Friday, September 20, 2024
ರಾಜಕೀಯ

Exclusive : ಶಿವನೇ ಸಿದ್ದಾರೂಢ: ಲಿಂಗಾಯತ ಪ್ರತ್ಯೇಕ ಧರ್ಮನೂ ಆಗಿಲ್ಲ, ಎಂ ಬಿ ಪಾಟೀಲ್ರು ಸಚಿವರೂ ಆಗಿಲ್ಲ – ಕಹಳೆ ನ್ಯೂಸ್

ರಾಜಕೀಯವನ್ನು ಎಷ್ಟೇ ಕರಗತ ಮಾಡಿಕೊಂಡಿರಲಿ, ಎಂತದ್ದೇ ಪ್ರಬುದ್ದ ರಾಜಕಾರಣಿಯೇ ಆಗಿರಲಿ, ಧರ್ಮ ಜಾತಿ ವಿಚಾರದಂತಹ ಸೂಕ್ಷ್ಮ ವಿಚಾರದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾದರೆ, ಭಾರೀ ಲೆಕ್ಕಾಚಾರದೊಂದಿಗೆ ಹೆಜ್ಜೆಯಿಡಬೇಕಾಗುತ್ತದೆ ಎನ್ನುವುದಕ್ಕೆ ‘ಲಿಂಗಾಯ ಪ್ರತ್ಯೇಕ ಧರ್ಮ’ ಎನ್ನುವ ರಾಜಕೀಯ ನಿರ್ಧಾರ ಒಂದು ಉದಾಹರಣೆ.

ರಾಜ್ಯದ ಅತ್ಯಂತ ಪ್ರಭಾವಿ ಜಾತಿಯಲ್ಲಿ ಒಂದಾದ ಲಿಂಗಾಯತ ಧರ್ಮವನ್ನು ಪ್ರತ್ಯೇಕಿಸಲು ಮುಂದಾದ ಹಿಂದಿನ ಸಿದ್ದರಾಮಯ್ಯನವರ ಸರಕಾರಕ್ಕೆ ಜನಾದೇಶ ಒಲಿಯಲಿಲ್ಲ. ಬಿಜೆಪಿಯನ್ನು ದೂರವಿಡಬೇಕು ಎನ್ನುವ ಏಕೈಕ ಕಾರಣಕ್ಕಾಗಿ ಕಾಂಗ್ರೆಸ್ಸಿಗೆ ಒಲಿದದ್ದು ಜೆಡಿಎಸ್.

ಜಾಹೀರಾತು
ಜಾಹೀರಾತು
ಜಾಹೀರಾತು

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಆ ಸಮುದಾಯದಲ್ಲಿ ಒಟ್ಟಾರೆಯಾಗಿ ಅಸಮಾಧಾನವಿತ್ತು, ಪೀಠಾಧಿಪತಿಗಳ ವಿರೋಧವೂ ಇತ್ತು. ಅವೆಲ್ಲವನ್ನೂ ಕಡೆಗಣಿಸಿ, ಸಮುದಾಯದ ಸ್ವಾಮೀಜಿಗಳ ಮಾತಿಗೆ ಬೆಲೆಕೊಡದೇ, ತಾನು ನಡೆದಿದ್ದೇ ದಾರಿ ಎನ್ನುವಂತೆ ಪ್ರತ್ಯೇಕ ಧರ್ಮದ ಹೋರಾಟದ ನೇತೃತ್ವ ವಹಿಸಿಕೊಂಡಿದ್ದ ಎಂ ಬಿ ಪಾಟೀಲರ ಇಂದಿನ ಸ್ಥಿತಿ ನೋಡಿ…

ಜಾಹೀರಾತು

ಸಂಪುಟದಲ್ಲಿ ಸ್ಥಾನ ಗಿಟ್ಟಿಸದ ಎಂಬಿ ಪಾಟೀಲ ರಾಜೀನಾಮೆ?

ಕಳೆದ ಸರಕಾರದಲ್ಲಿ ಅತ್ಯಂತ ಪ್ರಭಾವಿ ಸಚಿವನಾಗಿ ಜೊತೆಗೆ, ಲಿಂಗಾಯತ ಹೋರಾಟ ಪ್ರಮುಖ ವಿಷಯವಾಗಿ ಹೊರಹೊಮ್ಮಿದ ನಂತರ, ಹೋರಾಟದ ಸೂತ್ರದಾರರಾಗಿದ್ದ ಎಂ ಬಿ ಪಾಟೀಲರಂತಹ ಪ್ರಮುಖ ಮುಖಂಡರಿಗೆ, ಕಾಂಗ್ರೆಸ್ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಣೆಹಾಕಲಿಲ್ಲ. ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ತೆಗೆದುಕೊಂಡ ಅತ್ಯಂತ ಮಹತ್ವದ ನಿರ್ಧಾರಗಳಲ್ಲಿ ಇದೊಂದಾಗಿತ್ತು.

ಕ್ಯಾಬಿನೆಟ್ ಬಸ್ ಮಿಸ್ ಮಾಡಿಕೊಂಡ ಪ್ರಮುಖ ಕಾಂಗ್ರೆಸ್ ಶಾಸಕರು

ಸಚಿವ ಸ್ಥಾನ ಸಿಗುವುದು ಡೌಟು ಎಂದು ಅರಿತ ಎಂ ಬಿ ಪಾಟೀಲ್ರು, ಇನ್ಮುಂದೆ ಕಾಂಗ್ರೆಸ್ ನನಗೆ ಯಾವುದೇ ಹುದ್ದೆ ನೀಡಿದರೂ ಸ್ವೀಕರಿಸುವುದಿಲ್ಲ ಎಂದು ಯಕ್ಷಗಾನ ಪಾತ್ರಧಾರಿಯ ರೀತಿಯಲ್ಲಿ ಸಿಟ್ಟಿನಿಂದ ಹುಬ್ಬನ್ನು ಇತ್ತಿಂದ ಅತ್ತ ಹೊರಳಾಡಿಸಿ, ಕೋಪವನ್ನು ಹೊರಹಾಕಿದ್ರು.. ಪಾಟೀಲ್ರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಕಾರಣಗಳು ಹಲವು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವ ಅತ್ಯಂತ ಆತ್ಮವಿಶ್ವಾಸದಿಂದಿದ್ದ ಸಿದ್ದರಾಮಯ್ಯನವರಿಗೆ ಪ್ರಮುಖವಾಗಿ ಹಿನ್ನಡೆ ಕೊಟ್ಟಿದ್ದು

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ :

ತಮ್ಮ ಸಚಿವ ಸಂಪುಟದಲ್ಲೇ ವಿರೋಧವಿದ್ದರೂ, ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ನೀಡಿದ್ದರೂ, ಸಿದ್ದರಾಮಯ್ಯ ಸರಕಾರ ‘ಪ್ರತ್ಯೇಕ ಧರ್ಮ’ ಎಂದು ಶಿಫಾರಸು ಮಾಡಿ ಕೇಂದ್ರಕ್ಕೆ ಅನುಮೋದನೆಗೆ ಕಳುಹಿಸಿದ್ದರು. ಸಿದ್ದರಾಮಯ್ಯನವರ ಈ ನಿರ್ಧಾರಕ್ಕೆ ಪ್ರಮುಖವಾಗಿ ಎಂ ಬಿ ಪಾಟೀಲರ ಒತ್ತಡ ಮತ್ತು ಪ್ರತ್ಯೇಕ ಧರ್ಮದಿಂದ ಪಕ್ಷಕ್ಕಾಗುವ ಲಾಭದ ಬಗ್ಗೆ ಪಾಟೀಲರು ನೀಡಿದ ತಪ್ಪು ಲೆಕ್ಕಾಚಾರವೇ ಕಾರಣ ಎನ್ನುವ ಮಾತಿದೆ. ಈ ಕಾರಣದಿಂದ ಎಂ ಬಿ ಪಾಟೀಲರನ್ನು ಸಂಪುಟದಿಂದ ಹೊರಗಿಡುವ ನಿರ್ಧಾರಕ್ಕೆ ಹೈಕಮಾಂಡ್ ಬಂದಿರಬಹುದು.

ವೀರಶೈವ-ಲಿಂಗಾಯತ ಮತಬ್ಯಾಂಕ್ ಅತ್ಯಂತ ನಿರ್ಣಾಯಕ :

ಮುಂಬೈ, ಹೈದರಾಬಾದ್ ಮತ್ತು ಮಧ್ಯ ಕರ್ನಾಟಕದ ಭಾಗದಲ್ಲಿ ವೀರಶೈವ-ಲಿಂಗಾಯತ ಮತಬ್ಯಾಂಕ್ ಅತ್ಯಂತ ನಿರ್ಣಾಯಕ. ಈ ಭಾಗದ ಸುಮಾರು 125 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ಶಕ್ತವಾಗಿದ್ದು ಕೇವಲ 37-38 ಕ್ಷೇತ್ರವನ್ನು. ಇದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯನ್ನು ಅರಿತು ಎಂ ಬಿ ಪಾಟೀಲರಿಗೆ ಸಚಿವ ಸ್ಥಾನ ನಿರಾಕರಿಸಿ, ಜನರಿಗೆ ಸಂದೇಶ ರವಾನಿಸುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿರಬಹುದು. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಪರವಿರೋಧವಾಗಿ ಮಂಚೂಣಿಯಲ್ಲಿದ್ದ ಈಶ್ವರ ಖಂಡ್ರೆ ಮತ್ತು ಶಾಮನೂರು ಶಿವಶಂಕರಪ್ಪನವರಿಗೂ ಸಚಿವ ಸ್ಥಾನ ಧಕ್ಕಲಿಲ್ಲ.

ಪಾಟೀಲರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಉದ್ದೇಶ :

ಇನ್ನೊಂದು ಆಯಾಮದ ಪ್ರಕಾರ, ಕಳೆದ ಸಿದ್ದರಾಮಯ್ಯನವರ ಸರಕಾರದಲ್ಲಿ ಚುರುಕಿನಿಂದ ಕೆಲಸ ಮಾಡಿದ ಕ್ಯಾಬಿನೆಟ್ ಮಂತ್ರಿಗಳಲ್ಲಿ ಎಂ ಬಿ ಪಾಟೀಲ್ ಕೂಡಾ ಒಬ್ಬರು. ಸಾರ್ವತ್ರಿಕ ಚುನಾವಣೆಗೆ ಇನ್ನೇನು ಒಂದು ವರ್ಷ ಬಾಕಿಯಿರುವ ಈ ಹೊತ್ತಿನಲ್ಲಿ ಪಾಟೀಲರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಉದ್ದೇಶವನ್ನೂ ಕಾಂಗ್ರೆಸ್ ಹೈಕಮಾಂಡ್ ಹೊಂದಿದೆ ಎನ್ನಲಾಗುತ್ತಿದೆ. ಅಗತ್ಯ ಬಿದ್ದಲ್ಲಿ ಕೆಪಿಸಿಸಿ ಅಧ್ಯಕ್ಷ ಅಥವಾ ಕಾರ್ಯಾಧ್ಯಕ್ಷ ಹುದ್ದೆಯನ್ನು ನೀಡುವ ಸಾಧ್ಯತೆಯೂ ಇಲ್ಲದಿಲ್ಲ.

ಪೀಠಾಧಿಪತಿಗಳ ಕೋಪ ತಣ್ಣಗಾಗಿಸಲು ಹೈಕಮಾಂಡ್ ತೆಗೆದುಕೊಂಡ ನಿರ್ಧಾರ :

ವೀರಶೈವ – ಲಿಂಗಾಯತ ಧರ್ಮದ ಹೊರತಾದ ಪೀಠಾಧಿಪತಿಗಳೂ ಪ್ರತ್ಯೇಕ ಧರ್ಮದ ವಿಚಾರದಲ್ಲಿ ವಿರೋಧವನ್ನು ಹೊಂದಿದ್ದರು. ಆದರೆ, ಇದ್ಯಾವುದನ್ನೂ ಲೆಕ್ಕಿಸದೇ ಎಂ ಬಿ ಪಾಟೀಲರು ಹಠ ಹಿಡಿದು ಸಿದ್ದರಾಮಯ್ಯನವರ ಮನವೊಲಿಸಿ, ಬಯಸಿದ್ದನ್ನು ಸಾಧಿಸಿದ್ದರು. ಇದು ನಾಡಿನ ಹಲವು ಸ್ವಾಮೀಜಿಗಳ ಕೆಂಗಣ್ಣಿಗೆ ಕಾರಣವಾಗಿತ್ತು. ಪೀಠಾಧಿಪತಿಗಳ ಕೋಪ ತಣ್ಣಗಾಗಿಸಲು ಹೈಕಮಾಂಡ್ ತೆಗೆದುಕೊಂಡ ನಿರ್ಧಾರವಿದು ಎನ್ನುವ ಮಾತೂ ಚಾಲ್ತಿಯಲ್ಲಿದೆ.

ಸಿದ್ದರಾಮಯ್ಯ ಐಡಿಯಾ ನೀಡದಿರಲಿ :

ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ಎಂ ಬಿ ಪಾಟೀಲರನ್ನು ಸಂಪುಟದಿಂದ ದೂರವಿರಿಸಿ, ಆ ಮೂಲಕ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಯಾವುದೇ ಪಕ್ಷದ ಇಮೇಜಿಗೆ ಧಕ್ಕೆ ತರುವಂತಹ ಐಡಿಯಾವನ್ನು ಸಿದ್ದರಾಮಯ್ಯ ನೀಡದಿರಲಿ ಎನ್ನುವ ಕಾರಣಕ್ಕಾಗಿ ಪಾಟೀಲರಿಗೆ ಸಚಿವಸ್ಥಾನ ನೀಡದೇ ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಕಳುಹಿಸಿದ ಸಂದೇಶವಿದು ಎನ್ನುವ ಮಾತೂ ಕೇಳಿಬರುತ್ತಿದೆ.