Recent Posts

Saturday, September 21, 2024
ಸುದ್ದಿ

ಧಾರ್ಮಿಕ ಉತ್ಸವಗಳಲ್ಲಿ ನಡೆಯುವ ಅಯೋಗ್ಯ ಕೃತಿಗಳನ್ನು ತಡೆಯುವಂತೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿ – ಕಹಳೆ ನ್ಯೂಸ್

ಪುತ್ತೂರು : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪುತ್ತೂರು ಸಹಾಯಕ ಕಮಿಷನರ್ ಕಛೇರಿಗೆ ಧಾರ್ಮಿಕ ಉತ್ಸವಗಳಲ್ಲಿ ನಡೆಯುವ ಅಯೋಗ್ಯ ಕೃತಿಗಳನ್ನು ತಡೆಯುವ ಬಗ್ಗೆ ಮನವಿ ಸಲ್ಲಿಸಲಾಯಿತು. ಲೋಕಮಾನ್ಯ ಬಾಲಗಂಗಾಧರನಾಥ ತಿಲಕರವರು ಲೋಕ ಕಲ್ಯಾಣ, ಧರ್ಮಜಾಗೃತಿ, ಐಕ್ಯತೆ, ರಾಷ್ಟ್ರರಕ್ಷಣೆ, ಪಾಶ್ಚಾತ್ಯರ ಅಂಧಾನುಕರಣೆಯನ್ನು ದೂರ ಮಾಡುವುದು ಮತ್ತು ಸಮಾಜ ಸಹಾಯ ಮಾಡುವುದು ಇವೇ ಮುಂತಾದ ಉದ್ದೇಶವನ್ನು ಸಾಧ್ಯಗೊಳಿಸಲು ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ಪ್ರಾರಂಭಿಸಿದರು.

ಆದರೆ ಕಾಲವು ಬದಲಾದಂತೆ ಉತ್ಸವದ ಮೂಲ ಸ್ವರೂಪಕ್ಕೆ ಧಕ್ಕೆ ಬರುವ ರೀತಿಯಲ್ಲಿ ಗಣೇಶೋತ್ಸವ ಆಚರಣೆ ನಡೆಯುತ್ತಿರುವುದು ಗಮನಕ್ಕೆ ಬರುತ್ತಿದೆ. ಅದರಿಂದಾಗಿ ಸಾರ್ವಜನಿಕರಿಗೂ, ಮಹಿಳೆಯರಿಗೂ, ಮಕ್ಕಳಿಗೂ ಕೂಡ ಅಡಚಣೆ ಆಗುತ್ತಿರುವುದು ಗಮನಕ್ಕೆ ಬರುತ್ತಿದೆ. ಹಾಗಾಗಿ ಹಿಂದೂ ಜನಜಾಗೃತಿ ಸಮಿತಿಯು ದೇಶದೆಲ್ಲೆಡೆ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಜೊತೆ ಸೇರಿ ಆದರ್ಶ ರೀತಿಯಲ್ಲಿ ಗಣೇಶೋತ್ಸವ ಆಚರಿಸಲು ಅಭಿಯಾನವನ್ನು ಮಾಡುತ್ತಿದೆ. ಕರಪತ್ರಗಳು, ಭಿತ್ತಿಪತ್ರಗಳ ಮೂಲಕ ಜನಜಾಗೃತಿ ಮೂಡಿಸುತ್ತಿದೆ. ಉತ್ಸವಗಳಲ್ಲಿನ ತಪ್ಪು ಕೃತಿಗಳು ದೂರವಾಗಿ, ಆದರ್ಶ ರೀತಿಯಲ್ಲಿ ಉತ್ಸವಗಳು ಆಚರಣೆಯಾಗಬೇಕು, ಸಮಾಜದ ಎಲ್ಲಾ ಘಟಕಗಳು ಸಹಭಾಗಿಯಾಗಬೇಕು ಮತ್ತು ಉತ್ಸವದ ಮುಖ್ಯ ಉದ್ದೇಶವು ಸಫಲವಾಗಬೇಕು ಎನ್ನುವುದು ಹಿಂದೂ ಜನಜಾಗೃತಿ ಸಮಿತಿಯ ಉದ್ದೇಶವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ಜನಜಾಗೃತಿ ಸಮಿತಿಯ ಈ ಕಾರ್ಯಕ್ಕೆ ಜಿಲ್ಲಾಡಳಿತವು ಸಹಕರಿಸುವ ಮೂಲಕ ಆದರ್ಶ ರೀತಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ತಾಲೂಕು ಕಛೇರಿಯಿಂದ ಈ ಮುಂದಿನ ಕಾನೂನುಬದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿಯ ಮನವಿಯಲ್ಲಿ ವಿನಂತಿಸಲಾಗಿದೆ.

ಜಾಹೀರಾತು

1. ಉತ್ಸವದ ಹೆಸರಿನಲ್ಲಿ ಒತ್ತಾಯಪೂರ್ವಕ ಚಂದಾವಸೂಲು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದು.
2. ನ್ಯಾಯಾಲಯದ ಆಜ್ಞೆಯಂತೆ ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕಗಳ ಉಪಯೋಗವನ್ನು ತಡೆಯುವುದು.
3. ಮೆರವಣಿಗೆಯ ಸಂದರ್ಭದಲ್ಲಿ ಹುಡುಗರು, ಹುಡುಗಿಯರ ಜೊತೆಗೆ ನರ್ತಿಸುವುದು, ವಾಯುಮಾಲಿನ್ಯ ಮಾಡುವ ಧ್ವನಿವರ್ಧಕ (ಡಿ.ಜೆ)ವನ್ನು ಉಪಯೋಗಿಸುವುದು, ಮಾದಕ ದ್ರವ್ಯ, ಮದ್ಯಪಾನ ಸೇವನೆ ಮತ್ತು ಸಮಯ ಮೀರಿ ಮೆರವಣಿಗೆಯನ್ನು ಮಾಡುವುದು ಮುಂತಾದ ಅಹಿತಕರ ಘಟನೆಗಳನ್ನು ತಡೆಯುವುದು.

ಮನವಿ ನೀಡುವ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ದಯಾನಂದ ಹೆಗ್ಡೆ, ಶ್ರೀ. ಜನಾರ್ದನ ಗೌಡ, ಶ್ರೀ. ಕೃಷ್ಣ ಕುಮಾರ್ ಶರ್ಮ, ಶ್ರೀ. ಹರಿಪ್ರಸಾದ್ ಶೆಟ್ಟಿ, ಶ್ರೀ. ಲೋಕೇಶ, ಶ್ರೀ. ಮಾಧವ ಎಸ್. ರೈ ಕುಂಬ್ರ, ಶ್ರೀ. ಸಾಯಿಪ್ರಸಾದ್ ಬಾಳ್ತಿಲ, ಶ್ರೀ. ಚಂದ್ರಶೇಖರ ಮೊದಲಾದವರು ಉಪಸ್ಥಿತರಿದ್ದರು.