Friday, September 20, 2024
ಸುದ್ದಿ

ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರ ಅಲ್ಲ,ಇದು ನಮ್ಮ ಜವಾಬ್ದಾರಿ ; ಅಂಬಿಕಾ ವಿದ್ಯಾಲಯದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆದರ್ಶ ಗೋಖಲೆ – ಕಹಳೆ ನ್ಯೂಸ್

ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರ ಅಲ್ಲ; ಇದು ನಮ್ಮ ಜವಾಬ್ದಾರಿ. ಶತ ಶತಮಾನಗಳ ಕಾಲ ‘ನಾನು ನಶ್ವರ, ದೇಶ ಶಾಶ್ವತ’ ಎಂಬ ದೇಶಾಭಿಮಾನದಿಂದ ತಮ್ಮೆಲ್ಲಾ ಸುಖ ಭೋಗಗಳನ್ನು ತ್ಯಜಿಸಿ ದೇಶದ ಸ್ವಾತಂತ್ರ್ಯಕ್ಕೋಸ್ಕರ ಬಲಿದಾನ ಮಾಡಿದ ದೇಶಭಕ್ತ ಹೋರಾಟಗಾರರನ್ನೆಲ್ಲ ಸ್ಮರಿಸಿ ಅವರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಬಾಳುವುದು ನಮ್ಮೆಲ್ಲರ ಮಹತ್ತರ ಜವಾಬ್ದಾರಿ ಎಂದು ನಾರಾಯಣ ಗುರು ಸ್ವಾಮಿ ಸಭಾಭವನದಲ್ಲಿ ನಡೆದ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಯುವ ವಾಗ್ಮಿ, ಗಣಿತ ಉಪನ್ಯಾಸಕ ಆದರ್ಶ ಗೋಖಲೆಯವರು ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮದ ಬೀಜವನ್ನು ಬಿತ್ತಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಲ್ ಪಾಂಡೆ, ವೀರ ಸಾವರ್ಕರ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ರಾಮಪ್ರಸಾದ್ ಬಿಸ್ಮಿಲ್ ಅವರ ಬಲಿದಾನವನ್ನು ಸ್ಮರಿಸಿಕೊಂಡರು. ವೀರ ಮಂಗಲ್ ಪಾಂಡೆಯ ಹೋರಾಟವನ್ನು ಸಾಕ್ಷ್ಯಚಿತ್ರದ ಮೂಲಕ ನಿರೂಪಿಸಲಾಯಿತು.

ಜಾಹೀರಾತು


ಈ ಸಮಾರಂಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಯೋಧರನ್ನು ಶಾಲು ಹೊದಿಸಿ ಸ್ಮರಣಿಕೆಗಳನ್ನು ನೀಡಿ ಗೌರವಿಸುವ ಕಾರ್ಯಕ್ರಮ ರೋಮಾಂಚನವಾಗಿತ್ತು. ಸನ್ಮಾನಿತ ಯೋಧರ ಪರವಾಗಿ ಶ್ರೀ ಸುರೇಶ್ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಹೇಳಿ ಹರಸಿದರು. ಆಡಳಿತ ಮಂಡಳಿಯ ಸದಸ್ಯ ಶ್ರೀ ಸುರೇಶ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಎಪ್ಪತ್ತೆರಡನೇ ಸ್ವಾತಂತ್ರ್ಯ ಸಂಭ್ರಮದ ಶುಭಾಶಯ ಸಾರಿದರು.

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಂತಹ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಿದರು. ವಿಜೇತರ ಪಟ್ಟಿಯನ್ನು ಉಪನ್ಯಾಸಕಿ ಗೀತಾ ಹಾಗೂ ಉಪನ್ಯಾಸಕ ಶ್ರೀ ದುರ್ಗಾಪರಮೇಶ್ವರ್ ವಾಚಿಸಿದರು. .
ಸಂಸ್ಥೆಯ ಸಂಚಾಲಕ ಶ್ರೀ ಸುಬ್ರಹ್ಮಣ್ಯ ನಟ್ಟೋಜರು, ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ ಇದರ ಪ್ರಚಾರ್ಯೆ ಶ್ರೀಮತಿ ರಾಜಶ್ರೀ ನಟ್ಟೋಜ, ವಸತಿಯುತ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಶ್ರೀ ಶಂಕರ ನಾರಾಯಣ ಭಟ್, ಅಂಬಿಕಾ ಬಾಲ ವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ಸುಜನಿ ಬೋರ್ಕರ್, ಶ್ರೀ ವೆಂಕಟೇಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಮುಂಜಾನೆ 7:30ಕ್ಕೆ ಧ್ವಜಾರೋಹಣದ ನಂತರ ವಿದ್ಯಾರ್ಥಿಗಳು ಪ್ರತಿವರ್ಷದಂತೆ ಘೋಷಣೆ ಕೂಗುತ್ತಾ ಪೇಟೆ ಬೀದಿಯಲ್ಲಿ ಮೆರವಣಿಗೆ ಸಾಗುತ್ತಾ ಕಿಲ್ಲೆ ಮೈದಾನದಲ್ಲಿ ನಡೆದ ಸಾರ್ವಜನಿಕ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡರು.

ವಿದ್ಯಾರ್ಥಿನಿ ಸಾಯಿಲಕ್ಷ್ಮಿ ಹಾಗೂ ಬಳಗದವರು ಪ್ರಾರ್ಥಿಸಿದರು. ವಿದ್ಯಾರ್ಥಿ ನಾಯಕ ಧೀರಜ್ ಸ್ವಾಗತಿಸಿ ಅಂಬಿಕಾ ವಸತಿಯುತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕಿ ಗೌತಮಿ ವಂದಿಸಿದರು.