Friday, September 20, 2024
ಸುದ್ದಿ

ಕೆಥೊಲಿಕ್ ಧರ್ಮ ಪ್ರಾಂತ್ಯದ 14ನೇ ಧರ್ಮಾಧ್ಯಕ್ಷ (ಬಿಷಪ್)ರಾಗಿ ಡಾ.ಪೀಟರ್ ಪಾವ್ಲ್ ಸಲ್ದಾನಾ ; ಭವ್ಯ ಸಮಾರಂಭದಲ್ಲಿ ದೀಕ್ಷೆ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ಕೆಥೊಲಿಕ್ ಧರ್ಮ ಪ್ರಾಂತ್ಯದ 14ನೇ ಧರ್ಮಾಧ್ಯಕ್ಷ (ಬಿಷಪ್)ರಾಗಿ ಡಾ.ಪೀಟರ್ ಪಾವ್ಲ್ ಸಲ್ದಾನಾ ನಗರದ ರೊಜಾರಿಯೊ ಕೆಥೆಡ್ರೆಲ್‌ನಲ್ಲಿ ಶನಿವಾರ ಭವ್ಯ ಸಮಾರಂಭದಲ್ಲಿ ದೀಕ್ಷೆ ಸ್ವೀಕರಿಸಿದರು. ದೇಶದ ವಿವಿಧ ಭಾಗಗಳ 26 ಬಿಷಪರು, 500ಕ್ಕೂ ಅಧಿಕ ಧರ್ಮಗುರುಗಳು, 10 ಸಾವಿರಕ್ಕೂ ಅಧಿಕ ಕ್ರೈಸ್ತರು, ಜನಪ್ರತಿನಿಧಿಗಳು, ಸಾರ್ವಜನಿಕರು ಈ ಐತಿಹಾಸಿಕ ಸಮಾರಂಭವನ್ನು ಸಾಕ್ಷೀಕರಿಸಿದರು.

ಬೆಳಗ್ಗೆ ರೊಜಾರಿಯೊ ಕೆಥೆಡ್ರೆಲ್‌ನಲ್ಲಿ ನಿರ್ಗಮನ ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಮುಂದಾಳತ್ವದಲ್ಲಿ ದೀಕ್ಷೆಯ ಪ್ರಧಾನ ಅಭಿಷೇಕದ ವಿಧಿವಿಧಾನ ನೆರವೇರಿತು. ಬೆಂಗಳೂರು ಮಹಾಧರ್ಮಪ್ರಾಂತ್ಯ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ, ಉಡುಪಿ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ ಉಪಸ್ಥಿತಿಯಲ್ಲಿ ನೂತನ ಬಿಷಪರನ್ನು ಅಭಿಷೇಕಿಸಿ ವಿಧಿಬದ್ಧವಾಗಿ ನಿಯೋಜಿಸುವ ಸಂಪ್ರದಾಯ ನೆರವೇರಿತು.

ಜಾಹೀರಾತು
ಜಾಹೀರಾತು
ಜಾಹೀರಾತು


ಬಳಿಕ ರೊಜಾರಿಯೊ ಮೈದಾನದಲ್ಲಿ ನಿರ್ಮಿಸಿದ್ದ ಪ್ರಧಾನ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಭಾರತದ ಪೋಪ್ ಪ್ರತಿನಿಧಿ (ನುನ್ಸಿಯೊ)ಯ ಕೌನ್ಸಿಲರ್ ಝ್ಹವಿಯರ್.ಡಿ.ಫರ್ನಾಂಡಿಸ್, ರೋಮ್‌ನಿಂದ ಪೋಪ್ ಫ್ರಾನ್ಸಿಸ್ ನೀಡಿದ ಆದೇಶ ಪತ್ರವನ್ನು ಲ್ಯಾಟಿನ್ ಭಾಷೆಯಲ್ಲಿ ವಾಚಿಸಿದರು. ಆದೇಶವನ್ನು ಜೋಸೆಫ್ ಮಾರ್ಟಿಸ್ ಇಂಗ್ಲಿಷ್‌ಗೆ, ವಿಕ್ಟರ್ ಡಿಮೆಲ್ಲೊ ಕೊಂಕಣಿ ಭಾಷೆಗೆ ಅನುವಾದಗೊಳಿಸಿದರು.

ಜಾಹೀರಾತು

ಅಧಿಕಾರ ಹಸ್ತಾಂತರ : ಎಲ್ಲ ಧರ್ಮಗುರುಗಳು ಡಾ.ಪೀಟರ್ ಪಾವ್ಲ್ ಸಲ್ದಾನಾ ಅವರ ಶಿರದ ಮೇಲೆ ಕೈ ಇರಿಸಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶಿರದ ಮೇಲೆ ಬೈಬಲ್ ಇರಿಸಿ ದೇವರ ಆಶೀರ್ವಾದ ಹರಸಿದರು. ನೂತನ ಬಿಷಪರ ಶಿರಕ್ಕೆ ಸಂಸ್ಕಾರದ ತೈಲ ಹಚ್ಚಿ ಆಶೀರ್ವಾದ ನೀಡಲಾಯಿತು. ಬಳಿಕ ಬೈಬಲ್ ಪ್ರತಿ ಮತ್ತು ಶಿರಾಸ್ತ್ರಣ ನೀಡುವ ವಿಧಿ ನೆರವೇರಿತು. ನಿರ್ಗಮನ ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜಾ ಉಂಗುರ ತೊಡಿಸಿ, ಅಧಿಕಾರದ ಸಂಕೇತವಾದ ದಂಡ ಹಸ್ತಾಂತರಿಸಿದ ಬಳಿಕ ಡಾ.ಪೀಟರ್ ಪಾವ್ಲ್ ಸಲ್ದಾನಾ ವಿಧ್ಯುಕ್ತವಾಗಿ ಬಿಷಪ್ ಪೀಠ ಅಲಂಕರಿಸಿದರು. ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ಪ್ರವಚನ ನೀಡಿದರು. ಕ್ರೈಸ್ತರಿಗೆ ಪರಮ ಪ್ರಸಾದ ವಿತರಿಸಲಾಯಿತು. ಡಾ.ಪೀಟರ್ ಪಾವ್ಲ್ ಸಲ್ದಾನಾ ಬಗ್ಗೆ ಡಾ.ರಿಚರ್ಡ್ ಡಿಸೋಜ ಪ್ರಸ್ತುತಪಡಿಸಿದ ಸಾಕ್ಷೃಚಿತ್ರ ಪ್ರದರ್ಶಿಸಲಾಯಿತು. ನೂತನ ಬಿಷಪರು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ರೋಮ್‌ನ ಫೊಂತಿಫಿಕಾಲ್ ಉರ್ಬಾನಿಯಾನಾ ಮಹಾ ವಿದ್ಯಾಲಯ ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜನಪ್ರತಿನಿಧಿಗಳಿಂದ ಅಭಿನಂದನೆ: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಬಿ.ಎಂ.ಾರೂಕ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಮೇಯರ್ ಭಾಸ್ಕರ ಕೆ., ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್, ಮಾಜಿ ಶಾಸಕರಾದ ಯೋಗೀಶ್ ಭಟ್, ಜೆ.ಆರ್.ಲೋಬೋ, ಮೊದೀನ್ ಬಾವಾ, ಅಪರ ಜಿಲ್ಲಾಧಿಕಾರಿ ಕುಮಾರ್, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನೂತನ ಬಿಷಪರಿಗೆ ಅಭಿನಂದನೆ ಸಲ್ಲಿಸಿದರು.

ಶಿಸ್ತುಬದ್ಧ ಕಾರ್ಯಕ್ರಮ: ಬೆಳಗ್ಗೆ 9 ಗಂಟೆಯಿಂದ ಆರಂಭಗೊಂಡ ನೂತನ ಬಿಷಪರ ದೀಕ್ಷೆಯ ಧಾರ್ಮಿಕ ವಿಧಿ ವಿಧಾನ ಮತ್ತು ಅಭಿನಂದನಾ ಸಮಾರಂಭ ಮಧ್ಯಾಹ್ನ 2 ಗಂಟೆವರೆಗೆ ನಡೆಯಿತು. ಸಹಸ್ರಾರು ಜನ ನೆರೆದಿದ್ದು, ಕಾರ್ಯಕ್ರಮ ಶಿಸ್ತುಬದ್ಧವಾಗಿ ನೆರವೇರಿತು. ನೂರಾರು ಸ್ವಯಂಸೇವಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಪಾರ್ಕಿಂಗ್, ಉಪಹಾರ, ಪಾನೀಯ, ಊಟದ ವ್ಯವಸ್ಥೆಯನ್ನು ಸ್ವಯಂ ಸೇವಕರು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಬಿಷಪರ ಸಮಾಗಮ: ಗೋವಾ ಆರ್ಚ್ ಬಿಷಪ್ ಫಿಲಿಪ್ ನೆರಿ ಫೆರಾವೊ, ಕೊಲ್ಕತ್ತಾ ಆರ್ಚ್ ಬಿಷಪ್ ಥಾಮಸ್ ಡಿಸೋಜ, ಕಣ್ಣೂರು ಬಿಷಪ್ ಅಲೆಕ್ಸ್ ವಡಕುಂತಲ, ಕ್ಯಾಲಿಕಟ್ ಬಿಷಪ್ ವರ್ಗೀಸ್ ಚಕ್ಕಲಕಲ, ಗುಲ್ಬರ್ಗಾ ಬಿಷಪ್ ರಾಬರ್ಟ್ ಮಿರಾಂದ, ಮಂಡ್ಯ ಬಿಷಪ್ ಆ್ಯಂಟನಿ ಕರಿಯಿಲ್, ಕಾರವಾರ ಬಿಷಪ್ ಡೆರಿಕ್ ಫರ್ನಾಂಡಿಸ್, ಭದ್ರಾವತಿ ಬಿಷಪ್ ಜೋಸೆಫ್ ಅರುಮಚದತ್, ಚಾಂಡ ಬಿಷಪ್ ಎಫ್ರಿಂ ನರಿಕುಲಂ, ಶಿವಮೊಗ್ಗ ಬಿಷಪ್ ಫ್ರಾನ್ಸಿಸ್ ಸೆರಾವೊ, ಜೈಪುರ ಬಿಷಪ್ ಓಸ್ವಾಲ್ಡ್ ಲೂಯಿಸ್, ಬೆಂಗಳೂರು ಬಿಷಪ್ ಬೆರ್ನಾರ್ಡ್ ಮೊರಾಸ್, ಜಬ್ಬಲ್‌ಪುರ ಬಿಷಪ್ ಜೆರಾಲ್ಡ್ ಅಲ್ಮೇಡಾ, ಸಾಮೆ ಬಿಷಪ್ ರೊಗತ್ ಕಿಮಾರಿಯೊ, ಅನಾನ್‌ಸೊಲ್ ಬಿಷಪ್ ಸಿಪ್ರಿಯನ್ ಮೊನಿಝ್, ಬರೇಲಿ ಬಿಷಪ್ ಇಗ್ನೇಶಿಯಸ್ ಡಿಸೋಜ, ಬೆಳ್ತಂಗಡಿ ಬಿಷಪ್ ಲಾರೆನ್ಸ್ ಮುಕ್ಕುಝಿ, ಅಜ್ಮೇರ್‌ನ ಬಿಷಪ್ ಪೌಲ್ ಥಾಮಸ್ ಡಿಸೋಜ, ಪುತ್ತೂರಿನ ಜೋಸೆಫ್ ಮಾರ್ ಮಕಾರಿಯೊ, ಚಿಕ್ಕಮಗಳೂರಿನ ಬಿಷಪ್ ಟಿ.ಆ್ಯಂಟನಿ ಸ್ವಾಮಿ, ಬಳ್ಳಾರಿಯ ಬಿಷಪ್ ಹೆನ್ರಿ ಡಿಸೋಜ ಭಾಗವಹಿಸಿದ್ದರು