Friday, September 20, 2024
ಸುದ್ದಿ

Breaking News : ಹಿಂದೂ ಭಾವನೆಗಳಿಗೆ ಧಕ್ಕೆ ; ಪ್ರಕಾಶ್ ರೈ ವಿರುದ್ಧ ಎಫ್‍ಐಆರ್ ದಾಖಲು – ಕಹಳೆ ನ್ಯೂಸ್

ಬೆಂಗಳೂರು: ಗೋವಿಗೆ ಅವಮಾನ ಮಾಡುವ ಮೂಲಕ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕೆ ನಟ ಪ್ರಕಾಶ್ ರೈ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಮೇ 8 ರಂದು ವಕೀಲ ಕಿರಣ್ ಎಂಬವರು ಪ್ರಕಾಶ್ ರೈ ವಿರುದ್ಧ ಹನುಮಂತನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿರಲಿಲ್ಲ. ಪೊಲೀಸರ ಕ್ರಮವನ್ನು ಪ್ರಶ್ನಿಸಿ ಕಿರಣ್ ಅವರು 14ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಪ್ರಕಾಶ್ ರೈ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗ ಪ್ರಕಾಶ್ ರೈ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 295(ಎ)(ಉದೇಶ ಪೂರ್ವಕವಾಗಿ ಮತೀಯ ನಂಬಿಕೆಗೆ ಅಪಮಾನ), 504(ಉದ್ದೇಶಪೂರ್ವಕವಾಗಿ ಶಾಂತಿ ಭಂಗ) ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಜಾಹೀರಾತು

ಪ್ರಕಾಶ್ ರೈ ಹೇಳಿದ್ದು ಏನು?
“ನಿಮಗೆ ಗೋಮೂತ್ರ ಬಿಟ್ಟರೆ ಗೋವಿನ ಬಗ್ಗೆ ಏನೇನೂ ಗೊತ್ತಿಲ್ಲ. ನಿಮ್ಮ ಬಟ್ಟೆ ಒಗೆಯಲು 2 ಲೀಟರ್ ಗೋಮೂತ್ರ ಬೇಕು. ಒಂದು ಕೆ.ಜಿ ಗೋವಿನ ಸೆಗಣಿ ಬೇಕು ಎನ್ನುವುದಷ್ಟೇ ನಿಮಗೆ ಗೊತ್ತು. ಗೋವಿನ ಮೂತ್ರ ಮತ್ತು ಸೆಗಣಿ ಹೊರತಾಗಿ ನಿಮಗೆ ಗೋವಿನ ಬಗ್ಗೆ ಏನೇನೂ ಗೊತ್ತಿಲ್ಲ” ಎಂದು ಪ್ರಕಾಶ್ ರೈ ನೀಡಿರುವ ಹೇಳಿಕೆ ಉದ್ದೇಶಪೂರ್ವಕವಾಗಿ ಹಿಂದೂ ಭಾವನೆ ಘಾಸಿಗೊಳಿಸುವುದಾಗಿದೆ ಎಂದು ಆರೋಪಿಸಿ ವಕೀಲ ಕಿರಣ್ ದೂರು ನೀಡಿದ್ದರು.

ಈ ಹಿಂದೆ ಶಿರಸಿಯಲ್ಲಿ ಪ್ರಕಾಶ್ ರೈ ಕೋಮು ಸೌಹಾರ್ದ ಕಾರ್ಯಕ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮ ಮುಗಿದ ಬಳಿಕ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಟ ಪ್ರಕಾಶ್ ರಾಜ್ ಭಾಗವಹಿಸಿದ್ದ ವೇದಿಕೆಯನ್ನು ಗೋ ಮೂತ್ರ ಸಿಂಪಡಿಸಿ ಸ್ವಚ್ಛಗೊಳಿಸಿದ್ದರು. ಈ ವಿಚಾರ ಸುದ್ದಿಯಾದ ಬಳಿಕ ಪ್ರಕಾಶ್ ರೈ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ ನಾನು ಹೋದಲೆಲ್ಲಾ ಗೋ ಮೂತ್ರ ಸಿಂಪಡಿಸಿ ಸ್ವಚ್ಛಗೊಳಿಸುತ್ತೀರಾ ಎಂದು ಪ್ರಶ್ನಿಸಿ ಬಳಿಕ ಗೋವಿನ ಬಗ್ಗೆ ತಮ್ಮ ಹೇಳಿಕೆಯನ್ನು ನೀಡಿದ್ದರು.