ಪ್ರಕಟಿಸುವಲ್ಲಿ ಛಾಯಾಚಿತ್ರದ ಪಾತ್ರ ಪ್ರಮುಖವಾಗಿರುತ್ತದೆ. ನಾವು ತೆಗೆದ ಫೋಟೋ ಇಡೀ ಕಾರ್ಯಕ್ರಮದ ವರದಿಯನ್ನು ನೀಡುವಂತಿರಬೇಕು. ಫೋಟೋಗ್ರಫಿ ಮತ್ತು ವರದಿಗಾರಿಕೆ ಒಂದಕ್ಕೊ0ದು ಪೂರಕವಾದದ್ದು, ಅದು ಒಂದೇತೆರನಾಗಿ ಹೋಗಬೇಕು ಎಂದು ಹೇಳಿದರು. ಫೋಟೋ ತೆಗೆಯುವಾಗ ಎದುರಾಗುವ ಸವಾಲುಗಳ ಬಗ್ಗೆ, ಶಿಕ್ಷಣ ಸಂಸ್ಥೆಗಳಲ್ಲಿ ಅದರ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಬಳಿಕ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದ ಜೊತೆ ಜೊತೆಯಲ್ಲಿ, ಸಾಮಾಜಿಕ ಬೆಳವಣಿಗೆ, ವ್ಯಕ್ತಿತ್ವ ವಿಕಸನದ ಜೀವನಕ್ಕೆ ಸ್ಪಂದಿಸುವ ಈ ವರದಿಗಾರಿಕೆಯ ತಂತ್ರವನ್ನು ಅಳವಡಿಸಿಕೊಂಡಲ್ಲಿ ತನ್ಮೂಲಕ ವ್ಯಕ್ತಿಯ ಚಿಂತನೆ, ಬದುಕು ಎಲ್ಲವನ್ನೂ ಹಸನಾಗಿಸುವಲ್ಲಿ ಸಹಕಾರಿಯಾಗಬಹುದು ಎಂದು ಹೇಳಿದರು.

ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಸುಧೀರ್ ಎ. ಎಸ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯ ಸಚಿನ್ ಶೆಣೈ, ಕಾಲೇಜಿನ ಬೋಧಕ- ಬೊಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ದೀಕ್ಷಾ, ದೇವಿಕಾ ಮತ್ತು ಸನ್ಮಯ ಪ್ರಾರ್ಥನೆಯನ್ನು ಹಾಡಿದರು. ವಿದ್ಯಾರ್ಥಿನಿಯರಾದ ದಿಶಾ ಎಂ ಅತಿಥಿಗಳನ್ನು ಪರಿಚಯಿಸಿ, ವರ್ಷಾ ಸ್ವಾಗತಿಸಿದರು. ದೇವಯಾನಿ ವಂದಿಸಿ, ಈಶ್ವರಿ ಕಾರ್ಯಕ್ರಮವನ್ನು ನಿರೂಪಿಸಿದರು.