Friday, September 20, 2024
ಸುದ್ದಿ

ಒಕ್ಕಲಿಗ ಗೌಡ ಸೇವಾ ಸಂಘದ ಸಹಯೋಗದಲ್ಲಿ ಸಾರ್ವಜನಿಕ ಅಭಿನಂದನ ಕಾರ್ಯಕ್ರಮ ; ‘ಎಲ್ಲರನ್ನೂ ಸಮಾನವಾಗಿ ನೋಡುವ ಗುಣ ಶಾಸಕರದ್ದು’ – ಕಹಳೆ ನ್ಯೂಸ್

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘದ ಸಹಯೋಗದಲ್ಲಿ ಶಾಸಕ ಸಂಜೀವ ಮಠಂದೂರು ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾದ ಎಸ್‌.ಎಲ್‌. ಭೋಜೇಗೌಡ ಅವರಿಗೆ ಸಾರ್ವಜನಿಕ ಅಭಿನಂದನ ಕಾರ್ಯಕ್ರಮ ರವಿವಾರ  ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ, ನಮ್ಮ ಸಮಾಜದ ವ್ಯಕ್ತಿ ಪುತ್ತೂರಿನ ಶಾಸಕರಾಗಿದ್ದಾರೆ. ಅವರು ಪುತ್ತೂರಿನ ಜನತೆಗೆ ಶಾಸಕರು ಆದ ಕಾರಣ ಎಲ್ಲರನ್ನು ಒಂದೇ ದೃಷ್ಟಿಯಿಂದ ನೋಡಬೇಕಾದ ವಿಶೇಷ ಜವಾಬ್ದಾರಿ ಅವರಲ್ಲಿದೆ. ಸಣ್ಣ ಪುಟ್ಟ ವ್ಯತ್ಯಾಸ ಆದರೆ ಅವರು ನಮ್ಮ ಮನೆ ಹುಡುಗ ಎಂದು ನೇರವಾಗಿ ಸಂಪರ್ಕಿಸಬೇಕು. ಮಠಂದೂರು, ಭೋಜೇಗೌಡರಿಗೆ ರಾಜಕೀಯ ಹೊಸತಲ್ಲ. ಒತ್ತಡದಿಂದ ವ್ಯತ್ಯಾಸಗಳಾದರೆ ಸರಿಪಡಿಸಿ ಕೊಳ್ಳಬೇಕು. ಅದು ಸಮುದಾಯದ ಜವಾಬ್ದಾರಿ ಆಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೆಚ್ಚುವಂತೆ ಕೆಲಸ ಮಾಡಿ
ಶ್ರೀ ಆದಿಚುಂಚನಗಿರಿ ಮಠದ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿ, ದೈವ ಬಲ, ಗುರು ಬಲ ಇದ್ದಲ್ಲಿ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಭೋಜೇಗೌಡರು ಮತ್ತು ಸಂಜೀವ ಮಠಂದೂರು ಉದಾಹರಣೆ ಎಂದರು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಶಿಷ್ಟ ಶಕ್ತಿ, ಸಾಮರ್ಥ್ಯ ಇರುತ್ತದೆ. ಅದನ್ನು ಜನ ಹಾಗೂ ಜಗತ್ತು ಮೆಚ್ಚುವಂತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜಾಹೀರಾತು

ಮನೆಯ ಮಗ
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಇವ ನಮ್ಮವ, ನಮ್ಮ ಮನೆಯ ಮಗ ಎಂದು ಸ್ವೀಕಾರ ಮಾಡಿದ ಕಾರಣ ಇನ್ನಷ್ಟು ಹುಮ್ಮಸ್ಸಿನಿಂದ ಜನರ ಸೇವೆ ಮಾಡಲು ಪ್ರೇರಣೆ ಕೊಟ್ಟಿದೆ. ಮಂಗಳೂರು, ವಿಟ್ಲ, ಬೆಳ್ತಂಗಡಿ, ಸುಳ್ಯದ ಗೌಡ ಸಮಾಜ ಸಾಕಷ್ಟು ಶ್ರಮಿಸಿದೆ. ಸಮಾಜದ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದ ಭೋಜೇಗೌಡ ಮಾತನಾಡಿ, ಅಧಿಕಾರ ಶಾಶ್ವತ ಅಲ್ಲ. ಅಧಿಕಾರದ ಅವಧಿಯಲ್ಲಿ ಮಾಡಿದ ಕೆಲಸ ಮಾತ್ರ ಮುಖ್ಯ. ಈ ನಿಟ್ಟಿನಲ್ಲಿ ಸಮಾಜಮುಖೀಯಾಗಿ ಕೆಲಸ ಮಾಡುವ ಚಿಂತನೆ ಇದೆ ಎಂದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಮೋಹನ್‌ ಗೌಡ ಇಡ್ಯಡ್ಕ, ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಸಂಘದ ಮಾಜಿ ಅಧ್ಯಕ್ಷರಾದ ಗಂಗಾಧರ ಗೌಡ ಕೆಮ್ಮಾರ, ಕೆ.ಆರ್‌. ಲಕ್ಷ್ಮಣ ಗೌಡ ಕುಂಟಿಕಾನ, ನ್ಯಾಯವಾದಿ ಚಂದ್ರಶೇಖರ್‌ ಮುಂಗ್ಲಿಮನೆ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಗೌಡ ನಂದಿಲ, ಮಹಿಳಾ ಗೌಡ ಸಂಘದ ಅಧ್ಯಕ್ಷೆ ಯಶೋದಾ, ಪ್ರಧಾನ ಕಾರ್ಯದರ್ಶಿ ಜಯಂತಿ ಆರ್‌. ಗೌಡ, ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಅಧ್ಯಕ್ಷ ಎ.ವಿ. ನಾರಾಯಣ, ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್‌ ಎ.ಎಂ. ಉಪಸ್ಥಿತರಿದ್ದರು.

ಗೌರಿ ಎಚ್‌., ಮಹಿಳಾ ಸಂಘದ ಸಲಹೆಗಾರ ಅಶಾ ತಿಮ್ಮಪ್ಪ ಗೌಡ, ಉಷಾ ನಾರಾಯಣ ಪ್ರಾರ್ಥಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಮನೋಹರ್‌ ಕೆ.ವಿ. ವಂದಿಸಿದರು. ಯುವ ಒಕ್ಕಲಿಗ ಗೌಡ ಸೇವಾ ಸಂಘದ ಉದಯ ಕುಮಾರ್‌, ಉಪನ್ಯಾಸಕ ಶ್ರೀಧರ್‌ ಗೌಡ ಮತ್ತು ವಸಂತ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು.