Friday, September 20, 2024
ಸುದ್ದಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಅಭಯ ಗಣಪತಿಗೆ ವಿದ್ಯಾಪ್ರಸನ್ನತೀರ್ಥ ಶ್ರೀಗಳಿಂದ ವಿಶೇಷ ಪೂಜೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಂತೆ ಅಭಯ ಗಣಪತಿ ದೇವಸ್ಥಾನವೂ ಪ್ರಸಿದ್ಧಿ ಪಡೆದಿದೆ. ನೇಪಾಳಿ ಶೈಲಿಯಲ್ಲಿ ಕಟ್ಟಿರುವ ದೇವಸ್ಥಾನದಲ್ಲಿ 21 ಅಡಿ ಎತ್ತರದ ಏಕಶಿಲಾ ಗಣಪತಿ ವಿಗ್ರಹ ಆಕರ್ಷಕವಾಗಿದೆ. ಭಾದ್ರಪದ ಶುಕ್ಲ ಚೌತಿಯಂದು ಈ ಗಣಪತಿಗೆ ವಿಶೇಷ ಪೂಜೆ ಸಲ್ಲುತ್ತದೆ.

ಕುಕ್ಕೆ ಕ್ಷೇತ್ರ ತಲುಪುವ ಕುಮಾರಧಾರಾ – ಕಾಶಿಕಟ್ಟೆ ಮಾರ್ಗಮಧ್ಯೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪಕ್ಕದಲ್ಲೆ ಈ ಅದ್ಭುತ ಗಣಪತಿ ವಿಗ್ರಹವಿದೆ. ಕುಕ್ಕೆಯ ಭಕ್ತರಾದ ಬೆಂಗಳೂರು ಎಚ್‌.ಡಿ. ಕೋಟೆ ಮೂಲದ ಕೃಷ್ಣಮೂರ್ತಿ ಎಂಬವರು 21 ಅಡಿ ಎತ್ತರದ ಈ ವಿಗ್ರಹವನ್ನು 2004ರ ಮೇ 30ರಂದು ಎಚ್‌ಡಿ ಕೋಟೆಯಲ್ಲೇ ಕೆತ್ತಿಸಿದ್ದರು. ಅತ್ಯಾಧುನಿಕ ಯಂತ್ರ ಬಳಸಿ ಹಲವು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ, ಇಲ್ಲಿ ತಂದು ಸ್ಥಾಪಿಸಿದ್ದಾರೆ. ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ವಿಗ್ರಹ ಪ್ರತಿಷ್ಠಾಪನೆ ಕಾರ್ಯ ನೆರವೇರಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಕುಕ್ಕೆ ಕ್ಷೇತ್ರಕ್ಕೆ ಬರುವ ಅಸಂಖ್ಯಾತ ಭಕ್ತರಿಗೆ ಈತ ಅಭಯ ನೀಡುತ್ತಿದ್ದಾನೆ. ಸರ್ವ ಕಷ್ಟ ನಿವಾರಣೆಗೆ, ಕುಜ ದೋಷ ಮತ್ತು ಕೇತು ದೋಷ ಪರಿಹಾರಕ್ಕೆ ಅಭಯ ಗಣಪತಿ ಪ್ರಸಿದ್ಧಿ ಪಡೆದಿದ್ದಾನೆ. ಈ ದೇವಸ್ಥಾನ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಅಧೀನದಲ್ಲಿದೆ. ಮಠದಿಂದಲೇ ಇಲ್ಲಿಗೆ ಅರ್ಚಕರನ್ನು ನಿಯೋಜಿಸಲಾಗಿದೆ. ಚೌತಿಯ ಸಂದರ್ಭದಲ್ಲಿ ಈ ಕ್ಷೇತ್ರ ಇನ್ನಷ್ಟು ಕಂಗೊಳಿಸುತ್ತದೆ.

ಚೌತಿಯ  ವಿಷೇಷ : 
ಭಾದ್ರಪದ ಶುಕ್ಲ ಚೌತಿಯ ದಿನವಾದ ಗುರುವಾರ ಶ್ರೀ ದೇವರಿಗೆ ಗಣಪತಿ ಹೋಮ, ಮಹಾಭಿಷೇಕ, ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ಚೌತಿಯ ಪ್ರಯುಕ್ತ ಈ ಶಿಲಾ ಮೂರ್ತಿಯನ್ನು ಹೂವಿನ ಹಾರಗಳಿಂದ ಸಿಂಗರಿಸಲಾಗುತ್ತಿದೆ.

ಅಗ್ರ ಪೂಜಿತ ಗಣಪ : 
ಭಾದ್ರಪದ ಮಾಸದಲ್ಲಿ ಭವ್ಯವೂ ದಿವ್ಯವೂ ಆದ ಶ್ರೀ ಅಭಯ ಗಣಪತಿಯನ್ನು ಸ್ತುತಿಸಿದಲ್ಲಿ ವಿಘ್ನಗಳು ದೂರವಾಗಿ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತವೆ. ಚೌತಿಯ ದಿನದಂದು ಅಭಯ ಗಣಪತಿ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ನೆರವೇರುವುದು. ಕುಕ್ಕೆಗೆ ಬರುವ ಬಹುತೇಕ ಭಕ್ತರು ಈ ಕ್ಷೇತ್ರಕ್ಕೂ ಭೇಟಿ ನೀಡಿ, ಗಣಪತಿಯ ಅನುಗ್ರಹ ಪಡೆಯುತ್ತಾರೆ.
– ಸುದರ್ಶನ ಜೋಯಿಸ,ದಿವಾನರು, ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ