Recent Posts

Saturday, September 21, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವ್ಯಕ್ತಿತ್ವ ಮತ್ತು ಕೌಶಲ್ಯ ಅಭಿವೃದ್ಧಿ ಬಗ್ಗೆ ಮಾಹಿತಿ ಕಾರ್ಯಗಾರ- ಕಹಳೆ ನ್ಯೂಸ್

ಪುತ್ತೂರು: ಬದಲಾವಣೆ ಎಂಬುದು ಪ್ರಕೃತಿಯ ನಿಯಮ. ಕಾಲ ಬದಲಾದಂತೆ ನಮ್ಮ ಜೀವನದ ಸ್ವರೂಪವೂ ಬದಲಾಗುತ್ತದೆ. ಸೋಲನ್ನು ಯಾವ ರೀತಿ ಪರಿಗಣಿಸುತ್ತೇವೆಯೋ ಅದರ ಮೇಲೆ ನಮ್ಮ ಜೀವನವೂ ನಿಂತಿರುತ್ತದೆ. ಸೋಲನ್ನು ಸವಾಲಾಗಿ ಸ್ವೀಕರಿಸಿದರೆ ಪ್ರತಿಯೊಬ್ಬರ ಜೀವನದಲ್ಲೂ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ವಿವೇಕಾನಂದ ಪದವಿ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಹಾಗೂ ಆಕಾಂಕ್ಷ ಚಾರೀಟೇಬಲ್ ಟ್ರಸ್ಟ್‍ನ ಸಂಸ್ಥಾಪಕ ಡಾ. ಶ್ರೀಶ ಭಟ್ ಹೇಳಿದರು. ವಿವೇಕಾನಂದ ಪದವಿ ಪೂರ್ವಕಾಲೇಜಿನಲ್ಲಿ ಕಲಾ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ನಡೆದ ವ್ಯಕ್ತಿತ್ವ ಮತ್ತುಕೌಶಲ್ಯ ಅಭಿವೃದ್ಧಿ ಬಗ್ಗೆ ಮಾಹಿತಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಜೀವನದಲ್ಲಿ ಎಂದಿಗೂ ದೊಡ್ಡ ಗುರಿ ಹೊಂದಿರಬೇಕು. ಸಣ್ಣ ಗುರಿ ಸಾಧನೆಯಿಂದ ಅಲ್ಪ ಮಟ್ಟದ ಯಶಸ್ಸು ನಿರೀಕ್ಷಿಸಬಹುದು. ಆದರೆ, ದೊಡ್ಡ ಗುರಿಯೊಂದಿಗೆ ಅದಕ್ಕೆ ತಕ್ಕಂತೆ ಶ್ರಮ ಪಟ್ಟರೆ ಸಾಧಕರಾಗಲು ಸಾಧ್ಯ. ಒಬ್ಬ ತಪಸ್ವಿ ತನ್ನ ಗುರಿ ಮುಟ್ಟುವವರೆಗೂ ಏಕಾಗ್ರತೆ, ಶ್ರದ್ಧೆಯಿಂದ ಹೇಗೆ ತಪಸ್ಸು ಮಾಡುತ್ತಾನೋ ಅದೇ ರೀತಿಯಲ್ಲಿ ಸಾಧನೆ ಮಾಡುವ ವ್ಯಕ್ತಿಯೂ ತನ್ನ ಗುರಿಮುಟ್ಟಲು ಕಷ್ಟಪಡಬೇಕಾಗುತ್ತದೆ. ಕಷ್ಟವಿಲ್ಲದೇ ಸುಲಭವಾಗಿ ಸಾಧನೆ ಮಾಡುತ್ತೇನೆ ಎಂದರೆ ಅದು ಅಪಹಾಸ್ಯದ ಮಾತಾಗುತ್ತದೆ. ಸತತವಾಗಿ ಹಲವು ವರ್ಷಗಳು ಕಷ್ಟಪಟ್ಟರೆ ಒಂದು ದಿನ ಅದರ ಫಲ ನಿರೀಕ್ಷಿಸಬಹುದು. ಜೀವನದಲ್ಲಿ ಸ್ವಯಂ ನಿಯಂತ್ರಣ ಎಂಬುದು ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಮನಸ್ಸು ಹುಚ್ಚು ಕುದುರೆಯಿದ್ದಂತೆ. ಅದಕ್ಕೆ ಲಗಾಮು ಹಾಕಿ ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ಅದು ಸಿಕ್ಕ-ಸಿಕ್ಕಲ್ಲಿ ಓಡುತ್ತದೆ. ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಶಿಸ್ತು, ಸಮತೋಲನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಪ್ರತಿಯೊಬ್ಬರಿಗೂ ದಿನಕ್ಕೆ 24 ಗಂಟೆ ಸಮಯವಿರುತ್ತದೆ. ಆ ಸಮಯವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯ. ಹೆಚ್ಚಿನ ಸಮಯವನ್ನು ಸಾಧನೆಗೆ ಮೀಸಲಿಟ್ಟರೆ ನಮ್ಮ ಕನಸನ್ನು ಬೇಗ ನನಸು ಮಾಡಿಕೊಳ್ಳಬಹುದು. ದೇವರು ನಮಗೆ ಕೊಟ್ಟಿರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಬದುಕಿನಲ್ಲಿ ಸಾರ್ಥಕತೆ ಕಾಣಬಹುದು. ಇಂದಿನ ಯುವಪೀಳಿಗೆಗೆ ಜಗತ್ತಿನಲ್ಲಿ ಒಂದಿಲ್ಲೊಂದು ಅವಕಾಶಗಳು ಇದ್ದೇ ಇವೆ. ಆದರೆ, ಅದನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಮೇಲೆ ಜೀವನದ ಯಶಸ್ಸು ಅವಲಂಬಿತವಾಗಿರುತ್ತದೆ. ಬದುಕನ್ನು ಒಂದೇ ಕೆಲಸಕ್ಕೆ ಸೀಮಿತಗೊಳಿಸದೆ ಹೆಚ್ಚೆಚ್ಚು ಅವಕಾಶಗಳನ್ನು ಸದ್ಬಳಕೆ ಮಾಡುವತ್ತ ಗಮನಹರಿಸಬೇಕು. ವಿವಿಧ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ಸದಾ ತೊಡಗಿಸಿಕೊಳ್ಳಬೇಕು. ಅದರಿಂದ ಹೊಸ ಹೊಸ ಚಿಂತನೆಗಳನ್ನು ಕಾಣಲು ಸಾಧ್ಯ ಎಂದರು. ಕಾಲೇಜಿನ ಪ್ರಾಚಾರ್ಯ ಮಹೇಶ ನಿಟಿಲಾಪುರ ಮಾತನಾಡಿ ಪ್ರಪಂಚ ಬಹಳಷ್ಟು ವಿಶಾಲವಾಗಿದ್ದು, ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ಆ ಅವಕಾಶಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡರೆ ಜೀವನದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಯಶಸ್ಸು ಸಿಗುತ್ತದೆ. ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಸೋಲು ಇದ್ದೇ ಇರುತ್ತದೆ. ಸೋಲು ಜೀವನದಲ್ಲಿ ಸಾಕಷ್ಟು ಪಾಠಗಳನ್ನು ಕಲಿಸುತ್ತದೆ. ಸೋಲನ್ನೇ ಸವಾಲಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ಸಿನ ತುತ್ತತುದಿಗೆ ಹೋಗಬಹುದು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಕಲಾ ವಿಭಾಗದ ಮುಖ್ಯಸ್ಥೆ ಯಶವಂತಿ ಡಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವೈಷ್ಣವಿ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕಿ ಮೊನಿಷಾ ಸ್ವಾಗತಿಸಿ ವಿದ್ಯಾರ್ಥಿನಿ ಶ್ರಾವ್ಯ ವಂದಿಸಿದರು.