Friday, September 20, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಮಹಾವಿದ್ಯಾಲಯದಲ್ಲಿ ‘ರಾಷ್ಟ್ರೀಯ ಏಕೀಕರಣದ ಪ್ರಸ್ತುತತೆ’ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ಕೇವಲ ಪಠ್ಯಪುಸ್ತಕಗಳ ಕಲಿಕೆಯು ಇತಿಹಾಸವನ್ನು ಕಲಿಸಲು ಸಾಧ್ಯವಿಲ್ಲ. ಚರಿತ್ರೆಯನ್ನು ಅವಲೋಕಿಸಿ ಅಧ್ಯಯನವನ್ನು ಮಾಡುವುದರ ಮೂಲಕ ನಿಜವಾದ ಚರಿತ್ರೆಯನ್ನು ತಿಳಿಯಬಹುದು. ನಮ್ಮ ಊರಿನ ಇತಿಹಾಸ ಅಥವಾ ಕುಟುಂಬದ ಚರಿತ್ರೆಯನ್ನು ಮೊದಲು ತಿಳಿದುಕೊಂಡು ನಂತರದಲ್ಲಿ ದೇಶದ ಚರಿತ್ರೆಯನ್ನು ತಿಳಿಯಲು ಪ್ರಯತ್ನಪಡಬೇಕು ಎಂದು ಮಂಗಳೂರಿನ ಡಾ. ಪಿ ದಯಾನಂದ ಪೈ, ಪಿ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ನವೀನ್ ಕೊಣಾಜೆ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಇತಿಹಾಸ ವಿಭಾಗ, ಹೆರಿಟೇಜ್ ಕ್ಲಬ್ ಮತ್ತು ಐಕ್ಯೂಎಸಿ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ‘ರಾಷ್ಟ್ರೀಯ ಏಕೀಕರಣದ ಪ್ರಸ್ತುತತೆ’ ಎಂಬ ವಿಷಯದ ಕುರಿತಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸೋಮವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ವ್ಯಕ್ತಿಯ ನಿರ್ಮಾಣ ದೇಶದ ನಿರ್ಮಾಣ. ಆ ನಿಟ್ಟಿನಲ್ಲಿ ಯುವ ಜನತೆಯನ್ನು ರಾಷ್ಟ್ರೀಯತೆಯಲ್ಲಿ ಕೊಂಡೊಯ್ಯಬೇಕಾಗಿದೆ. ಸಾರ್ವಜನಿಕರಲ್ಲಿ ಜಾತಿರಹಿತ, ಕೋಮು ರಹಿತವಾಗಿದ್ದರೆ ರಾಷ್ಟ್ರೀಯ ಭಾವೈಕ್ಯತೆ ಬೆಳೆಯುತ್ತದೆ. ಅಂದಿನ ಗುರುಕುಲ ಶಿಕ್ಷಣದ ರೀತಿಯಲ್ಲೇ ಇಂದಿನ ಶಿಕ್ಷಣವೂ ಇರುತ್ತಿದ್ದರೆ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಹಾಗೆ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತಿತ್ತು. ಸಂಸ್ಕøತಿ ಆಧಾರಿತ ಶಿಕ್ಷಣವನ್ನು ಬೆಳೆಸುವುದರ ಮೂಲಕ ನಮ್ಮ ಸಂಸ್ಕøತಿಯನ್ನು ಉಳಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ರಾಷ್ಟ್ರೀಯ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದಕ್ಕಾಗಿ ಕೆಲವೊಂದು ಶಾಲೆಗಳಿಗೆ ತೆರಳುವ ಮೂಲಕ ಅಲ್ಲಿ ರಾಷ್ಟ್ರೀಯ ಚಿಂತನೆಯ ಕುರಿತಾದ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ರಾಷ್ಟ್ರಪ್ರೇಮವನ್ನು ಮೂಡಿಸುವುದು ಇಂದಿನ ಸಮಾಜದಲ್ಲಿ ಬಹಳಷ್ಟು ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್, ಡಾ. ಪ್ರಮೋದ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅನಿತಾ ಕಾಮತ್ ಉಪನ್ಯಾಸಕಿ ಕವಿತಾ ಉಪಸ್ಥಿತರಿದ್ದರು.

ಬಿಎ ವಿದ್ಯಾರ್ಥಿಗಳಾದ ಸಾಯಿಕೃಪ ಮತ್ತು ಸುಲಕ್ಷಣ ಪ್ರಾರ್ಥಿಸಿ, ಶ್ರೀಜನ್ಯ ಸ್ವಾಗತಿಸಿ ಸುಶ್ಮಿತ ವಂದಿಸಿದರು. ರುಚಿತಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.