Friday, September 20, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಹಿಂದೂ ಜಾಗರಣ ವೇದಿಕೆ ನಡೆಸಿದ ಬೃಹತ್ ಹೋರಾಟಕ್ಕೆ ಜಯ; ಶ್ರೀ ಕಾರಿಂಜೇಶ್ವರ ಸನ್ನಿದಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದ್ದ ಎಲ್ಲಾ ಕೋರೆಗಳು ಸ್ಥಗಿತ ; ಅಧಿಕೃತ ಮಾಹಿತಿ ನೀಡಿದ ಇಲಾಖೆ – ಕಹಳೆ ನ್ಯೂಸ್

ಬಂಟ್ವಾಳ : ಕಾರಿಂಜ ಶ್ರೀ ಕಾರಿಂಜೇಶ್ವರ ಸನ್ನಿದಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದ್ದ ಎಲ್ಲಾ ಕೋರೆಗಳು ಸ್ಥಗಿತಗೊಂಡಿದೆ ಎಂದು ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಕೆಲ ಸಮಯಗಳಿಂದ ಬಾರೀ ಸುದ್ದಿಯಾಗಿದ್ದ ಕಾರಿಂಜದ ಅಕ್ರಮ ಕಲ್ಲು ಗಣಿಗಾರಿಕೆಗೆ ಬ್ರೇಕ್ ಬಿದ್ದಿದೆ. ಈ ಭಾಗದಲ್ಲಿ ಮೂರು ಜನರಿಗೆ ಸೇರಿದ ಕಪ್ಪು ಕಲ್ಲಿನ ಕೋರೆ ಕಾರ್ಯಚರಿಸುತ್ತಿದ್ದು, ಪ್ರಸ್ತುತ ಅದನ್ನು ಕೂಡ ನಿಲ್ಲಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಿಂಗಳ ಹಿಂದೆ ವ್ಯಕ್ತಿಯೋರ್ವರು ಪರವಾನಿಗೆ ರಹಿತವಾಗಿ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಸ್ಥಳಕ್ಕೆ ತೆರಳಿದ್ದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್ ಅವರು ಗಣಿಗಾರಿಕೆಗೆ ಬಳಸಲಾಗಿದ್ದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡು ಕಾನೂನು ಕ್ರಮಕೈಗೊಂಡಿದ್ದರು.
ಫೆ.೪ ರಂದು ಮತ್ತೆ ಕಾರಿಂಜ ದಲ್ಲಿ ಕ್ರಶರ್ ಸದ್ದು ಮಾಡುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ ಅವರ ಆದೇಶದಂತೆ ಪರಿಸರ ಮತ್ತು ನಿಯಂತ್ರಣ ಇಲಾಖೆ, ಗಣಿ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿ , ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಕೆಲಸಗಳು ನಡೆಯದಂತೆ ಸೂಕ್ತ ವಾದ ಕ್ರಮ ಕೈಗೊಂಡಿದ್ದಾರೆ.

ಜಾಹೀರಾತು

ಈ ಸಂದರ್ಭದಲ್ಲಿ ಪರಿಸರ ಮತ್ತುಮಾಲಿನ್ಯ ನಿಯಂತ್ರಣ ಇಲಾಖಾ ಅಧಿಕಾರಿ ಡಾ! ಮಹೇಶ್ವರಿ, ಗಣಿ ಇಲಾಖಾ ಅಧಿಕಾರಿ ಮಹಾದೇಶ್ವರ್, ತಹಶೀಲ್ದಾರ್ ರಶ್ಮಿ. ಎಸ್.ಆರ್, ಗ್ರಾಮ ಕರಣಿಕೆ ಆಶಾ ಮೆಹಂದಲೆ, ಸಹಾಯಕ ಸಂತೋಷ್ , ಅರಣ್ಯ ಇಲಾಖಾ ಅಧಿಕಾರಿ ರಾಜೇಶ್ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಬಾಹಿರ ಗಣಿಗಾರಿಕೆಯ ವಿರುದ್ಧ ಕ್ರಮಕೈಗೊಂಡಿದ್ದಾರೆ.

ಕಾರಿAಜದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯ ಬಗ್ಗೆ ಇಲಾಖೆಯ ವತಿಯಿಂದ ಡಿ.ಜಿ.ಪಿ.ಎಸ್. ಸರ್ವೇ ಕಾರ್ಯ ನಡೆಸಲಾಗಿದು, ಅದರ ರಿಪೋರ್ಟ್ ಗಣಿ ಇಲಾಖೆಗೆ ತಲುಪಿದೆ. ಈ ಮಾಹಿತಿ ಆಧಾರದ ಮೇಲೆ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಮಾಲೀಕರಿಗೆ ನೋಟೀಸ್ ಜಾರಿ ಮಾಡುವ ಸಾಧ್ಯತೆಗಳು ಇವೆ.

೨೦೧೫ ರಲ್ಲಿ ಕಾರಿಂಜ ಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡಿ , ಕಂದಾಯ ಇಲಾಖೆ ನೀಡಿದ್ದ ಅನುಮತಿ ಪತ್ರವನ್ನು ಪರಿಶೀಲನೆ ನಡೆಸಿದಾಗ ಗಣಿಗಾರಿಕೆಗೆ ಸಂಬAಧಿಸಿದ ಜಮೀನು ಗೋಮಾಳವಾಗಿರುವುದರಿಂದ ಪ್ರಸ್ತುತ ತಹಶೀಲ್ದಾರ್ ಆಗಿರುವ ರಶ್ಮಿ ಎಸ್.ಆರ್ ಅವರು ಎನ್.ಓ.ಸಿ.ಯನ್ನು ವಾಪಸು ತೆಗೆದುಕೊಂಡಿದ್ದಾರೆ. ಕಂದಾಯ ಇಲಾಖೆ ಎನ್.ಓ.ಸಿ.ವಾಪಸು ಪಡೆದುಕೊಂಡ ಹಿನ್ನೆಲೆಯಲ್ಲಿ ಗಣಿ ಇಲಾಖೆ ಕೋರೆಯವರಿಗೆ ನೋಟೀಸ್ ನೀಡಿದ್ದಾರೆ.

ಕಾರಿಂಜದಲ್ಲಿರುವ ಕೋರೆಗಳ ಅಕ್ರಮಗಳ ಕುರಿತು ಸಂಪೂರ್ಣ ತನಿಖೆಗಾಗಿ ಅವರು ವಿವರಣೆ ನೀಡುವವರೆಗೆ ಯಾವುದೇ ರೀತಿಯ ಕೋರೆಗಳನ್ನು ನಡೆಸದಂತೆ ಸೂಚನೆ ನೀಡಲಾಗಿದೆ. ಶುಕ್ರವಾರ ಒಂದು ಕೋರೆಯಲ್ಲಿ ಕೆಲಸ ನಡೆಯುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಹಾಗೂ ಹಿರಿಯ ಭೂವಿಜ್ಞಾನಿಯನ್ನು ಸ್ಥಳ ಮಹಜರು ನಡೆಸುವುದಕ್ಕಾಗಿ ಕಳುಹಿಸಿಕೊಟ್ಟಿದ್ದು, ಅವರ ವರದಿಯ ಆಧಾರದಲ್ಲಿ ಕ್ರಮತೆಗೆದಿಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ತಿಳಿಸಿದ್ದಾರೆ.

ಗಣಿಗಾರಿಕೆಯಿಂದ ಕ್ಷೇತ್ರ ಕ್ಕೆ ಹಾನಿಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ದೇವಾಲಯ ಕ್ಕೆ ಬೇಟಿ ನೀಡಿ ಈ ಬಗ್ಗೆ ಸೂಕ್ತ ಕಾನೂನು ಕ್ರಮಕ್ಕೆ ಇಲಾಖೆಗೆ ಸೂಚಿಸಿದ್ದರು. ಇಲ್ಲಿನ ಗಣಿಗಾರಿಕೆಯಿಂದ ದೇವಳದ ಗರ್ಭಗುಡಿಗೆ ಹಾನಿಯಾಗಿದೆ, ಭವಿಷ್ಯದಲ್ಲಿ ದೇವಾಲಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ನಿಟ್ಟಿನಲ್ಲಿ ಕೋರೆ ಯನ್ನು ನಿಲ್ಲಿಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಇತ್ತೀಚೆಗೆ ಬೃಹತ್ ಹೋರಾಟ ನಡೆಸಿತ್ತು.

ಪ್ರಸ್ತುತ ಎಲ್ಲಾ ಕೋರೆಗಳು ಬಂದ್ ಆಗಿರುವುದರಿಂದ ಗೊಂದಲ ಗಳಿಗೆ ಶಾಶ್ವತ ಪರಿಹಾರ ಕಂಡಿದೆ.